Jaishankar: ಜಾರ್ಜ್ ಸೊರೊಸ್​ಗೆ 4 ಪದಗಳಲ್ಲಿ ಕುಟುಕಿದ ಕೇಂದ್ರ ಸಚಿವ ಜೈಶಂಕರ್

George Soros Attacked: ಅವರಿಚ್ಛೆಯ ವ್ಯಕ್ತಿಗಳು ಗೆದ್ದರೆ ಮಾತ್ರ ಚುನಾವಣೆ ಉತ್ತಮ ಎಂದು ಭಾವಿಸುತ್ತಾರೆ. ಆದರೆ, ಚುನಾವಣೆ ಫಲಿತಾಂಶ ಬೇರೆಯೇ ಬಂದರೆ ಅದು ಪ್ರಜಾತಂತ್ರದ ದೌರ್ಬಲ್ಯವೆಂಬಂತೆ ಅವರಿಗೆ ಬಾಸವಾಗುತ್ತದೆ. ಹೀಗೆಂದು ಜಾರ್ಜ್ ಸೊರೊಸ್ ವಿರುದ್ಧ ಕೇಂದ್ರ ಸಚಿವ ಜೈಶಂಕರ್ ವಾಕ್ ಪ್ರಹಾರ ನಡೆಸಿದ್ದಾರೆ.

Jaishankar: ಜಾರ್ಜ್ ಸೊರೊಸ್​ಗೆ 4 ಪದಗಳಲ್ಲಿ ಕುಟುಕಿದ ಕೇಂದ್ರ ಸಚಿವ ಜೈಶಂಕರ್
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್

Updated on: Feb 18, 2023 | 2:13 PM

ನವದೆಹಲಿ: ಅದಾನಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದ ಜಾರ್ಜ್ ಸೊರೊಸ್ (George Soros) ವಿರುದ್ಧ ಕೇಂದ್ರ ಸರ್ಕಾರದ ಮತ್ತೊಬ್ಬ ಸಚಿವರು ಸಿಡಿಗುಟ್ಟಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದು, ಜಾರ್ಜ್ ಸೊರೊಸ್​ರನ್ನು ಅಪಾಯಕಾರಿ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊನ್ನೆ ಜಾರ್ಜ್ ಸೊರೊಸ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಅದರ ಬೆನ್ನಲ್ಲೇ ಎಸ್ ಜೈಶಂಕರ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಸೊರೊಸ್ ಒಬ್ಬ ವೃದ್ಧ, ಶ್ರೀಮಂತ, ಪೂರ್ವಗ್ರಹ ಪೀಡಿತ ಮತ್ತು ಅಪಾಯಕಾರಿ ವ್ಯಕ್ತಿಯಾಗಿದ್ದಾರೆ. ತಮ್ಮ ಧೋರಣೆಯಂತೆ ಇಡೀ ವಿಶ್ವ ನಡೆಯಬೇಕೆಂದು ಭಾವಿಸುತ್ತಾರೆಎಂದು ವಿದೇಶಾಂಗ ಸಚಿವರು ಕುಟುಕಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ರೈಸಿನಾ ಸಂವಾದಲ್ಲಿ ಅಲ್ಲಿನ ಸಚಿವ ಕ್ರಿಸ್ ಬ್ರೌನ್ ಜೊತೆಗಿನ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಎಸ್ ಜೈಶಂಕರ್, “ಜಾರ್ಜ್ ಸೊರೊಸ್​ರಂಥ ವ್ಯಕ್ತಿಗಳು ಜಾಗತಿಕ ವ್ಯಾಖ್ಯಾನವನ್ನು ಬದಲಿಸಲು ಬಂಡವಾಳ ಹಾಕುತ್ತಾರೆಎಂದು ಆರೋಪಿಸಿದ್ದಾರೆ.

ಅವರಂಥ ಜನರಿಗೆ ಅವರಿಚ್ಛೆಯ ವ್ಯಕ್ತಿಗಳು ಗೆದ್ದರೆ ಮಾತ್ರ ಚುನಾವಣೆ ಉತ್ತಮ ಎಂದು ಭಾವಿಸುತ್ತಾರೆ. ಆದರೆ, ಚುನಾವಣೆ ಫಲಿತಾಂಶ ಬೇರೆಯೇ ಬಂದರೆ ಅದು ಪ್ರಜಾತಂತ್ರದ ದೌರ್ಬಲ್ಯವೆಂಬಂತೆ ಅವರಿಗೆ ಬಾಸವಾಗುತ್ತದೆ. ಸೋಜಿಗದ ಸಂಗತಿ ಎಂದರೆ ಮುಕ್ತ ಸಮಾಜದ ಸೋಗಿನಲ್ಲಿ ಇವೆಲ್ಲವನ್ನೂ ಅವರು ಮಾಡುತ್ತಾರೆಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬಹಳ ಕಠೋರ ವಾಗ್ದಾಳಿಮಾಡಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬರ್ಥದಲ್ಲಿ ಜಾರ್ಜ್ ಸೊರೊಸ್ ಮಾಡಿರುವ ಟೀಕೆಗೆ ಈ ಸಂದರ್ಭದಲ್ಲಿ ಜೈಶಂಕರ್ ತಿರುಗೇಟು ನೀಡಿದ್ದಾರೆ. 140 ಕೋಟಿ ಜನರು ಇರುವ ಈ ದೇಶ ಹೇಗೆ ಮುನ್ನಡೆಯಬೇಕೆಂದು ಮತದಾರರು ನಿರ್ಧರಿಸುತ್ತಾರೆಂಬುದು ಜಾರ್ಜ್ ಸೊರೊಸ್​ಗೆ ಬೇಕಿಲ್ಲ. ಇದು ಚಿಂತೆ ಪಡುವ ಸಂಗತಿ. ವಸಾಹತುಶಾಹಿ ಆಡಳಿತದ ನರಕ ಕಂಡ ದೇಶದ ನಮ್ಮದು. ಹೊರಗಿನವರು ಮಧ್ಯಪ್ರವೇಶಿಸಿದರೆ ಏನು ಅಪಾಯ ಆಗುತ್ತದೆ ಎಂಬುದು ನಮಗೆ ಗೊತ್ತು ಎಂದು ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ.

ಸೊರೊಸ್​ಗೆ ಭಾರತ ಒಂದು ಪ್ರಜಾಪ್ರಭುತ್ವ ದೇಶ ಎಂದು ಒಪ್ಪುತ್ತಾರೆ. ಆದರೆ, ಆ ದೇಶದ ಪ್ರಧಾನಿ ಪ್ರಜಾಪ್ರಭುತ್ವವಾದಿಯಲ್ಲ ಎನ್ನುತ್ತಾರೆ. ಈ ಹಿಂದೆ ಅವರು ಕೋಟ್ಯಂತರ ಭಾರತೀಯ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದೆಲ್ಲವೂ ಸುಳ್ಳೆಂಬುದು ಸಾಬೀತಾಗಿದೆ ಎಂದು ವಿದೇಶಾಂಗ ಸಚಿವರು ಆಸ್ಟ್ರೇಲಿಯಾದಲ್ಲಿ ನಡೆದ ರೈಸಿನಾ ಡೈಲಾಗ್ ವೇಳೆ ಹೇಳಿದ್ದಾರೆ.

ಜಾರ್ಜ್ ಸೊರೊಸ್ ಹೇಳಿದ್ದೇನು?

ಮೊನ್ನೆ ಗುರುವಾರ ಜರ್ಮನಿಯ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫೆರೆನ್ಸ್ ವೇಳೆ ಭಾಷಣ ಮಾಡುತ್ತಿದ್ದ ವೇಳೆ ಉದ್ಯಮಿ ಜಾರ್ಜ್ ಸೊರೊಸ್ ಭಾರತದ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದರು. ಅದಾನಿ ಪ್ರಕರಣದ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆ. ಅದಾನಿ ಹಿನ್ನಡೆಯಿಂದ ಪ್ರಧಾನಿ ದುರ್ಬಲಗೊಳ್ಳಲಿದ್ದಾರೆ. ಅದಾನಿ ಪ್ರಕರಣದಲ್ಲಿ ಪ್ರಧಾನಿಗಳು ದೇಶದ ಸಂಸತ್ತು ಮತ್ತು ವಿದೇಶೀ ಹೂಡಿಕೆದಾರರಿಗೆ ಉತ್ತರ ಕೊಡಬೇಕಾಗುತ್ತದೆ ಎಂದು ಟೀಕಿಸಿದ್ದರು.

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us