AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ವೇಳೆ ಕಾಜಿರಂಗ ನ್ಯಾಷನಲ್ ಪಾರ್ಕ್​ನಲ್ಲಿ ಜೀಪ್ ಸಫಾರಿ; ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮ, ಸದ್ಗುರು ವಾಸುದೇವ್ ವಿರುದ್ಧ ಕೇಸ್ ದಾಖಲು

ಮುಸ್ಸಂಜೆಯ ನಂತರ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ ನಡೆಸಿದ್ದಕ್ಕಾಗಿ ಅಸ್ಸಾಂ ಸಿಎಂ ಮತ್ತು ಸದ್ಗುರು ವಿರುದ್ಧ ಭಾನುವಾರ ಪೊಲೀಸ್ ದೂರು ದಾಖಲಿಸಲಾಗಿದೆ.

ರಾತ್ರಿ ವೇಳೆ ಕಾಜಿರಂಗ ನ್ಯಾಷನಲ್ ಪಾರ್ಕ್​ನಲ್ಲಿ ಜೀಪ್ ಸಫಾರಿ; ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮ, ಸದ್ಗುರು ವಾಸುದೇವ್ ವಿರುದ್ಧ ಕೇಸ್ ದಾಖಲು
ಕಾಜಿರಂಗ ನ್ಯಾಷನಲ್ ಪಾರ್ಕ್​ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಜೀಪ್ ಸಫಾರಿ
TV9 Web
| Edited By: |

Updated on: Sep 26, 2022 | 11:28 AM

Share

ಗುವಾಹಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ರಾತ್ರಿ ವೇಳೆ ಜೀಪ್ ಸಫಾರಿ ಮಾಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ (Himanta Biswa Sarma) ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ವಿರುದ್ಧ ಕೇಸ್ ದಾಖಲಿಸಲಾಗಿದೆ. ಮುಸ್ಸಂಜೆಯ ನಂತರ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ (Jeep Safari) ನಡೆಸಿದ್ದಕ್ಕಾಗಿ ಅಸ್ಸಾಂ ಸಿಎಂ ಮತ್ತು ಸದ್ಗುರು ವಿರುದ್ಧ ಭಾನುವಾರ ಪೊಲೀಸ್ ದೂರು ದಾಖಲಿಸಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರು ಗೋಲಾಘಾಟ್ ಜಿಲ್ಲೆಯ ಬೊಕಾಖಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸ್ಸಂಜೆಯ ನಂತರ ಜೀಪಿನ ಹೆಡ್‌ಲೈಟ್‌ಗಳು ಉರಿಯುತ್ತಿತ್ತು ಎಂದು ನ್ಯಾಷನಲ್ ಪಾರ್ಕ್ ಸಮೀಪದ ಗ್ರಾಮಗಳ ನಿವಾಸಿಗಳು ಆರೋಪಿಸಿದ್ದಾರೆ. ಮುಸ್ಸಂಜೆಯ ನಂತರ ವಾಹನದ ಹೆಡ್‌ಲೈಟ್‌ಗಳನ್ನು ಹೊತ್ತಿಸುವ ಜೀಪ್ ಸಫಾರಿಯು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಉಲ್ಲಂಘನೆಯಾಗಿದೆ ಎಂದು ಉದ್ಯಾನದ ಬಳಿಯ ಮೊರೊಂಗಿಯಾಲ್ ಮತ್ತು ಬಲಿಜನ್ ಆದರ್ಶ್ ಮಾದರಿ ಗ್ರಾಮಗಳ ನಿವಾಸಿಗಳಾದ ಸೋನೇಶ್ವರ ನರಹ್ ಮತ್ತು ಪ್ರಬಿನ್ ಪೆಗು ಅವರ ದೂರಿನಲ್ಲಿ ಆರೋಪಿಸಿದ್ದಾರೆ.

ಸದ್ಗುರು ವಾಸುದೇವ್ ಮತ್ತು ಸಿಎಂ ಹಿಮಂತ್ ಬಿಸ್ವ ಶರ್ಮ ಅವರನ್ನು ಬಂಧಿಸಬೇಕು ಅಥವಾ ಅವರು ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ. ಜೀಪ್ ಸಫಾರಿಯಲ್ಲಿ ಭಾಗಿಯಾದ ಸದ್ಗುರು ಜಗ್ಗಿ ವಾಸುದೇವ್, ಸಿಎಂ ಹಿಮಂತ್ ಬಿಸ್ವ ಶರ್ಮಾ, ರಾಜ್ಯ ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುವಾ ಮತ್ತು ಇತರರನ್ನು ತಕ್ಷಣವೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Jaggi Vasudev: ಕ್ಯಾಮೆರಾ ಆಫ್ ಮಾಡ್ರಿ; ಟಿವಿ ಸಂದರ್ಶನದಲ್ಲಿ ತಾಳ್ಮೆ ಕಳೆದುಕೊಂಡ ಸದ್ಗುರು ಜಗ್ಗಿ ವಾಸುದೇವ್

ಆದರೆ, ತಾವು ಹಾಗೂ ಸದ್ಗುರು ಜಗ್ಗಿ ವಾಸುದೇವ್ ಮತ್ತು ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುವಾ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ರಾತ್ರಿ ಸಫಾರಿಗಾಗಿ ಪ್ರವೇಶಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾನೂನನ್ನು ಉಲ್ಲಂಘಿಸಿರುವ ಆರೋಪಗಳನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಿರಾಕರಿಸಿದ್ದಾರೆ.

ನಾವು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ವನ್ಯಜೀವಿ ಕಾನೂನಿನ ಪ್ರಕಾರ, ರಾತ್ರಿಯೂ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಲು ವಾರ್ಡನ್ ಅನುಮತಿ ನೀಡಬಹುದು. ಯಾವುದೇ ಕಾನೂನು ಜನರು ರಾತ್ರಿಯಲ್ಲಿ ನ್ಯಾಷನಲ್ ಪಾರ್ಕ್ ಪ್ರವೇಶಿಸುವುದನ್ನು ತಡೆಯುವುದಿಲ್ಲ. ಸದ್ಗುರು ಮತ್ತು ಶ್ರೀ ಶ್ರೀ ರವಿಶಂಕರ್ ಅವರು ನಿನ್ನೆ ಆಗಮಿಸಿದ್ದರು ಎಂದು ಸಿಎಂ ಹಿಮಂತ್ ಬಿಸ್ವ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ