ಪೆಟ್ರೋಲ್ ನಳಿಕೆ, ಬಿಲ್​ಗಳಲ್ಲಿ ಎಥೆನಾಲ್ ಶೇಕಡಾವಾರು ಮಾಹಿತಿ ಕಡ್ಡಾಯಕ್ಕೆ ಸುಪ್ರೀಂ ನಕಾರ

ಪೆಟ್ರೋಲ್ ನಳಿಕೆ ಮತ್ತು ಬಿಲ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಕಡ್ಡಾಯವಾಗಿ ನಮೂದಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಗ್ರಾಹಕರ ಮಾಹಿತಿ ಹಕ್ಕಿನ ಪರ ವಾದ ಮಂಡಿಸಿದ್ದರೂ, ಸಂಬಂಧಪಟ್ಟ ಹೈಕೋರ್ಟ್ ಸಂಪರ್ಕಿಸಲು ಸುಪ್ರೀಂ ಸೂಚಿಸಿದೆ. ಎಥೆನಾಲ್ ಮಿಶ್ರಣ E20 ಗುರಿ ಹಾಗೂ ಹಳೆಯ ವಾಹನಗಳ ಎಂಜಿನ್‌ಗಳ ಮೇಲಿನ ಪರಿಣಾಮದ ಬಗ್ಗೆ ಗ್ರಾಹಕರಲ್ಲಿ ಆತಂಕವಿದೆ.

ಪೆಟ್ರೋಲ್ ನಳಿಕೆ, ಬಿಲ್​ಗಳಲ್ಲಿ ಎಥೆನಾಲ್ ಶೇಕಡಾವಾರು ಮಾಹಿತಿ ಕಡ್ಡಾಯಕ್ಕೆ ಸುಪ್ರೀಂ ನಕಾರ
ಪೆಟ್ರೋಲ್

Updated on: Aug 31, 2026 | 2:55 PM

ನವದೆಹಲಿ, ಆಗಸ್ಟ್​ 31: ದೇಶಾದ್ಯಂತ ಪೆಟ್ರೋಲ್(Petrol) ಬಂಕ್‌ಗಳ ಇಂಧನ ವಿತರಣಾ ನಳಿಕೆಗಳ ಮೇಲೆ ಹಾಗೂ ಗ್ರಾಹಕರಿಗೆ ನೀಡುವ ಬಿಲ್‌, ರಶೀದಿಗಳಲ್ಲಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲಾದ ಎಥೆನಾಲ್‌ನ ನಿಖರ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದು, ಅರ್ಜಿದಾರ ವಕೀಲ ಎನ್.ಕೆ. ಗೋಸ್ವಾಮಿ ಅವರಿಗೆ ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿತು.

ನ್ಯಾಯಾಲಯದಲ್ಲಿ ನಡೆದ ರೋಚಕ ವಾದ-ಪ್ರತಿವಾದ
ಗ್ರಾಹಕರ ಮಾಹಿತಿ ಹಕ್ಕು: ವಿಚಾರಣೆ ವೇಳೆ ಪೆಟ್ರೋಲ್ ರಶೀದಿಯನ್ನು ಪ್ರದರ್ಶಿಸಿದ ವಕೀಲ ಗೋಸ್ವಾಮಿ, “ರಶೀದಿಯಲ್ಲಿ ಎಥೆನಾಲ್ ಪ್ರಮಾಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ತಾವು ಹಣ ಕೊಟ್ಟು ಖರೀದಿಸುತ್ತಿರುವ ಇಂಧನದ ನೈಜ ಸಂಯೋಜನೆಯನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ಭಾರತದ ಪ್ರತಿಯೊಬ್ಬ ನಾಗರಿಕನಿಗಿದೆ” ಎಂದು ವಾದಿಸಿದರು.

ಮತ್ತಷ್ಟು ಓದಿ: Petrol, Diesel Price Hike: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ

ಕೇಂದ್ರ ಸರ್ಕಾರದ ಆಕ್ಷೇಪ: ಭಾರತದ ಅಟಾರ್ನಿ ಜನರಲ್ ಈ ಅರ್ಜಿಯ ಸ್ವರೂಪವನ್ನು ತೀವ್ರವಾಗಿ ವಿರೋಧಿಸಿದರು. ಇದನ್ನು ಪ್ರಾಕ್ಸಿ ಅರ್ಜಿ (Proxy Petition) ಎಂದು ಕರೆದ ಅವರು, ಕಳೆದ ವರ್ಷವೂ ಸುಪ್ರೀಂ ಕೋರ್ಟ್ ಇದೇ ರೀತಿಯ ಅರ್ಜಿಯನ್ನು ವಜಾಗೊಳಿಸಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪ್ರಮುಖ ಬೇಡಿಕೆಗಳೇನಾಗಿದ್ದವು?
ನಳಿಕೆ ಮತ್ತು ಬಿಲ್‌ಗಳಲ್ಲಿ ಮುದ್ರಣ: ಪ್ರತಿ ಪೆಟ್ರೋಲ್ ಬಂಕ್‌ನ ನಳಿಕೆಯ ಮೇಲೆ ಮತ್ತು ಬಿಲ್,ಇನ್‌ವಾಯ್ಸ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು.

ಸ್ವತಂತ್ರ ತಜ್ಞರ ಸಮಿತಿ ರಚನೆ: ಪೆಟ್ರೋಲಿಯಂ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಬಿಐಎಸ್ (BIS), ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ, ಎಂಜಿನಿಯರ್‌ಗಳು, ಗ್ರಾಹಕ ಸಂಸ್ಥೆಗಳು ಹಾಗೂ ಪರಿಸರ ತಜ್ಞರನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಿ ಪರಿಶೀಲನೆ ನಡೆಸಬೇಕು.

E20 ಗುರಿ ಮತ್ತು ವಾಹನ ಸವಾರರ ಆತಂಕ: ಭಾರತ ಸರ್ಕಾರವು ಕಚ್ಚಾ ತೈಲ ಆಮದು ಅವಲಂಬನೆ ತಗ್ಗಿಸಲು 2025-26ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ‘E20’ ಗುರಿಯನ್ನು ರಾಷ್ಟ್ರವ್ಯಾಪಿ ವಿಸ್ತರಿಸುತ್ತಿದೆ.

ಎಂಜಿನ್ ಸುರಕ್ಷತೆಯ ಕಾಳಜಿ: ಹಳೆಯ ಮಾದರಿಯ (BS-III ಮತ್ತು BS-IV) ಎಂಜಿನ್‌ಗಳು ಹೆಚ್ಚಿನ ಎಥೆನಾಲ್ ಮಿಶ್ರಣಕ್ಕೆ ಹೊಂದಿಕೊಳ್ಳುವುದಿಲ್ಲ ಹಾಗೂ ಇಂಧನ ಪೈಪ್‌ಗಳು ಮತ್ತು ಕಾರ್ಬ್ಯುರೇಟರ್ ಭಾಗಗಳು ಬೇಗನೆ ಸವೆದು ವಾಹನದ ಮೈಲೇಜ್ ಕಡಿಮೆಯಾಗಬಹುದು ಎಂಬ ಆತಂಕ ವಾಹನ ಮಾಲೀಕರಲ್ಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತಮಗೆ ಬೇಕಾದ ಇಂಧನ ಆಯ್ಕೆ ಮಾಡುವ ಪಾರದರ್ಶಕತೆ ಇರಬೇಕು ಎಂಬ ಕೂಗು ಕೇಳಿಬರುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us