Sidhu Moose Wala Murder: ಗಾಯಕ ಸಿಧು ಮೂಸೆವಾಲಾ ಹತ್ಯೆ; ಕಾರಿನೊಳಗೆ ಹಂತಕದ ಸಂಭ್ರಮಾಚರಣೆಯ ವಿಡಿಯೋ ವೈರಲ್

ಶೂಟರ್‌ಗಳಲ್ಲಿ ಒಬ್ಬನ ಮೊಬೈಲ್ ಫೋನ್‌ನಲ್ಲಿ ಈ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿತ್ತು. ಈ ವೀಡಿಯೊದಲ್ಲಿ ಎಲ್ಲಾ ಐವರು ಆರೋಪಿಗಳು ಕ್ಯಾಮೆರಾವನ್ನು ನೋಡಿ ನಗುತ್ತಿದ್ದಾರೆ.

Sidhu Moose Wala Murder: ಗಾಯಕ ಸಿಧು ಮೂಸೆವಾಲಾ ಹತ್ಯೆ; ಕಾರಿನೊಳಗೆ ಹಂತಕದ ಸಂಭ್ರಮಾಚರಣೆಯ ವಿಡಿಯೋ ವೈರಲ್
ಸಿಧು ಮೂಸೆ ವಾಲಾ
Edited By:

Updated on: Jul 05, 2022 | 11:31 AM

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose wala) ಅವರನ್ನು ಕೊಂದ ಆರೋಪಿಗಳು ಚಲಿಸುತ್ತಿರುವ ಕಾರಿನೊಳಗೆ ತಮ್ಮ ಬಂದೂಕುಗಳನ್ನು ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಐವರು ಆರೋಪಿಗಳಾದ ಅಂಕಿತ್ ಸಿರ್ಸಾ, ಪ್ರಿಯವ್ರತ್, ಕಪಿಲ್, ಸಚಿನ್ ಭಿವಾನಿ ಮತ್ತು ದೀಪಕ್ ಸಿಧು ಮೂಸೆವಾಲಾ ಅವರ ಕೊಲೆ ಮಾಡಿದ ನಂತರ ಪಂಜಾಬಿ ಹಾಡು ಹಾಕಿಕೊಂಡು ಕಾರಿನಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದ್ದಾರೆ.

ಶೂಟರ್‌ಗಳಲ್ಲಿ ಒಬ್ಬನ ಮೊಬೈಲ್ ಫೋನ್‌ನಲ್ಲಿ ಈ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿತ್ತು. ಈ ವೀಡಿಯೊದಲ್ಲಿ ಎಲ್ಲಾ ಐವರು ಆರೋಪಿಗಳು ಕ್ಯಾಮೆರಾವನ್ನು ನೋಡಿ ನಗುತ್ತಿದ್ದಾರೆ. ದೆಹಲಿಯಲ್ಲಿ ಭಾನುವಾರ ತಡರಾತ್ರಿ ಬಂಧಿಸಲಾದ 18 ವರ್ಷದ ಸಿರ್ಸಾ ಎಂಬಾತನ ಫೋನ್ ಸ್ಕ್ಯಾನ್ ಮಾಡಿದಾಗ ಪೊಲೀಸರಿಗೆ ಈ ವಿಡಿಯೋ ಸಿಕ್ಕಿದೆ. ಇದನ್ನು ಆತನ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದನ್ನು ಈಗ ಡಿಲೀಟ್ ಮಾಡಲಾಗಿದೆ.

ದೆಹಲಿ ಪೊಲೀಸರ ವಿಶೇಷ ತಂಡದಿಂದ ಸಿರ್ಸಾ ಮತ್ತು ಭಿವಾನಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದಂತಾಗಿದೆ. ಇಬ್ಬರೂ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಮೈತ್ರಿಗೆ ಸೇರಿದವರು ಎನ್ನಲಾಗಿದೆ.

ಇದನ್ನೂ ಓದಿ: ಪಂಜಾಬಿ ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

ಪೊಲೀಸರ ಪ್ರಕಾರ, ಮೂಸೆವಾಲಾ ಮೇಲೆ ಸಿರ್ಸಾ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದಾನೆ. ಭಿವಾನಿ ನಾಲ್ವರು ಶೂಟರ್‌ಗಳಿಗೆ ಆಶ್ರಯ ನೀಡಿದ್ದ. ಹರಿಯಾಣ ಮೂಲದ ಭಿವಾನಿ ರಾಜಸ್ಥಾನದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶೇಷ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಎಚ್‌ಜಿಎಸ್ ಧಲಿವಾಲ್, ನಮ್ಮ ತಂಡಗಳು ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ದಾಳಿ ನಡೆಸಿವೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮೂಸೆವಾಲಾ ಮೇಲೆ ಗುಂಡು ಹಾರಿಸಿದ ಅಂಕಿತ್‌ನನ್ನು ನಮ್ಮ ತಂಡ ಬಂಧಿಸಿದೆ. ಆತನ ಸಹಚರ ಸಚಿನ್ ಭಿವಾನಿಯನ್ನೂ ಬಂಧಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಪ್ರಮುಖ ಶೂಟರ್​​ಗಳನ್ನು ಬಂಧಿಸಿದ ದೆಹಲಿ ಪೊಲೀಸ್

ಇಬ್ಬರು ಆರೋಪಿಗಳಿಂದ 9 ಎಂಎಂ ಪಿಸ್ತೂಲ್ ಜೊತೆಗೆ 10 ಜೀವಂತ ಕಾಟ್ರಿಡ್ಜ್‌ಗಳು, 30 ಎಂಎಂ ಪಿಸ್ತೂಲ್, ಒಂಬತ್ತು ಜೀವಂತ ಕಾಟ್ರಿಡ್ಜ್‌ಗಳು, ಪಂಜಾಬ್ ಪೊಲೀಸರ ಮೂರು ಪೊಲೀಸ್ ಸಮವಸ್ತ್ರಗಳು ಮತ್ತು ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಡಾಂಗಲ್ ಮತ್ತು ಸಿಮ್ ಕಾರ್ಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.