Sonu Nigam: ಸೋನು ನಿಗಮ್, ತಂಡದ ಮೇಲೆ ಮುಂಬೈಯಲ್ಲಿ ಹಲ್ಲೆ; ವಿಡಿಯೋ ವೈರಲ್

ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಸೋಮವಾರ ರಾತ್ರಿ ಮುಂಬೈಯ ಚೆಂಬೂರು ಎಂಬಲ್ಲಿ ಹಲ್ಲೆ ನಡೆದಿದೆ. ಸಂಗೀತ ಕಾರ್ಯಕ್ರಮವೊಂದರ ಸಂದರ್ಭ ಈ ಘಟನೆ ನಡೆದಿದೆ.

ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಮತ್ತು ತಂಡದವರ ಮೇಲೆ ಹಲ್ಲೆ ಸೋಮವಾರ ರಾತ್ರಿ ಮುಂಬೈಯ (Mumbai) ಚೆಂಬೂರು (Chembur) ಎಂಬಲ್ಲಿ ಹಲ್ಲೆ ನಡೆದಿದೆ. ಸಂಗೀತ ಕಾರ್ಯಕ್ರಮವೊಂದರ ಸಂದರ್ಭ ಘಟನೆ ನಡೆದೆ. ವ್ಯಕ್ತಿಯೊಬ್ಬ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಮಾಡಿ ಅವರನ್ನು ವೇದಿಕೆಯಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ದೃಢಪಡಬೇಕಿದ್ದು, ಪೊಲೀಸರು ನಿಗಮ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಶಿವಸೇನಾದ ಉದ್ಧವ್ ಠಾಕ್ರೆ ಬಣದ ಶಾಸಕ ಪ್ರಕಾಶ್​ ಫರ್ತೆಪೇಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಘಟನೆ ಸಂಬಂಧ ಮುಂಬೈಯ ಚೆಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಚೆಂಬೂರು ಉತ್ಸವದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಶಾಸಕರ ಭೇಟಿಗೆ ಅವಕಾಶ ನೀಡದ್ದಕ್ಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಸೋನು ನಿಗಮ್ ಭದ್ರತಾ ಸಿಬ್ಬಂದಿ, ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೋನು ನಿಗಮ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ‘ಪದ್ಮಶ್ರೀ ಪ್ರಶಸ್ತಿ ಕೊಡೋಕೆ ಈಗ ಸಮಯ ಸಿಕ್ಕಿತೇ?’ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸೋನು ನಿಗಮ್​

ಈ ಮಧ್ಯೆ, ಶಾಸಕ ಪ್ರಕಾಶ್​ ಫರ್ತೆಪೇಕರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ಆ ಸಮಯದಲ್ಲಿ ಅವರ ಅಂಗರಕ್ಷಕರು ಆ ಜನರನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದರು. ಆ ಸಂದರ್ಭ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಪ್ಪಾಗಿ ತಳ್ಳಲಾಯಿತು. ಸೋನು ನಿಗಮ್‌ಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಪ್ರಕಾಶ್​ ಫರ್ತೆಪೇಕರ್ ಮಗನ ಮೇಲೆ ಆರೋಪ

ಪ್ರಕಾಶ್​ ಫರ್ತೆಪೇಕರ್ ಮಗ ವೇದಿಕೆಯಿಂದ ಹೊರಹೋಗುವಂತೆ ಸೋನು ನಿಗಮ್ ಮ್ಯಾನೇಜರ್​ಗೆ ಸೂಚಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಿಗಮ್ ತಂಡದವರು ದೂರಿದ್ದಾರೆ. ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಮೊದಲು ಸೋನು ಅಂಗರಕ್ಷಕ ಹರಿ ಅವರನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದ್ದಾರೆ. ಈ ಸಮಾರಂಭದಲ್ಲಿ ಸೋನು ನಿಗಮ್ ಅವರ ಪುತ್ರ ರಬ್ಬಾನಿ ಖಾನ್ ಕೂಡ ಉಪಸ್ಥಿತರಿದ್ದರು. ಇವರು ಘರ್ಷಣೆ ವೇಳೆ ವೇದಿಕೆಯಿಂದ ಕೆಳಗೆ ಬಿದ್ದರು. ಅವರಿಗೆ ಗಾಯಗಳಾಗಿದ್ದು, ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಯಕರ ತಂಡದವರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 am, Tue, 21 February 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us