
ಪುಣೆ, ಫೆಬ್ರವರಿ 01: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಮೃತಪಟ್ಟ ಬಳಿಕ ಅವರ ಹುದ್ದೆಯನ್ನು ಅಜಿತ್ ಪತ್ನಿ ಸುನೇತ್ರಾ ಪವಾರ್ ವಹಿಸಿಕೊಂಡಿದ್ದಾರೆ. ಈಗ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಪೋಸ್ಟ್ ಮಾಡಿದ್ದಾರೆ. ರಾಜಭವನದ ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸುನೇತ್ರಾ ಪವಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಗೌರವಾನ್ವಿತ ಅಜಿತ್ ಪವಾರ್ ತಮ್ಮ ಜೀವನದುದ್ದಕ್ಕೂ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ದೀನದಲಿತರಿಗಾಗಿ ಬದುಕಿದ್ದರು. ಇಂದು, ಅವರ ಚಿಂತನೆಗಳ ಪರಂಪರೆಯನ್ನು ಮುಂದುವರೆಸಿಕೊಂಡು ಮತ್ತು ‘ಶಿವ-ಶಾಹು-ಫುಲೆ-ಅಂಬೇಡ್ಕರ್’ ಅವರ ಚಿಂತನೆಗಳಿಗೆ ನಿಷ್ಠರಾಗಿ ಉಳಿದು, ಕರ್ತವ್ಯ ಪ್ರಜ್ಞೆಯೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ಸ್ವೀಕರಿಸುವಾಗ ನನ್ನ ಹೃದಯ ಅಕ್ಷರಶಃ ತುಂಬಿ ಬಂತು ಎಂದಿದ್ದಾರೆ.
ದಾದಾ ಅವರ ಅಕಾಲಿಕ ಮರಣವು ನನ್ನ ಹೃದಯಕ್ಕೆ ದುಃಖದ ಪರ್ವತವನ್ನೇ ತಂದೊಡ್ಡಿದ್ದರೂ ಅವರು ನನಗೆ ಕಲಿಸಿದ ನಿಷ್ಠೆ, ಹೋರಾಟದ ಶಕ್ತಿ ಮತ್ತು ಜನರ ಮೇಲಿನ ಬದ್ಧತೆಯೇ ನನ್ನ ನಿಜವಾದ ಬೆಂಬಲ. ಅವರು ಕಂಡ ಕನಸಿನಂತೆ ನ್ಯಾಯಯುತ, ಸಮಾನ ಮತ್ತು ಅಭಿವೃದ್ಧಿ ಹೊಂದಿದ ಮಹಾರಾಷ್ಟ್ರವನ್ನು ರಚಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ.
ಮತ್ತಷ್ಟು ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?
ಈ ಕಷ್ಟದ ಸಮಯದಲ್ಲಿ ಮಹಾರಾಷ್ಟ್ರದ ಜನರು ನೀಡಿದ ಪ್ರೀತಿ ಮತ್ತು ಬೆಂಬಲ ನನ್ನ ಶಕ್ತಿ. ನನ್ನ ನಂಬಿಕೆಯ ಬಲದ ಮೇಲೆ, ದಾದಾ ಅವರ ಚಿಂತನೆಗಳ ಬೆಳಕನ್ನು ಬೆಳಗಿಸುವ ಮೂಲಕ ನಾನು ಹೊಸ ಭರವಸೆಯೊಂದಿಗೆ ಮುಂದುವರೆಯುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಸುನೇತ್ರಾ ಪವಾರ್ ಅವರಿಗೆ ಈಗ ಮಹಾರಾಷ್ಟ್ರ ರಾಜ್ಯದ ಮೂರು ಖಾತೆಗಳಾದ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿಯನ್ನು ನೀಡಲಾಗಿದೆ. ಅಜಿತ್ ಪವಾರ್ ಹೊಂದಿರುವ ಪ್ರಮುಖ ಹಣಕಾಸು ಖಾತೆಯು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಹೋಗಲಿದೆ.
ಬಾರಾಮತಿಯಲ್ಲಿ ಸಭೆ ನಡೆಸಲು ಮುಂಬೈನಿಂದ ಹೊರಟಿದ್ದ ಅಜಿತ್ ಪವಾರ್ ಅವರಿದ್ದ ವಿಮಾನ ಬುಧವಾರ ಬೆಳಗ್ಗೆ ಪತನಗೊಂಡಿತು. ಅಜಿತ್ ಪವಾರ್ ಸೇರಿದಂತೆ ಇತರ ಐದು ಜನರು ವಿಮಾನದಲ್ಲೇ ಸಾವನ್ನಪ್ಪಿದ್ದರು. ಬುಧವಾರ ಬೆಳಗ್ಗೆ 8.30 ಕ್ಕೆ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವಿನ ಸುದ್ದಿ ಹೊರಬಿದ್ದಿತ್ತು. ಅಜಿತ್ ಪವಾರ್ ಅವರ ದೇಹವನ್ನು ಅವರ ವಾಚ್, ಕನ್ನಡಕ ಮತ್ತು ಜಾಕೆಟ್ನಿಂದ ಗುರುತಿಸಲಾಗಿದೆ. ಏತನ್ಮಧ್ಯೆ, ಅಜಿತ್ ಪವಾರ್ ಅವರ ಮರಣದ ನಂತರ, ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ