ದೇಶದಲ್ಲೇ ಮೊದಲು: ಜವಳಿ ವ್ಯಾಪಾರಿಗಳ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ, ಎಲ್ಲಿದೆ? ಏನಿದರ ವೈಶಿಷ್ಟ್ಯ
ಗುಜರಾತ್ನ ಸೂರತ್ನಲ್ಲಿ ದೇಶದ ಮೊದಲ ಜವಳಿ ಪೊಲೀಸ್ ಠಾಣೆ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಜವಳಿ ವ್ಯಾಪಾರಿಗಳ ಸುರಕ್ಷತೆ ಹೆಚ್ಚಿಸಲು, ವಂಚನೆ ಮತ್ತು ಅಪರಾಧಗಳನ್ನು ತಡೆಗಟ್ಟಲು ಇದು ಸಹಕಾರಿ. ಇದರಿಂದ ಪ್ರಕರಣಗಳ ತನಿಖೆ ಸುಲಭವಾಗಿ, ವೇಗವಾಗಿ ನಡೆಯಲಿದ್ದು, ವ್ಯಾಪಾರಿಗಳ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸೂರತ್ನ ಬೃಹತ್ ಜವಳಿ ಮಾರುಕಟ್ಟೆಗೆ ಇದು ಭದ್ರತೆ ಮತ್ತು ನಂಬಿಕಸ್ಥ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸುತ್ತದೆ.

ಸೂರತ್, ಜೂನ್ 18: ಜವಳಿಗೆ ಹೆಸರಾಗಿರುವ ಗುಜರಾತ್ನ ಸೂರತ್ ನಗರದ ಮುಕುಟಕ್ಕೆ ಮತ್ತೊಂದು ಹೊಸ ಗರಿ ಸೇರಲಿದೆ. ಬಹುಕೋಟಿ ಮೌಲ್ಯದ ಜವಳಿ(Textile) ಉದ್ಯಮಕ್ಕೆ ಕಾನೂನು ರಕ್ಷಣೆ ನೀಡಲು ಮತ್ತು ವ್ಯಾಪಾರಿಗಳ ಸುರಕ್ಷತೆಯನ್ನು ಹೆಚ್ಚಿಸಲು, ದೇಶದ ಅತ್ಯಂತ ಮೊದಲ ‘ ಜವಳಿ ಪೊಲೀಸ್ ಠಾಣೆ’ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಸೂರತ್ನ ಜವಳಿ ಮಾರುಕಟ್ಟೆಯ ವ್ಯಾಪಾರಿಗಳು ಬಹಳ ದಿನಗಳಿಂದ ಇಂತಹದೊಂದು ಪ್ರತ್ಯೇಕ ಪೊಲೀಸ್ ಠಾಣೆಗಾಗಿ ಬೇಡಿಕೆ ಇಟ್ಟಿದ್ದರು. ಮುಂದಿನ 1 ರಿಂದ 2 ವರ್ಷಗಳಲ್ಲಿ ಈ ವಿಶೇಷ ಯೋಜನೆಯು ಪೂರ್ಣಗೊಳ್ಳಲಿದೆ. ಸೂರತ್ನ ಸಲಬತ್ಪುರ, ಮಹೀಧರ್ಪುರ, ವರಾಚಾ, ಪೂನಾ ಸೇರಿದಂತೆ ವಿವಿಧ 7 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಜವಳಿ ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ವಂಚನೆ ಮತ್ತು ಅಪರಾಧಗಳ ದೂರುಗಳನ್ನು ಇನ್ಮುಂದೆ ಈ ಒಂದೇ ವಿಶೇಷ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.
ಸದ್ಯಕ್ಕೆ ಜವಳಿ ವಂಚನೆ ಪ್ರಕರಣಗಳು ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗುತ್ತಿರುವುದರಿಂದ, ಒಬ್ಬನೇ ಆರೋಪಿಯ ಹಳೇ ಇತಿಹಾಸವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. ಆದರೆ ಹೊಸ ಠಾಣೆಯಿಂದಾಗಿ ಎಲ್ಲಾ ಆರೋಪಿಗಳ ಸಂಪೂರ್ಣ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರಲಿದ್ದು, ತನಿಖೆ ವೇಗವಾಗಿ ನಡೆಯಲಿದೆ.
ಮತ್ತಷ್ಟು ಓದಿ: ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್: ರೆಡಿಮೇಡ್ ಉಡುಪುಗಳ ಬೆಲೆ ಏರಿಕೆ ಸಾಧ್ಯತೆ
ಈ ಪ್ರತ್ಯೇಕ ಠಾಣೆಯಿಂದಾಗಿ ವ್ಯಾಪಾರಸ್ಥರಿಗೆ ಪದೇ ಪದೇ ಮೋಸ ಮಾಡುವ ವಂಚಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ. ಜೊತೆಗೆ ವ್ಯಾಪಾರಿಗಳ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ. ಜವಳಿ ಉದ್ಯಮಕ್ಕೆ ಸಂಬಂಧಿಸಿದ ಉದ್ಯಮಿಗಳ ಪ್ರಕಾರ, ಸರ್ಕಾರದ ಈ ಮಹತ್ವದ ಹೆಜ್ಜೆಯು ಸೂರತ್ನ ಬೃಹತ್ ಜವಳಿ ಮಾರುಕಟ್ಟೆಯನ್ನು ಮತ್ತಷ್ಟು ಸುರಕ್ಷಿತ, ಸಂಘಟಿತ ಮತ್ತು ನಂಬಿಕಸ್ಥ ವ್ಯಾಪಾರ ಕೇಂದ್ರವನ್ನಾಗಿ ಬದಲಾಯಿಸಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:56 pm, Thu, 18 June 26




