ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

TN CM Vijay's first Cabinet: ನಟ ವಿಜಯ್ ಟಿವಿಕೆ ಪಕ್ಷ ತಮಿಳುನಾಡು ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಿದೆ. ಚೊಚ್ಚಲ ಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿ, ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ 9 ಮಂದಿ ಟಿವಿಕೆ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂಪುಟ ಅನುಭವಿಗಳು, ಯುವಕರು, ತಂತ್ರಜ್ಞರು ಮತ್ತು ವಿವಿಧ ವೃತ್ತಿಪರರನ್ನು ಒಳಗೊಂಡಿದೆ, ತಮಿಳುನಾಡಿನ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು...
ವಿಜಯ್
Image Credit source: PTI

Updated on: May 10, 2026 | 4:38 PM

ಚೆನ್ನೈ, ಮೇ 10: ನಟ ವಿಜಯ್ (TN CM Vijay) ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಅವರ ಟಿವಿಕೆ ಪಕ್ಷ ಭರ್ಜರಿಯಾಗಿ ಗೆದ್ದು, ಸರ್ಕಾರ ಕೂಡ ರಚಿಸಿದೆ. ವಿಜಯ್ ಸಿಎಂ ಆಗಿ ಅಧಿಕಾರ ಪಡೆದಿದ್ದಾರೆ. ಅವರ ಜೊತೆ 9 ಮಂದಿ ಟಿವಿಕೆ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯ್ ಅವರ ಆರಂಭಿಕ ಮಂತ್ರಿಮಂಡಲದಲ್ಲಿ ಅನುಭವ, ಸಾಮರ್ಥ್ಯ, ಉತ್ಸಾಹ ಎಲ್ಲವೂ ಮಿಳಿತಗೊಂಡಿವೆ.

1. ಬಹಳ ಅನುಭವಿ ಕೆಎ ಚೆಂಗೋಟ್ಟೈಯನ್

ಕೆ.ಎ. ಚೆಂಗೋಟ್ಟೈಯನ್ ಅವರು ಸದ್ಯ ವಿಜಯ್ ಮಂತ್ರಿಮಂಡಲದಲ್ಲಿ ಇರುವ ಅತ್ಯಂತ ಅನುಭವಿ ರಾಜಕಾರಣಿ. ಇವರು ಮಾಜಿ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದವರು. ಎಐಎಡಿಎಂಕೆಯ ನಾಯಕರಾಗಿದ್ದವರು. ಹಲವು ಬಾರಿ ಸಚಿವರೂ ಆಗಿದ್ದರು. ಆದರೆ, ಆ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಹಿನ್ನೆಲೆಯಲ್ಲಿ ಟಿವಿಕೆ ಅನ್ನು ಸೇರಿದ್ದರು. ಈಗ ಅವರು ದೊಡ್ಡ ಸಚಿವ ಸ್ಥಾನ ಪಡೆಯುವ ನಿರೀಕ್ಷೆ ಇದೆ.

2. ಟಿವಿಕೆ ಗೆಲುವಿನ ಹಿಂದಿನ ತಂತ್ರಗಾರ ಆಧವ್ ಅರ್ಜುನ

ಟಿವಿಕೆ ಸಂಘಟನೆಯನ್ನು ಗಟ್ಟಿಗೊಳಿಸಲು ಪ್ರಮುಖ ಪಾತ್ರ ವಹಿಸಿದವರು ಆಧವ್ ಅರ್ಜುನ. ಇವರು ಲಾಟರಿ ಬ್ಯುಸಿನೆಸ್​ಮ್ಯಾನ್ ಸಾಂಟಿಯಾಗೊ ಮಾರ್ಟಿನ್ ಅವರ ಅಳಿಯ. ವಿಜಯ್ ಅವರು ನಂಬುವ ತಂತ್ರಗಾರರಲ್ಲಿ ಆಧವ್ ಕೂಡ ಒಬ್ಬರು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

3. ಮಾಜಿ ಬಿಜೆಪಿಗ ನಿರ್ಮಲ್ ಕುಮಾರ್

ಬಿಜೆಪಿಯ ಮಾಜಿ ನಾಯಕ ನಿರ್ಮಲ್ ಕುಮಾರ್ ಅವರು ಮದುರೈನ ತಿರುಪರಂಕುಂಡ್ರಂ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಈಗ ಮಂತ್ರಿ ಸ್ಥಾನ ಗಿಟ್ಟಿಸಿದ್ದಾರೆ. ಟಿವಿಕೆಯ ಜನಪ್ರಿಯ ಮುಖಗಳಲ್ಲಿ ನಿರ್ಮಲ್ ಕುಮಾರ್ ಕೂಡ ಒಬ್ಬರು.

4. ಪ್ರಧಾನ ಕಾರ್ಯದರ್ಶಿ ಎನ್ ಆನಂದ್

ಚೆನ್ನೈನ ಟಿ ನಗರ್ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಈಗ ಮಂತ್ರಿಯಾಗಿರುವ ಎನ್ ಆನಂದ್ ಅಕಾ ಬಸ್ಸಿ ಆನಂದ್ ಅವರು ಪಕ್ಷ ಸಂಘಟನೆಯಲ್ಲಿ ಚತುರರೆನಿಸಿದ್ದಾರೆ. ಟಿವಿಕೆ ಪ್ರಧಾನ ಕಾರ್ಯದರ್ಶಿಯಾಗಿ ಅವರು ಪಕ್ಷವನ್ನು ಬೂತ್ ಮಟ್ಟದಲ್ಲಿ ನೆಲೆಗೊಳಿಸಲು ಮಾಡಿದ್ದ ಪ್ರಯತ್ನ ಯಶಸ್ವಿಯಾಗಿತ್ತು.

5. ವೈದ್ಯ ಮತ್ತು ಮಾಜಿ ಸರ್ಕಾರಿ ಅಧಿಕಾರಿ ಅರುಣ್ ರಾಜ್

ನಾಮಕ್ಕಲ್ ಜಿಲ್ಲೆಯ ತಿರುಚೆಂಗೊಡೆ ಕ್ಷೇತ್ರವನ್ನು ಗೆದ್ದಿರುವ ಕೆ.ಜಿ. ಅರುಣರಾಜ್ ಅವರು ಮೂಲತಃ ವೈದ್ಯರಾಗಿದ್ದಾರೆ. ಹಾಗೆಯೇ, ರಾಜಕೀಯಕ್ಕೆ ಬರುವ ಮುನ್ನ ಐಆರ್​ಎಸ್ ಅಧಿಕಾರಿಯೂ ಆಗಿದ್ದರು. ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತ ಮತ್ತು ಹೆಚ್ಚುವರಿ ಆಯುಕ್ತ ಸ್ಥಾನಗಳನ್ನು ನಿರ್ವಹಿಸುತ್ತಿದ್ದರು.

6. ಸಿನಿಮಾ, ಕಿರುತೆರೆ ನಟ ರಾಜ್ ಮೋಹನ್

ಸಿನಿಮಾ ನಟ ಮತ್ತು ಕಿರುತೆರೆ ನಟರಾದ ರಾಜ್ ಮೋಹನ್ ಅವರಿಗೆ ವಿಜಯ್ ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿದೆ. ಇವರು ಒಳ್ಳೆಯ ವಾಗ್ಮಿ ಎನಿಸಿದ್ದಾರೆ.

7. ವಕೀಲ ಪಿ ವಿಂಕಟರಮಣನ್

ಮೈಲಾಪುರ್ ಕ್ಷೇತ್ರವನ್ನು ಗೆದ್ದಿರುವ ಪಿ ವೆಂಕಟರಮಣನ್ ಅವರು ಸಕ್ರಿಯ ವಕೀಲರಾಗಿರುವವರು. ಅಷ್ಟೇ ಅಲ್ಲ, ವಿಜಯ್ ಅವರ ನಿಷ್ಠಾವಂತರಲ್ಲಿ ಒಬ್ಬರೆನಿಸಿದ್ದಾರೆ. ಕಳೆದ 25 ವರ್ಷಗಳಿಂದಲೂ ಅವರು ವಿಜಯ್​ಗೆ ಮ್ಯಾನೇಜರ್ ಆಗಿದ್ದಾರೆ.

ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

8. ದಂತ ವೈದ್ಯ ಟಿ.ಕೆ. ಪ್ರಭು

ಶಿವಗಂಗಾ ಜಿಲ್ಲೆಯ ಕಾರೈಕ್ಕುಡಿ ಕ್ಷೇತ್ರದ ಶಾಸಕರಾಗಿರುವ ಟಿ.ಕೆ. ಪ್ರಭು ಅವರು ವೃತ್ತಿಯಲ್ಲಿ ದಂತ ವೈದ್ಯರಾಗಿದ್ದವರು.

9. ಕಿರಿಯ ವಯಸ್ಸಿನ ಎಸ್ ಕೀರ್ತನಾ

ವಿರುದನಗರ್ ಜಿಲ್ಲೆಯ ಶಿವಕಾಶಿ ಕ್ಷೇತ್ರದಲ್ಲಿ ಗೆದ್ದಿರುವ ಎಸ್ ಕೀರ್ತನಾ ಅವರು 1996ರಲ್ಲಿ ಜನಿಸಿದವರು. ಇನ್ನೂ 29-30 ವರ್ಷ ವಯಸ್ಸು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us