ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?
Vijay's Entry & Rahul Gandhi's Missed Political Opportunities: ರಾಜಕೀಯವು ಒಂದು ರೀತಿಯ ಚದುರಂಗದಾಟದಂತೆ. ಒಂದು ನಡೆಯು ಪಂದ್ಯ ಸೋಲುವಂತೆ ಮಾಡಬಹುದು, ಅಥವಾ ಗೆಲ್ಲಿಸಬಹುದು. ಆಂಧ್ರ, ಅಸ್ಸಾಮ್ ಮತ್ತು ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡಿದ ಕೆಲ ತಪ್ಪುಗಳು ಆ ರಾಜ್ಯದಲ್ಲಿ ಅಧಿಕಾರ ಮರಳಿ ಬರದಂತೆ ಮಾಡಿವೆ.

ಚೆನ್ನೈ, ಮೇ 10: ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಅತಿದೊಡ್ಡ ಪಕ್ಷವಾಗಿ ಹೊಮ್ಮಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬೆಂಬಲ ಪ್ರಕಟಿಸಲು ಹೆಚ್ಚು ತಡ ಮಾಡಲಿಲ್ಲ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಲೆಕ್ಕಿಸದೆ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿತು. ರಾಹುಲ್ ಗಾಂಧಿ ಈ ಹಿಂದೆ ಮಾಡಿದ ತಪ್ಪನ್ನು ಪುನರಾವರ್ತಿಸಬಾರದು ಎಂದು ನಿರ್ಧರಿಸಿದಂತಿತ್ತು ಈ ಬೆಳವಣಿಗೆ.
ರಾಹುಲ್ ಗಾಂಧಿ 2009ರಲ್ಲಿ ಆ ತಪ್ಪು ಮಾಡಿರದಿದ್ದಿದ್ದರೆ?
ರಾಹುಲ್ ಗಾಂಧಿ 2009ರಲ್ಲಿ ವಿಜಯ್ ವಿಚಾರದಲ್ಲಿ ತಪ್ಪು ನಿರ್ಧಾರ ಮಾಡಿದ್ದು ಇವತ್ತು ಅದು ದುಬಾರಿ ಎನಿಸಿದೆ. 17 ವರ್ಷದ ಹಿಂದೆ ವಿಜಯ್ ಅವರು ಕಾಂಗ್ರೆಸ್ ಪಕ್ಷ ಸೇರಲು ಬಯಸಿದ್ದರು. ಯಾವುದೇ ಹುದ್ದೆ ಅಥವಾ ಟಿಕೆಟ್ ಬೇಡಿಕೆ ಮುಂದಿಡದೆ ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯನಾಗುವುದಾಗಿ ವಿಜಯ್ ಅವರು ಕೇಳಿಕೊಂಡಿದ್ದರು. ಆದರೆ, ಅಂದು ರಾಹುಲ್ ಗಾಂಧಿ ಈ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.
ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್
ವಿಜಯ್ ಅವರಿಗೆ ಕಾಂಗ್ರೆಸ್ ಸೇರಲು ರಾಹುಲ್ ನಿರಾಕರಿಸಲಿಲ್ಲ. ಆದರೆ, ಯುವ ಕಾಂಗ್ರೆಸ್ ಚುನಾವಣೆಗಳಲ್ಲಿ ಸ್ಪರ್ಧಿಸಬೇಕೆಂದು ವಿಜಯ್ಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದರು. ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐನ ಅಂದಿನ ಮುಖ್ಯಸ್ಥ ಹೀಬಿ ಈಡನ್ ಸೇರಿದಂತೆ ಕೆಲ ರಾಷ್ಟ್ರೀಯ ಪದಾಧಿಕಾರಿಗಳನ್ನು ವಿಜಯ್ ಭೇಟಿ ಕೂಡ ಮಾಡಿದ್ದರು. ಆದರೆ, ವಿಜಯ್ ಅದೇಕೋ ಕಾಂಗ್ರೆಸ್ ಸೇರಲು ಹಿಂದೇಟು ಹಾಕಿದ್ದರು.
ವಿಜಯ್ ಅದಾಗಲೇ ಜನಪ್ರಿಯತೆಯ ಉತ್ತುಂಗದಲ್ಲೇ ಇದ್ದರು. ರಾಹುಲ್ ಗಾಂಧಿ ಅಂದೇ ವಿಜಯ್ ಅವರನ್ನು ಮುಕ್ತವಾಗಿ ಬರಮಾಡಿಕೊಂಡಿದ್ದರೆ ಇವತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತೆ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿದ್ದಿರಬಹುದು.
ಅಸ್ಸಾಂ ಮತ್ತು ಆಂಧ್ರದಲ್ಲೂ ಕಾಂಗ್ರೆಸ್ ತಪ್ಪು ಮಾಡಿತ್ತು…
ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಸದ್ಯ ಬಿಜೆಪಿಯ ಬಲಿಷ್ಠ ಸಿಎಂಗಳಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಈ ಹಿಂದೆ ಇವರು ಕಾಂಗ್ರೆಸ್ನಲ್ಲಿದ್ದು ಅಲ್ಲಿಂದ ಬಿಜೆಪಿಗೆ ಬಂದವರು. ಕಾಂಗ್ರೆಸ್ನಲ್ಲಿ ಸರಿಯಾದ ಸ್ಥಾನಮಾನ ಸಿಗದ ಕಾರಣ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ರಾಹುಲ್ ಗಾಂಧಿ ಆಗ ಹಿಮಂತರ ಬದಲು ತರುಣ್ ಗೊಗೋಯ್ ಅವರಿಗೆ ಮಣೆ ಹಾಕಿದರು. ಹಿಮಂತ ಬಿಸ್ವ ಸರ್ಮಾ ಅಂದು ಕಾಂಗ್ರೆಸ್ನಲ್ಲೇ ಇರುತ್ತಿದ್ದರೆ ಇವತ್ತು ಅಸ್ಸಾಮ್ ಕೂಡ ಕೈ ಕೋಟೆಯಾಗುತ್ತಿದ್ದಿರಬಹುದು.
ಇದನ್ನೂ ಓದಿ: ತಮಿಳುನಾಡು ಸಾಲದ ಬಗ್ಗೆ ಆರೋಪಿಸಿದ್ದ ಮುಖ್ಯಮಂತ್ರಿ ವಿಜಯ್ ಮಾತಿಗೆ ಮಾಜಿ ಸಿಎಂ ಸ್ಟಾಲಿನ್ ಆಕ್ರೋಶ
ಆಂಧ್ರದಲ್ಲಿ ಜಗನ್ ವಿಚಾರದಲ್ಲಿ ರಾಹುಲ್ ತಪ್ಪು…
ಅಖಂಡ ಆಂಧ್ರ ಇದ್ದಾಗ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರು ಸಿಎಂ ಆಗಿದ್ದರು. ಅವರು ಕಾಂಗ್ರೆಸ್ ಕಟ್ಟಾಳು. ಅವರು ಅಪಘಾತದಲ್ಲಿ ಮೃತಪಟ್ಟಾಗ ಅವರ ಮಗ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಒಪ್ಪಲಿಲ್ಲ. ವರ್ಷಗಳ ನಂತರ ಜಗನ್ ಅವರು ತಮ್ಮದೇ ಪಕ್ಷ ಸ್ಥಾಪಿಸಿ, ನಂತರ ಚುನಾವಣೆಯಲ್ಲಿ ಗೆದ್ದು ಸಿಎಂ ಕೂಡ ಆದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




