ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ​​ ಪ್ರಯಾಣ

| Updated By: ಸಾಧು ಶ್ರೀನಾಥ್​

Updated on: Dec 09, 2021 | 10:00 AM

Army helicopter Crash: ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ ಮಾಡಿದರು. ಇನ್ನು, ಅಪಘಾತಕ್ಕೀಡಾದಾಗ ಮಂಜು ಕವಿದ ವಾತಾವರಣ ಇರಲಿಲ್ಲ. ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ.

ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ​​ ಪ್ರಯಾಣ
Bipin Rawat Death: ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ
Follow us on

ಊಟಿ: ಅತ್ಯಂತ ಕೆಟ್ಟ ದುರ್ವಿಧಿಯಲ್ಲಿ ದೇಶ ರಕ್ಷಣಾ ಮುಖ್ಯಸ್ಥ ಬಿಪಿನ್​ ರಾವತ್ ಸೇರಿದಂತೆ 12 ಮಂದಿಯನ್ನು ಕಳೆದುಕೊಂಡಿದೆ. ತಮಿಳುನಾಡಿನ ಕುನೂರ್​​ನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್​ ರಾವತ್ (Bipin Rawat) ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಪವಾಡಸದೃಶ ರೀತಿಯಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಆದರೆ ಅಪಘಾತದ ವೇಳೆ ಏನಾಯಿತು ಎಂಬ ಮಾಹಿತಿ ಕಲೆ ಹಾಕಿದಾಗ… ರಾವತ್ ಸಂಚಾರದ ಬಗ್ಗೆ ತಮಿಳುನಾಡು ಪೊಲೀಸರಿಗೂ ಮಾಹಿತಿಯಿತ್ತು. ಬಿಪಿನ್​ ರಾವತ್ ತಂಡಕ್ಕೆ ತಮಿಳುನಾಡು ಪೊಲೀಸರು ಜಡ್ ಪ್ಲಸ್ ಭದ್ರತೆ ನೀಡಿದ್ದರು. ಬಿಪಿನ್​ ರಾವತ್ ತಂಡಕ್ಕೆ ಕೊಯಮತ್ತೂರಿನಿಂದ ರಸ್ತೆ ಮಾರ್ಗವಾಗಿ ಹೋಗಲು ತಮಿಳುನಾಡು ಪೊಲೀಸರಿಂದ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ ಮಾಡಿದರು.

ಇನ್ನು, ಅಪಘಾತಕ್ಕೀಡಾದಾಗ ಮಂಜು ಕವಿದ ವಾತಾವರಣ ಇರಲಿಲ್ಲ. ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ. ಪ್ರತ್ಯಕ್ಷದರ್ಶಿಗಳಿಂದ ಹೆಲಿಕಾಪ್ಟರ್‌ ದುರಂತದ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಲಿಕಾಪ್ಟರ್ ಟರ್ನ್ ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದು ಕಾಪ್ಟರ್ ಪತನವಾಗಿದೆ.

ಬಿಪಿನ್ ರಾವತ್​ಗೆ ತಮಿಳುನಾಡು ಸರ್ಕಾರ ಭಾರೀ ಭದ್ರತೆ ನೀಡಿತ್ತು, ಅವರ ಟಿ.ಪಿ. ಬಗ್ಗೆ ತಮಿಳುನಾಡು ಸರ್ಕಾರಕ್ಕೂ ಮಾಹಿತಿ ಇತ್ತು. ಸೂಲೂರಿನಿಂದ ರಸ್ತೆ ಮಾರ್ಗವಾಗಿ ಜೀರೋ ಟ್ರಾಫಿಕ್​ನಲ್ಲಿ ತೆರಳಲು ಎಲ್ಲಾ ವ್ಯವಸ್ಥೆಯನ್ನ ಮಾಡಿದ್ದರು. ಸೂಲೂರಿನ ಸ್ಥಳೀಯ ಪೊಲಿಸರಿಂದ ಐಜಿಪಿ, ಡಿಜಿಪಿಗೆ ಮಾಹಿತಿ ಇತ್ತು. ತಮಿಳುನಾಡಿನಲ್ಲಿ ಅವರ ಭದ್ರತೆ ಬಗ್ಗೆ ಪೊಲೀಸರು ಸಂಪೂರ್ಣ ನಿಗಾ ವಹಿಸಿದ್ದರು.

ಬಿಪಿನ್ ರಾವತ್ ಹೆಲಿಕಾಪ್ಟರ್​ನಲ್ಲೇ ಹೋಗಲು ನಿರ್ಧಾರಿಸಿದ್ರು. ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣದ ಬಗ್ಗೆ ಈಗ ಚರ್ಚೆಯಾಗ್ತಿದೆ. ಹೆಲಿಕಾಪ್ಟರ್ ಗಾಳಿಯಲ್ಲಿ ಹೆಚ್ಚು ಹೊತ್ತು ಹಾರಾಟ ನಡೆಸಿಲ್ಲ. ಸೂಲೂರಿನಿಂದ ವೆಲ್ಲಿಂಗ್​ಟನ್​ಗೆ 80 ಕಿ.ಮೀ. ದೂರ ಇದೆ. ಸೂಲೂರಿನಿಂದ ಅರ್ಧ ಗಂಟೆಯಲ್ಲಿ ತಲುಪಬಹುದು. 20 ರಿಂದ 25 ನಿಮಿಷ ಮಾತ್ರ ಹೆಲಿಕಾಪ್ಟರ್ ಹಾರಾಡಿದೆ. ಕಡಿಮೆ ಅವಧಿಯಲ್ಲೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿದೆ. ಹೆಲಿಕಾಪ್ಟರ್ ಅಪಘಾತಕ್ಕೆ ನಿಖರ ಕಾರಣ ಪತ್ತೆ ಕಷ್ಟಸಾಧ್ಯವಾದರೂ ಪೈಲಟ್​ನ ವಾಯ್ಸ್ ರೆಕಾರ್ಡ್, ಡಾಟಾ ರೆಕಾರ್ಡ್ ಆಗಿರುತ್ತೆ. ವಾಯುಪಡೆ ರೆಕಾರ್ಡರ್ಸ್​ನನ್ನ ಪತ್ತೆ ಹಚ್ಚಿದ್ರೆ ಕಾರಣ ಪತ್ತೆಯಾಗಬಹುದು.

ಹೆಲಿಕಾಪ್ಟರ್ ಜಾಸ್ತಿ ಎತ್ತರದಲ್ಲಿ ಹಾರಾಟ ನಡೆಸಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳ್ತಿದ್ದಾರೆ. ಕಡಿಮೆ ಮಟ್ಟದಲ್ಲಿ ಹಾರಾಡಿದ್ದು ಅಪಘಾತಕ್ಕೆ ಕಾರಣವಿರಬಹುದು. ನಿನ್ನೆ ಊಟಿ ಬಳಿ ಮಂಜು ಕವಿದ ವಾತಾವರಣವಿರಲಿಲ್ಲ ಎಂದು ಸ್ಥಳೀಯರು ಹೇಳ್ತಿದ್ದಾರೆ.

ಇನ್ನು ಬೇರೆ ದೇಶಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಇರಾಕ್ ದೇಶಗಳಲ್ಲಿ ರಕ್ಷಣಾ ಮುಖ್ಯಸ್ಥರಿಗೆ ನೀಡುವ ಭದ್ರತೆಯನ್ನು ಹೋಲಿಸುವುದಾದರೆ ಯಾವುದೇ ಮಾರ್ಗದಲ್ಲಿ ಸಂಚರಿಸಿದ್ರೂ ಮುಖ್ತಸ್ಥರಿಗೆ ಹೆಚ್ಚಿನ ಭದ್ರತೆ ಇರುತ್ತೆ. ಕೆಲ ದೇಶಗಳಲ್ಲಿ ಮುಖ್ಯಸ್ಥರನ್ನ ಗುರಿಯಾಗಿಸಿ ದಾಳಿಗಳಾಗಿವೆ. ಇರಾನ್​ನ ಜನರಲ್ ಖಸಿಂ ಸುಲೇಮಾನಿಯನ್ನ ಅಮೇರಿಕಾ ಹತ್ಯೆ ಮಾಡಿತ್ತು. ಸುಲೇಮಾನಿಯನ್ನ ಹೊಡೆದುಹಾಕಲು ಟ್ರಂಪ್ ಆದೇಶ ಮಾಡಿದ್ದ. ಡ್ರೋನ್ ಮೂಲಕ ಏರ್ ಸ್ಟ್ರೈಕ್ ಮಾಡಿ ಹತ್ಯೆಗೈಯಲಾಗಿತ್ತು.

ಬಿಪಿನ್ ರಾವತ್ ಸಾವಿನ ಹಿಂದೆ ವಿದೇಶಿ ಕೈವಾಡದ ಶಂಕೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಚೀನಾವನ್ನ ವಿರೋಧಿಸುವ ತೈವಾನ್ ದೇಶದ ಮುಖ್ಯಸ್ಥ ಕೂಡ ಹೆಲಿಕಾಪ್ಟರ್ ಅಫಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುಲೇಮಾನಿಗೂ ಕೂಡ ಹೆಚ್ಚಿನ ಭದ್ರತೆ ಇತ್ತು. ವಿಮಾನ ನಿಲ್ದಾಣದಿಂದ ಹೊರಗೆ ಹೋಗಬೇಕಾದಾಗ ಹತ್ಯೆಯಾಗಿತ್ತು. ಅಮೆರಿಕಾ ಮತ್ತು ಇಂಗ್ಲೆಂಡ್​ನಲ್ಲಿ ವಿಶೇಷ ಪಡೆಗಳೇ ಮುಖ್ಯಸ್ಥರ ರಕ್ಷಣೆ್ಗೆ ಇರುತ್ತವೆ. ಬಿಪಿನ್ ರಾವತ್​ಗೆ ಕೂಡ ಝಡ್ ಪ್ಲಸ್ ಭದ್ರತೆ ನೀಡಲಾಗಿತ್ತು.

ಕ್ಯಾಪ್ಟನ್ ವರುಣ್ ಸಿಂಗ್‌ಗೆ ವೆಲ್ಲಿಂಗ್ಟನ್​​ ಸೇನಾ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ:
ಈ ಮಧ್ಯೆ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ ಅವರಿಗೆ ಕೂನೂರಿನಲ್ಲಿರುವ ವೆಲ್ಲಿಂಗ್ಟನ್​​ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಪೈಲಟ್ ವರುಣ್ ಸಿಂಗ್​ ಅವರಿಗೆ ಶೇ. 80ರಷ್ಟು ಸುಟ್ಟು ಗಾಯಗಳಾಗಿವೆ.

ತಮಿಳುನಾಡಿನ ಕೂನೂರು ಬಳಿ ನಡೆದಿದ್ದ ಹೆಲಿಕಾಪ್ಟರ್ ದುರಂತ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಮಿಳುನಾಡು ಎಫ್‌ಎಸ್‌ಎಲ್ ನಿರ್ದೇಶಕರಾದ ಶ್ರೀನಿವಾಸನ್ ನೇತೃತ್ವದ ತಂಡದಿಂದ ಪರಿಶೀಲನೆ ನಡೆಯಲಿದೆ. ಇದೇ ವೇಳೆ ಏರ್‌ ಚೀಫ್ ಮಾರ್ಷಲ್ V.R.ಚೌಧರಿ ಸಹ ಇಲ್ಲಿಗೆ ಭೇಟಿ ನೀಡಲಿದ್ದು, ದುರಂತದ ತನಿಖೆಯ ನೇತೃತ್ವ ವಹಿಸಲಿದ್ದಾರೆ. Mi-17 ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್‌ಗಾಗಿ ಹುಡುಕಾಟ ನಡೆದಿದೆ.

ಕೊಯಮತ್ತೂರು ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ದೆಹಲಿಗೆ:
ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಪಾರ್ಥಿವ ಶರೀರಗಳನ್ನು ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಇಂದು ಗೌರವ ಸಲ್ಲಿಕೆಯಾಗಲಿದೆ. ಬೆಳಗ್ಗೆ 11.30ಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೌರವ ಸಲ್ಲಿಸಲಿದ್ದಾರೆ. ಗೌರವ ಸಲ್ಲಿಕೆ‌ ನಂತರ 13 ಪಾರ್ಥಿವ ಶರೀರಗಳನ್ನು ಸೇನಾ ಆಸ್ಪತ್ರೆಯಿಂದ ಕೊಯಮತ್ತೂರು ಏರ್‌ಪೋರ್ಟ್‌ಗೆ, ಅಲ್ಲಿಂದ ದೆಹಲಿಗೆ ರವಾನಿಸಲಾಗುವುದು.

Also Read:
CDS Bipin Rawat Death: ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ; ವಿವರ ಇಲ್ಲಿದೆ

Published On - 7:56 am, Thu, 9 December 21