ತೆಲಂಗಾಣ ಅಸೆಂಬ್ಲಿಯಲ್ಲಿ ಕುಸಿದು ಬಿದ್ದು ಐಎಎಸ್ ಅಧಿಕಾರಿ ನವೀನ್ ಅವರ ಆಪ್ತ ಕಾರ್ಯದರ್ಶಿ ಸಾವು: ಸಿಪಿಆರ್ ಮಾಡಿ ಬದುಕಿಸಲು ಯತ್ನಿಸಿದ ಸಚಿವರು

ತೆಲಂಗಾಣ ವಿಧಾನಸಭೆಯಲ್ಲಿ ಐಎಎಸ್ ಅಧಿಕಾರಿಯ ಆಪ್ತ ಕಾರ್ಯದರ್ಶಿ ರಾಜು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಆತಂಕ ಮೂಡಿಸಿದೆ. ಸಚಿವ ವಕಿತಿ ಶ್ರೀಹರಿ ಅವರು ತಕ್ಷಣ ಸಿಪಿಆರ್ ನೀಡಿ ಉಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸಿಪಿಆರ್ ಕುರಿತು ಅರಿವು ಮೂಡಿಸುವುದು ಇಂತಹ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಅತ್ಯಂತ ನಿರ್ಣಾಯಕವಾಗಿದೆ. ಈ ಘಟನೆ ರಾಜಕೀಯ ಸಂಘರ್ಷಗಳ ನಡುವೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ತೆಲಂಗಾಣ ಅಸೆಂಬ್ಲಿಯಲ್ಲಿ ಕುಸಿದು ಬಿದ್ದು ಐಎಎಸ್ ಅಧಿಕಾರಿ ನವೀನ್ ಅವರ ಆಪ್ತ ಕಾರ್ಯದರ್ಶಿ ಸಾವು: ಸಿಪಿಆರ್ ಮಾಡಿ ಬದುಕಿಸಲು ಯತ್ನಿಸಿದ ಸಚಿವರು
ಸಿಪಿಆರ್

Updated on: Sep 08, 2026 | 3:05 PM

ಹೈದರಾಬಾದ್, ಸೆಪ್ಟೆಂಬರ್ 08: ತೆಲಂಗಾಣ ವಿಧಾನಸಭೆ ಆವರಣದಲ್ಲಿ ಮಂಗಳವಾರ ತೀವ್ರ ದುಃಖದ ಘಟನೆಯೊಂದು ನಡೆದಿದ್ದು, ಹಿರಿಯ ಐಎಎಸ್ ಅಧಿಕಾರಿ ನವೀನ್ ಮಿತ್ತಲ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ರಾಜು ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ರಾಜು ಅವರು ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಅಲ್ಲೇ ಇದ್ದ ಸಚಿವ ವಕಿತಿ ಶ್ರೀಹರಿ ತಕ್ಷಣ ಧಾವಿಸಿ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ (CPR) ನೀಡಿ ಬದುಕಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಸೆಂಬ್ಲಿಯಲ್ಲೇ ಹೃದಯಾಘಾತ: ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ಮಿತ್ತಲ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ರಾಜು ಅವರು ಅಧಿಕೃತ ಕಲಾಪಗಳ ಹಿನ್ನೆಲೆಯಲ್ಲಿ ಅಸೆಂಬ್ಲಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದರು.

ಸಚಿವರ ಸಕಾಲಿಕ ಸಿಪಿಆರ್ ಯತ್ನ: ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಚಿವ ವಕಿತಿ ಶ್ರೀಹರಿ ಸ್ವತಃ ಮುಂದಾಗಿ ರಾಜು ಅವರ ಎದೆ ಒತ್ತಿ ಸಿಪಿಆರ್ ನೀಡುವ ಮೂಲಕ ಉಸಿರು ಉಳಿಸಲು ಶ್ರಮಿಸಿದರು. ತಕ್ಷಣ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ವಿಡಿಯೋ

ರಾಜಕೀಯ ಜಟಾಪಟಿ : ಇದೇ ಸಂದರ್ಭದಲ್ಲಿ ವಿಧಾನಸಭೆ ಆವರಣ ಹಾಗೂ ಹೊರಗೆ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ತೀವ್ರ ರಾಜಕೀಯ ಸಂಘರ್ಷ ಭುಗಿಲೆದ್ದಿತು. ಸ್ಪೀಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರಾಜ್ಯದ ಪಾಲಿಗೆ ಬ್ಲ್ಯಾಕ್ ಡೇ ಎಂದು ಕರೆದರು.

ಮತ್ತಷ್ಟು ಓದಿ: ಫಿಲಂ ಚೇಂಬರ್​​ನಲ್ಲೇ ಹೃದಯಾಘಾತ: ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ಬಿಆರ್‌ಎಸ್ ಪ್ರತಿಭಟನೆ, ನಾಯಕರ ವಶ: ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪ್ರತಿಭಟನೆ ನಡೆಸುತ್ತಿದ್ದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಹಾಗೂ ಇಬ್ಬರು ಎಂಎಲ್‌ಸಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಕೆಟಿಆರ್, ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಿಎಂ ಕೆಸಿಆರ್ ನಿವಾಸಕ್ಕೆ ಮುತ್ತಿಗೆ ಹಾಕಲು ಪೊಲೀಸರೇ ನೆರವಾಗುತ್ತಿದ್ದಾರೆ, ಆದರೆ ಬಿಆರ್‌ಎಸ್ ಕಾರ್ಯಕರ್ತರನ್ನು ಅಕ್ರಮವಾಗಿ ತಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಪಿಆರ್ ಮಹತ್ವ : ಹೃದಯವು ಇದ್ದಕ್ಕಿದ್ದಂತೆ ರಕ್ತ ಪಂಪ್ ಮಾಡುವುದನ್ನು ನಿಲ್ಲಿಸಿದಾಗ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಇಂತಹ ಸಮಯದಲ್ಲಿ ಗೋಲ್ಡನ್ ಅವರ್‌ನಲ್ಲಿ (ಮೊದಲ ಕೆಲವು ನಿಮಿಷಗಳಲ್ಲಿ) ನೀಡುವ ಸಿಪಿಆರ್ ಮೆದುಳು ಮತ್ತು ಅಂಗಾಂಗಗಳಿಗೆ ರಕ್ತಸಂಚಾರವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಪಿಆರ್ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಇರುವುದು ಇಂತಹ ಸಂದರ್ಭಗಳಲ್ಲಿ ಅತ್ಯಂತ ನಿರ್ಣಾಯಕ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us