AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udaipur Murder: ಉದಯಪುರ ಹತ್ಯೆ ಪ್ರಕರಣ; ಹಿಂದೂ ಯುವಕನ ಹಂತಕನಿಗೆ ಐಸಿಸ್​ ಲಿಂಕ್?

ಈಗಾಗಲೇ ಹಂತಕರನ್ನು ಹಿಡಿಯಲು ಈ ಪ್ರಕರಣವನ್ನು ಎಸ್​ಐಟಿಗೆ ಹಸ್ತಾಂತರಿಸಲಾಗಿದೆ. ಹಿಂದೂ ಯುವಕನ ತಲೆ ಕತ್ತರಿಸಿ, ಕೊಂದ ಆರೋಪ ರಿಯಾಜ್ ಅಟ್ಟಾರಿ ಐಸಿಸ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

Udaipur Murder: ಉದಯಪುರ ಹತ್ಯೆ ಪ್ರಕರಣ; ಹಿಂದೂ ಯುವಕನ ಹಂತಕನಿಗೆ ಐಸಿಸ್​ ಲಿಂಕ್?
ಉದಯಪುರದ ಟೈಲರ್ ಕೊಲೆ ಆರೋಪಿImage Credit source: News18
TV9 Web
| Updated By: ಸುಷ್ಮಾ ಚಕ್ರೆ|

Updated on:Jun 29, 2022 | 12:46 PM

Share

ಉದಯಪುರ: ರಾಜಸ್ಥಾನದ ಉದಯಪುರ ನಗರದಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಲ್ಲೇ ಟೈಲರ್‌ ಕನ್ನಯ್ಯಲಾಲ್​ ಎಂಬುವವರ ಶಿರಚ್ಛೇದ ಮಾಡಿ, ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಲಾಗಿತ್ತು. ಇದು ದೇಶಾದ್ಯಂತ ಆತಂಕ ಸೃಷ್ಟಿಸಿತ್ತು. ಈ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದ ಮುಸ್ಲಿಂ ಯುವಕರಿಬ್ಬರು ಪ್ರಧಾನಿ ನರೇಂದ್ರ ಮೋದಿಗೂ ಬೆದರಿಕೆ ಹಾಕಿದ್ದರು. ಇದೀಗ ಆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಈಗಾಗಲೇ ಹಂತಕರನ್ನು ಹಿಡಿಯಲು ಈ ಪ್ರಕರಣವನ್ನು ಎಸ್​ಐಟಿಗೆ ಹಸ್ತಾಂತರಿಸಲಾಗಿದೆ. ಹಿಂದೂ ಯುವಕನ ತಲೆ ಕತ್ತರಿಸಿ, ಕೊಂದ ಆರೋಪ ರಿಯಾಜ್ ಅಟ್ಟಾರಿ ಐಸಿಸ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದ್ದು, ಕೊಲೆ ಮಾಡಿ ವಿಡಿಯೋ ಮಾಡಿದ್ದ ರಿಯಾಜ್ ಅಟ್ಟಾರಿ 2021ರಲ್ಲಿ ರಾಜಸ್ಥಾನದ ಟೋಂಕ್ ಪಟ್ಟಣದ ನಿವಾಸಿ ಮುಜೀಬ್ ಅಬ್ಬಾಸಿ ಅವರೊಂದಿಗೆ ಮೂರು ಬಾರಿ ಸಂಪರ್ಕದಲ್ಲಿದ್ದ. ಇತ್ತೀಚೆಗಷ್ಟೇ ಐಸಿಸ್ ಪ್ರಕರಣದಲ್ಲಿ ಆ ಮುಜೀಬ್​ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರತ್ಲಾಮ್‌ನ ಕೆಲವು ವ್ಯಕ್ತಿಗಳನ್ನು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಅವರಲ್ಲಿ ಮುಜೀಬ್ ಕೂ ಒಬ್ಬ ಎನ್ನಲಾಗಿದೆ. ಮೂಲಗಳ ಪ್ರಕಾರ, ರಿಯಾಜ್ ಸ್ವತಃ ಐಸಿಸ್ ಆಪರೇಟಿವ್ ಆಗಿರಬಹುದು. ಏಕೆಂದರೆ ಆತನ ಫೇಸ್‌ಬುಕ್ ಫೋಟೋಗಳಲ್ಲಿ ಆತ ವಿಶ್ವದಾದ್ಯಂತ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರು ಬಳಸುವ ವಿಶಿಷ್ಟವಾದ ಫಿಂಗರ್ ಸಿಗ್ನಲ್ ಅನ್ನು ಬಳಸುವುದನ್ನು ಕಾಣಬಹುದು.

ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ವ್ಯಕ್ತಿಯ ಶಿರಚ್ಛೇದ ಮಾಡಿದ ಹಂತಕರು; ಪ್ರಧಾನಿ ಮೋದಿಗೂ ಬೆದರಿಕೆ

ರಿಯಾಜ್ ಪಾಕಿಸ್ತಾನ ಮೂಲದ ಉಗ್ರಗಾಮಿ ಧಾರ್ಮಿಕ ಗುಂಪಾದ ದಾವತ್-ಎ-ಇಸ್ಲಾಮಿ ಅತರ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನಗಳೂ ವ್ಯಕ್ತವಾಗಿದೆ. ಅದಕ್ಕಾಗಿಯೇ ಅವನು ತನ್ನ ಹೆಸರಿನ ಜೊತೆ ‘ಅಟ್ಟಾರಿ’ ಎಂದು ಸೇರಿಸಿಕೊಂಡಿದ್ದಾನೆ ಎನ್ನಲಾಗಿದೆ. ಗುಪ್ತಚರ ಇಲಾಖೆಗಳು ಆತ ಯಾವ ಸಂಘಟನೆಯೊಂದಿಗೆ ಕೈಜೋಡಿಸಿದ್ದಾನೆ ಎಂಬುದರ ಮಾಹಿತಿ ಕಲೆಹಾಕುತ್ತಿವೆ. ಆತ ಭಾರತದವನೇ ಅಥವಾ ಬೇರೆ ದೇಶದಿಂದ ಬಂದವನೇ ಎಂಬುದನ್ನು ಕೂಡ ತನಿಖೆ ನಡೆಸಲಾಗುತ್ತಿದೆ.

ಏನಿದು ಪ್ರಕರಣ?: ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮ ಅವಮಾನಕಾರಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ವಿಶ್ವಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು. ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಉದಯಪುರದ ವೃತ್ತಿಯಲ್ಲಿ ಟೈಲರ್ ಆಗಿರುವ ಹಿಂದೂ ಯುವಕ ಕನ್ನಯ್ಯ ಲಾಲ್ ತಮ್ಮ ವಾಟ್ಸಾಪ್​ ಸ್ಟೇಟಸ್​​ನಲ್ಲಿ ನೂಪುರ್ ಶರ್ಮ ಅವರ ಫೋಟೋ ಹಾಕಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು.

ತಮಗೆ ಜೀವ ಬೆದರಿಕೆ ಇದೆ ಎಂದು ಕನ್ನಯ್ಯ ಲಾಲ್ ಪೊಲೀಸರಿಗೆ ದೂರು ನೀಡಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ, ಜೀವಭಯದಿಂದ ಅವರು ಕಳೆದ 15-20 ದಿನಗಳಿಂದ ತಮ್ಮ ಟೈಲರ್ ಅಂಗಡಿಯನ್ನು ಬಂದ್ ಮಾಡಿದ್ದರು. ಆದರೆ, ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿದ್ದರಿಂದ ಮತ್ತೆ ಟೈಲರ್ ಅಂಗಡಿ ಬಾಗಿಲು ತೆರೆದಿದ್ದ ಅವರ ಬಳಿ ಬಟ್ಟೆ ಹೊಲಿಯಲು ಅಳತೆ ನೀಡುವ ನೆಪದಲ್ಲಿ ರಿಯಾಜ್ ಮತ್ತು ಆತನ ಸಹಚರ ಬಂದಿದ್ದರು.

ಕನ್ನಯ್ಯ ಲಾಲ್​ಗೆ ಬಟ್ಟೆ ಹೊಲಿಯಲು ಅಳತೆ ನೀಡುವಾಗ ರಿಯಾಜ್ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರ ರುಂಡ ಕತ್ತರಿಸಿದ್ದಾನೆ. ಆಗ ಆತನ ಸಹಾಯಕ ತನ್ನ ಮೊಬೈಲ್‌ನಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಇಬ್ಬರೂ ಆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ಶಿರಚ್ಛೇದನ ಮಾಡಿದ್ದ ಹಂತಕರಿಬ್ಬರು ಅರೆಸ್ಟ್

ರಾಜಸ್ಥಾನದ ಉದಯ್‌ಪುರದಲ್ಲಿ ನೂಪುರ್ ಶರ್ಮಾ ಪರ ಫೋಸ್ಟ್ ಹಾಕಿದ್ದ ಟೈಲರ್‌ನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖಾಧಿಕಾರಿಗಳ ತಂಡವನ್ನು ಉದಯಪುರಕ್ಕೆ ಕಳುಹಿಸಿದೆ. ಈ ಪ್ರಕರಣವನ್ನು ಎಸ್​ಐಟಿಗೆ ವರ್ಗಾಯಿಸಲಾಗಿದೆ.

ಈ ಘಟನೆ ಖಂಡಿಸಿ ಭಾರಿ ಪ್ರತಿಭಟನೆ ಆರಂಭಗೊಂಡಿದೆ. ಉದಯ್‌ಪುರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉದಯ್‌ಪುರದಲ್ಲಿ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ವಿಡಿಯೋ ಹರಿಬಿಟ್ಟರೆ ಅಥವಾ ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಸ್ಥಾನ ಪೊಲೀಸ್ ಎಚ್ಚರಿಕೆ ನೀಡಿದೆ.

Published On - 7:58 am, Wed, 29 June 22