
ಅಲಿಗಢ,ಜುಲೈ 16: ಪ್ರೀತಿ(Love) ಕುರುಡು ಅಂತಾರೆ, ಆದರೆ ಆ ಪ್ರೀತಿಯ ಹುಚ್ಚು ದೇಶದ ಗಡಿಗಳನ್ನೂ ಮೀರಿ ಜೈಲಿನ ಕತ್ತಲ ಕೋಣೆಗೆ ತಳ್ಳಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಅಲಿಗಢದ ವ್ಯಕ್ತಿಯೊಬ್ಬರ ಕಥೆಯೇ ಸಾಕ್ಷಿ. ಫೇಸ್ಬುಕ್ನಲ್ಲಿ ಪರಿಚಯವಾದ ಪಾಕಿಸ್ತಾನಿ ಪ್ರೇಯಸಿಯನ್ನು ಹುಡುಕಿಕೊಂಡು ವೀಸಾ ಇಲ್ಲದೆಯೇ ಅಕ್ರಮವಾಗಿ ಗಡಿ ದಾಟಿದ್ದ ಭಾರತೀಯ ಟೈಲರ್ ಬಾದಲ್ ಬಾಬು, ಸದ್ಯ ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿದ್ದಾರೆ.
ವಿಶೇಷವೆಂದರೆ, ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯ ಅವಧಿ ಈಗಾಗಲೇ ಪೂರ್ಣಗೊಂಡಿದ್ದರೂ ಸಹ, ಉಭಯ ದೇಶಗಳ ನಡುವಿನ ಅಧಿಕೃತ ‘ಸ್ವದೇಶ ವಾಪಸಾತಿ’ ಪ್ರಕ್ರಿಯೆಯ ವಿಳಂಬದಿಂದಾಗಿ ಅವರು ಇಂದಿಗೂ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಫೇಸ್ಬುಕ್ ಸ್ನೇಹ ಪ್ರೇಮವಾಗಿ ಬದಲಾದ ಕಥೆ
ದೆಹಲಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಬಾದಲ್ ಬಾಬು ಅವರಿಗೆ ಫೇಸ್ಬುಕ್ನಲ್ಲಿ ಪಾಕಿಸ್ತಾನದ ಸನಾ ಎಂಬ ಮಹಿಳೆಯ ಪರಿಚಯವಾಗಿತ್ತು. ಆನ್ಲೈನ್ ಸ್ನೇಹ ಕ್ರಮೇಣ ಗಾಢ ಪ್ರೇಮಕ್ಕೆ ತಿರುಗಿತ್ತು. ಪ್ರೇಯಸಿಯನ್ನು ನೋಡಲೇಬೇಕೆಂಬ ಹಠಕ್ಕೆ ಬಿದ್ದ ಬಾದಲ್, 2024 ರ ಆಗಸ್ಟ್ನಲ್ಲಿ ಪಾಕಿಸ್ತಾನಕ್ಕೆ ಹೋಗಲು ಮೊದಲ ಬಾರಿಗೆ ಯತ್ನಿಸಿ ವಿಫಲರಾಗಿದ್ದರು.
ಆದರೆ ಪಟ್ಟುಬಿಡದೆ, ಅಕ್ಟೋಬರ್ 15, 2024 ರಂದು ಮನೆಯಲ್ಲಿದ್ದ ತನ್ನ ಎಲ್ಲಾ ಅಧಿಕೃತ ದಾಖಲೆಗಳನ್ನು ಇಲ್ಲೇ ಬಿಟ್ಟು, ಯಾವುದೇ ವೀಸಾ ಇಲ್ಲದೆ ರಹಸ್ಯವಾಗಿ ಭಾರತ-ಪಾಕಿಸ್ತಾನ ಗಡಿ ದಾಟಿ ಪಾಕಿಸ್ತಾನ ತಲುಪುವಲ್ಲಿ ಯಶಸ್ವಿಯಾಗಿದ್ದರು.
ಪ್ರೇಯಸಿ ಕೈಕೊಟ್ಟಳು, ಮೇಕೆ ಮೇಯಿಸುವಾಗ ಸಿಕ್ಕಿಬಿದ್ದ ಪ್ರೇಮಿ
ಪಾಕಿಸ್ತಾನ ತಲುಪಿದ ಬಾದಲ್ಗೆ ಅಲ್ಲಿ ಕಹಿ ಸತ್ಯ ಎದುರಾಯಿತು. ಸನಾ ಆತನನ್ನು ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಭಗ್ನಪ್ರೇಮಿಯಾದ ಬಾದಲ್ ಮರಳಿ ಭಾರತಕ್ಕೆ ಬಾರದೆ, ಪಾಕಿಸ್ತಾನದಲ್ಲೇ ಉಳಿದುಕೊಂಡು ಸ್ಥಳೀಯ ಉದ್ಯೋಗದಾತರೊಬ್ಬರ ಬಳಿ ಮೇಕೆ ಮೇಯಿಸುವ ಕೆಲಸಕ್ಕೆ ಸೇರಿಕೊಂಡರು.
ಮತ್ತಷ್ಟು ಓದಿ: ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು ಸಿಗಲಿದ್ದಾರೆ ಲೈಫ್ ಪಾರ್ಟ್ನರ್
ಈ ಘಟನೆ ನಡೆದಿದ್ದು ಹೇಗೆ?: 2024ರ ಡಿಸೆಂಬರ್ 27 ರಂದು ಮೇಕೆ ಮೇಯಿಸುತ್ತಿದ್ದಾಗ ಬಾದಲ್ ಮಾತನಾಡುತ್ತಿದ್ದ ಹಿಂದೆ ಅಲ್ಲದ ಭಾರತೀಯ ಉಪಭಾಷೆಯನ್ನು ಕೇಳಿ ಸ್ಥಳೀಯರಿಗೆ ಅನುಮಾನ ಬಂದಿತು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಕ್ರಮ ನುಸುಳುವಿಕೆಯ ಆರೋಪದ ಮೇಲೆ ಪಾಕ್ ಪೊಲೀಸರು ಬಾದಲ್ನನ್ನು ಬಂಧಿಸಿ ಜೈಲಿಗಟ್ಟಿದರು.
ಮಗನ ತಾಯ್ನಾಡಿಗೆ ಕರೆತರಲು ಕುಟುಂಬದ ಕಣ್ಣೀರು
ಸುಮಾರು 20 ತಿಂಗಳುಗಳಿಂದ ಮಗ ಜೈಲಿನಲ್ಲಿರುವುದನ್ನು ಕಂಡು ಅಲಿಗಢದಲ್ಲಿರುವ ಬಾದಲ್ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸುತ್ತಿದ್ದಾರೆ.
ರಾಜತಾಂತ್ರಿಕ ಪ್ರಯತ್ನ: ಅಲಿಗಢದ ಸ್ಥಳೀಯ ಆಡಳಿತವು ಬಾದಲ್ನ ಪೌರತ್ವದ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಿ ಸಚಿವಾಲಯಕ್ಕೆ ಕಳುಹಿಸಿದೆ. ಸ್ಥಳೀಯ ಸಂಸದ ಸತೀಶ್ ಗೌತಮ್ ಅವರು ಕೂಡ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಶೀಘ್ರ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ನೆರವು: ಲಂಡನ್ನಲ್ಲಿರುವ ಭಾರತೀಯ ಮೂಲದ ಮಹಿಳಾ ವಕೀಲರೊಬ್ಬರು ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನದಲ್ಲಿರುವ ಬಾದಲ್ನ ಕಾನೂನು ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ, ಆತನ ಬಿಡುಗಡೆಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಪ್ರೇಮ ಮತ್ತು ಗಡಿ ದಾಟುವ ಕ್ರೇಜ್
ಇತ್ತೀಚಿನ ವರ್ಷಗಳಲ್ಲಿ ಫೇಸ್ಬುಕ್, ಪಬ್ಜಿ (PUBG) ಅಥವಾ ಇನ್ಸ್ಟಾಗ್ರಾಮ್ ಪ್ರೇಮಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ವೀಸಾ ಇಲ್ಲದೆ ಗಡಿ ದಾಟುವ ಪ್ರಕರಣಗಳು ಭಾರಿ ಹೆಚ್ಚಾಗುತ್ತಿವೆ.
ಸೀಮಾ ಹೈದರ್ ಮತ್ತು ಅಂಜು ಪ್ರಕರಣ: ಪಾಕಿಸ್ತಾನದ ಸೀಮಾ ಹೈದರ್ ತನ್ನ ನಾಲಕ್ಕು ಮಕ್ಕಳೊಂದಿಗೆ ಭಾರತದ ಸಚಿನ್ನನ್ನು ಹುಡುಕಿಕೊಂಡು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದರೆ, ಭಾರತದ ಅಂಜು ಎಂಬಾಕೆ ತನ್ನ ಫೇಸ್ಬುಕ್ ಪ್ರೇಮಿ ನಸ್ರುಲ್ಲಾನನ್ನು ಮದುವೆಯಾಗಲು ಅಧಿಕೃತ ವೀಸಾ ಮೂಲಕ ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.
ಇಂತಹ ಪ್ರೇಮ ಕಥೆಗಳು ಕೇಳಲು ರೋಮಾಂಚನಕಾರಿಯಾಗಿದ್ದರೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕಡುವೈರತ್ವ ಹಾಗೂ ರಾಷ್ಟ್ರೀಯ ಭದ್ರತೆಯ ಕಾರಣಗಳಿಂದಾಗಿ ವೀಸಾ ರಹಿತ ನುಸುಳುವಿಕೆಯನ್ನು ಉಭಯ ದೇಶಗಳ ಭದ್ರತಾ ಸಂಸ್ಥೆಗಳು ಬೇಹುಗಾರಿಕೆ ಎಂದೇ ಪರಿಗಣಿಸುತ್ತವೆ. ಹೀಗಾಗಿ ಅತಿರೇಕದ ಪ್ರೇಮದ ಭರದಲ್ಲಿ ಯುವಕರು ಇಂತಹ ಸಾಹಸಕ್ಕೆ ಕೈಹಾಕಿ ತಮ್ಮ ಇಡೀ ಜೀವನವನ್ನು ಜೈಲಿನ ಕತ್ತಲೆಯಲ್ಲಿ ಕಳೆಯುವಂತಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 am, Thu, 16 July 26