ಉತ್ತರ ಪ್ರದೇಶದಲ್ಲಿ ಪ್ರವಾಹ; ಲೈಫ್ ಬೋಟ್​ನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರವಾಹ; ಲೈಫ್ ಬೋಟ್​ನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಲೈಫ್ ಬೋಟ್​ನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

Updated on: Jul 10, 2024 | 7:59 PM

ಲಖೀಂಪುರ: ಉತ್ತರ ಪ್ರದೇಶದಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಿಲಿಭಿತ್ ಮತ್ತು ಲಖಿಂಪುರ ಖೇರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಂದು (ಬುಧವಾರ) ವೈಮಾನಿಕ ಸಮೀಕ್ಷೆ ನಡೆಸಿದರು. ವೈಮಾನಿಕ ಸಮೀಕ್ಷೆಯ ನಂತರ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಸಿಎಂ ಯೋಗಿ ಆದಿತ್ಯನಾಥ್ ಲೈಫ್ ಬೋಟ್‌ನಲ್ಲಿ ಪ್ರಯಾಣ ಬೆಳೆಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿ ಅದರ ವೇಗ ಹೆಚ್ಚಿಸಲು ಆದೇಶಿಸಿದರು. ನಂತರ ಸಂತ್ರಸ್ತ ಜನರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಇದೇ ವೇಳೆ ಅವರೇ ಸ್ವತಃ ಜನರಿಂದ ಅರ್ಜಿ ಸ್ವೀಕರಿಸಿ ಪರಿಹಾರ ಸಾಮಗ್ರಿ ವಿತರಿಸಿದ್ದಾರೆ. ಇದಾದ ಬಳಿಕ ಪ್ರವಾಹ ಪೀಡಿತ ಬಡಾವಣೆಗೆ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿದ್ದಾರೆ.

ಇದನ್ನೂ ಓದಿ: Assam Flood: ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ವ್ಯಕ್ತಿ

ಪರಿಶೀಲನೆ ವೇಳೆ ಉಭಯ ಜಿಲ್ಲೆಗಳಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಪರಿಹಾರ ಕಾರ್ಯದ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ ಜಿತಿನ್ ಪ್ರಸಾದ್, ರಾಜ್ಯ ಸಚಿವ ಸ್ವತಂತ್ರ ದೇವ್ ಸಿಂಗ್, ಬಲದೇವ್ ಸಿಂಗ್ ಔಲಾಖ್ ಮತ್ತು ಸ್ಥಳೀಯ ಶಾಸಕರು ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಪಿಲಿಭಿತ್‌ನಲ್ಲಿ ಅವರು ಪುರನ್‌ಪುರ, ಸದರ್ ಮತ್ತು ಬಿಸಲ್‌ಪುರ ತಹಸಿಲ್‌ಗಳ ಗ್ರಾಮಗಳನ್ನು ಪರಿಶೀಲಿಸಿದರು. ಚಂಡಿಯಾ ಹಜಾರಾ ಮತ್ತು ಅಧ್ಯಾಪುರ ಜಗತ್‌ಪುರ ಗ್ರಾಮಗಳ ಭೂ ಸಮೀಕ್ಷೆಯನ್ನೂ ನಡೆಸಿದರು. ಈ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯ ಸರ್ಕಾರ ಜನರೊಂದಿಗಿದೆ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.

ಅದೇ ರೀತಿ ಲಖಿಂಪುರ ಖೇರಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಬೋಟ್​ನಲ್ಲಿ ತೆರಳಿ ಸಮೀಕ್ಷೆ ನಡೆಸಿದರು. ಶಾರದಾ ನಗರ ಪ್ರದೇಶಕ್ಕೆ ಆಗಮಿಸಿ ಬ್ಯಾರೇಜ್‌ನಿಂದ ಏರುತ್ತಿರುವ ಮಟ್ಟ ಪರಿಶೀಲಿಸಿದರು. ಪ್ರವಾಹ ಶಿಬಿರಕ್ಕೂ ಭೇಟಿ ನೀಡಿದರು. ಇದಾದ ಬಳಿಕ ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಸಮಯಕ್ಕೆ ಸರಿಯಾಗಿ ಪರಿಹಾರ ಕಿಟ್ ವಿತರಿಸಿ, ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟದ ಸಮೀಕ್ಷೆ ನಡೆಸಿ ತಕ್ಷಣ ನೆರವು ನೀಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: Uttarakhand Flood: ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ಕೊಚ್ಚಿ ಹೋದ ಕಾರುಗಳು

ಉತ್ತರ ಪ್ರದೇಶದ 12 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಅಲ್ಲಿ ಪರಿಹಾರ ಕಾರ್ಯಗಳು ಶೀಘ್ರವಾಗಿ ನಡೆಯುತ್ತಿವೆ. ಪ್ರವಾಹವನ್ನು ಎದುರಿಸಲು NDRF, SDRF, PAC ಮತ್ತು SSBನ ಪ್ರವಾಹ ಘಟಕದ ಜೊತೆಗೆ ಸ್ಥಳೀಯ ಡೈವರ್‌ಗಳನ್ನು ಸಹ ನಿಯೋಜಿಸಲಾಗಿದೆ. ಹೆಚ್ಚಿನ ಜನಸಂಖ್ಯೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಲಖಿಂಪುರ ಖೇರಿಯಲ್ಲಿ 38 ಪ್ರವಾಹ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಸಿಎಂ ಯೋಗಿ ಗ್ರಾಮಸಭೆ ಸೋರಿಯಾದ ಮಜ್ರಾ ಮಹಾದೇವ್‌ನಲ್ಲಿ ಶೂನ್ಯಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಇಲ್ಲಿ ಸಿಎಂ ಯೋಗಿ ಎನ್‌ಡಿಆರ್‌ಎಫ್ ಬೋಟ್‌ನಲ್ಲಿ ಕುಳಿತು ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ