
ಬುಲಂದ್ಶಹರ್, ಮೇ 01: ಕೇಕ್ ವಿಚಾರಕ್ಕೆ ಜಗಳವಾಡಿ ಜಿಮ್ನಲ್ಲಿ ಮೂವರನ್ನು ಹತ್ಯೆ(Murder)ಗೈದಿದ್ದ ವ್ಯಕ್ತಿ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಏಪ್ರಿಲ್ 25ರಂದು ಆತ ಮೂರು ಕೊಲೆಗಳನ್ನು ಮಾಡಿ ಬಳಿಕ ಪರಾರಿಯಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ರೂ. ಕೊಡುವುದಾಗಿ ಪೊಲೀಸರು ಘೋಷಿಸಿದ್ದರು. ಜೀತು ಸೈನಿ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ಧಾರೌ ಪೊಲೀಸ್ ಹೊರಠಾಣೆ ಬಳಿ ನಡೆದ ಈ ಎನ್ಕೌಂಟರ್ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಗುರುವಾರ ಮುಂಜಾನೆ ಸ್ಕೂಟರ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ತಪಾಸಣೆಗಾಗಿ ನಿಲ್ಲಿಸಲು ಪೊಲೀಸರು ಹೇಳಿದಾಗ, ಅವರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿ ಜಝಾರ್ ರಸ್ತೆಯಲ್ಲಿ ಅವರನ್ನು ಸುತ್ತುವರೆದಾಗ ಆರೋಪಿಗಳು ಮತ್ತೆ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಜೀತು ಸೈನಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸ್ಥಳದಿಂದ ಅಕ್ರಮ ಪಿಸ್ತೂಲ್ ಮತ್ತು ಸ್ಕೂಟರ್ ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಏಪ್ರಿಲ್ 25 ರಂದು ಜೀತು ಸೈನಿ ತನ್ನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಜಿಮ್ನಲ್ಲಿ ಗೆಳೆಯರನ್ನು ಆಹ್ವಾನಿಸಿದ್ದ ಸಂಭ್ರಮಾಚರಣೆಯ ವೇಳೆ ಸ್ನೇಹಿತ ಜೀತು ಸೈನಿಯ ಮುಖಕ್ಕೆ ಕೇಕ್ ಹಚ್ಚಿದ್ದ. ಈ ಕ್ಷುಲ್ಲಕ ಕಾರಣಕ್ಕಾಗಿ ಉಂಟಾದ ಬಿಸಿ ವಾದವು ಅನಿರೀಕ್ಷಿತ ಹಗೆತನಕ್ಕೆ ತಿರುಗಿತು. ಆರೋಪಿ ನಂತರ ಮಾರಕಾಸ್ತ್ರಗಳೊಂದಿಗೆ ಹಿಂತಿರುಗಿ ಅಮರದೀಪ್ (30), ಮನೀಶ್ (28) ಮತ್ತು ಆಕಾಶ್ (18) ಎಂಬ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದಿದ್ದ.
ಮತ್ತಷ್ಟು ಓದಿ: ‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!
ಜೀತು ಸೈನಿ ಸಾವಿನೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಈ ಕ್ರಮದಿಂದ ತೃಪ್ತರಾಗಿರುವ ಸಂತ್ರಸ್ತರ ಕುಟುಂಬದ ಸದಸ್ಯರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಆರೋಪಿಗಳ ಆಸ್ತಿಗಳನ್ನು ಕೆಡವಬೇಕೆಂದು ಅವರು ಒತ್ತಾಯಿಸಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯ ನಿವಾಸದ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ