Uttarakhand Glacier Burst: ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ; ಸೇನಾ ಕಾರ್ಯಾಚರಣೆಗೆ ದೇಶದ ಸೆಲ್ಯೂಟ್

| Updated By: ganapathi bhat

Updated on: Apr 06, 2022 | 8:11 PM

ಚಮೋಲಿಯ ತಪೋವನ ಡ್ಯಾಂ ಬಳಿ ಭಾರಿ ಪ್ರಮಾಣದ ಮಣ್ಣು ಕುಸಿದು ಸುರಂಗ ಮುಚ್ಚಿ ಹೋಗಿತ್ತು. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯನ್ನು ITBP ಸಿಬ್ಬಂದಿ ರಕ್ಷಿಸಿದ್ದಾರೆ.

Uttarakhand Glacier Burst: ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ; ಸೇನಾ ಕಾರ್ಯಾಚರಣೆಗೆ ದೇಶದ ಸೆಲ್ಯೂಟ್
ಮಣ್ಣಿನಡಿ ಸಿಲುಕಿದ್ದವನನ್ನು ರಕ್ಷಿಸಿದ ಸೇನಾ ಸಿಬ್ಬಂದಿ
Follow us on

ಡೆಹ್ರಾಡೂನ್: ಉತ್ತರಾಖಂಡ್​ನ ಚಮೋಲಿ ಜಿಲ್ಲೆಯಲ್ಲಿ ಇಂದು (ಫೆ.7) ಸಂಭವಿಸಿದ ಪ್ರಾಕೃತಿಕ ವಿಕೋಪದ ಆರ್ಭಟಕ್ಕೆ ನಿರ್ಮಾಣಹಂತದ ಹೈಡ್ರೋಪವರ್ ಪ್ರಾಜೆಕ್ಟ್‌ ಕೂಡ ತುತ್ತಾಗಿದೆ. ತಪೋವನ ಬಳಿ ಸುರಂಗದಲ್ಲಿ ಕಾರ್ಮಿಕರು ಸಿಲುಕಿದ್ದರು. ಇದೀಗ, ಸುರಂಗದಲ್ಲಿ ಸಿಲುಕಿದ್ದ ಎಲ್ಲ 16 ಜನರನ್ನು ITBP ರಕ್ಷಣೆ ಮಾಡಿದೆ.

ಚಮೋಲಿಯ ತಪೋವನ ಡ್ಯಾಂ ಬಳಿ, ಭಾರಿ ಪ್ರಮಾಣದ ಮಣ್ಣು ಕುಸಿದು ಸುರಂಗ ಮುಚ್ಚಿ ಹೋಗಿತ್ತು. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯನ್ನು ಐಟಿಬಿಪಿ ಸಿಬ್ಬಂದಿ ಹರಸಾಹಸಪಟ್ಟು ರಕ್ಷಿಸಿದ್ದಾರೆ. ಮಣ್ಣಿನಡಿ, ಸುರಂಗದಲ್ಲಿ ಸಿಲುಕಿ ಹಾಕಿಕೊಂಡಿದ್ದವರನ್ನು ರಕ್ಷಿಸಲು ಸೇನಾ ಸಿಬ್ಬಂದಿ ನಡೆಸಿರುವ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೇನಾ ಸಿಬ್ಬಂದಿ ಕಾರ್ಯಾಚರಣೆಗೆ ದೇಶದ ಜನರು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ಈವರೆಗೂ 10 ಜನರ ಮೃತದೇಹ ಪತ್ತೆಯಾಗಿದೆ. 16 ಜನರನ್ನು ರಕ್ಷಣೆ ಮಾಡಲಾಗಿದೆ. ದುರಂತದಲ್ಲಿ ಈವರೆಗೆ 125 ಜನರು ನಾಪತ್ತೆಯಾಗಿದ್ದಾರೆ. ಐವರು ಸ್ಥಳೀಯರು ಸೇರಿದಂತೆ 180 ಕುರಿ, ಮೇಕೆ ನಾಪತ್ತೆಯಾಗಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆ ನೀಡಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ತುರ್ತು ಸಭೆ
ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಭಾರಿ ಹಿಮಕುಸಿತದ ಬಗ್ಗೆ, ದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ತುರ್ತು ಸಭೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆ ವಿಚಾರವಾಗಿ ಸಭೆಯಲ್ಲಿ ಮಹತ್ವದ ಚರ್ಚೆಯಾಗುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಹಿಮ ಕುಸಿತದಿಂದಾಗಿ ಮೃತರಾದವರ ಕುಟುಂಬಕ್ಕೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ ಘೋಷಿಸಲಾಗಿದೆ. ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ 50,000 ಸಾವಿರ ರೂಪಾಯಿ ಪರಿಹಾರ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹಿಮ ಕುಸಿತದಿಂದಾಗಿ ಮೃತರಾದವರ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಕರೆ ಮಾಡಿದ್ದರು. ಪ್ರಧಾನಿ ಮೋದಿ 2 ಬಾರಿ ಕರೆ ಮಾಡಿ ಮಾಹಿತಿ ಪಡೆದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರೆ ಮಾಡಿದ್ದರು ಎಂದು ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಮನವಿ
ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ಪ್ರಕರಣಕ್ಕೆ ಸಂಬಂಧಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ, ಪರಿಹಾರ ಕಾರ್ಯಗಳಲ್ಲಿ ಸಹಾಯ ಮಾಡುವಂತೆ ಕಾಂಗ್ರೆಸ್​​​ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Explainer | ಉತ್ತರಾಖಂಡ್​ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?

Published On - 7:03 pm, Sun, 7 February 21