Viral Photos: ದೇಹವೇ ದೇಗುಲ ಎನ್ನುತ್ತಾ ದೇವರಿಗಾಗಿ ಹೇಗೆಲ್ಲಾ ದೇಹ ಬೆಳೆಸಿದ್ದಾರೆ ನೋಡಿ.. ಈ ಅಣ್ತಮ್ಮಾಸ್​!

| Updated By: ಸಾಧು ಶ್ರೀನಾಥ್​

Updated on: Apr 10, 2021 | 2:33 PM

ಸಹೋದರರಾದ ಅನಿಲ್​ ಗೋಚಿಕರ್​ ಹಾಗೂ ದಾಮೋದರ್ ಗೋಚಿಕರ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಇವರಿಬ್ಬರನ್ನೂ ಪುರಿಯ ಬಾಹುಬಲಿಗಳೆಂದು ಕರೆಯಲಾಗಿತ್ತು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾದ ಅನಿಲ್​ ಗೋಚಿಕರ್ 2019ರಲ್ಲಿಯೂ ಪುರಿ ಜಗನ್ನಾಥನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಗಮನ ಸೆಳೆದಿದ್ದರು.

Viral Photos: ದೇಹವೇ ದೇಗುಲ ಎನ್ನುತ್ತಾ ದೇವರಿಗಾಗಿ ಹೇಗೆಲ್ಲಾ ದೇಹ ಬೆಳೆಸಿದ್ದಾರೆ ನೋಡಿ.. ಈ ಅಣ್ತಮ್ಮಾಸ್​!
ಕಟ್ಟುಮಸ್ತಾದ ದೇಹ ಬೆಳಸಿದ ಪುರಿ ಜಗನ್ನಾಥನ ಸೇವಕರು
Follow us on

ಕಟ್ಟುಮಸ್ತಾದ ದೇಹ ಬೆಳೆಸುವುದು ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್​ ಆಗಿದೆ. ಕೊರೊನಾ ಕಾರಣದಿಂದ ಕೆಲ ಸಮಯ ಜಿಮ್, ಫಿಟ್​ನೆಸ್​ ಸೆಂಟರ್​ ಬಂದಾಗಲಿದೆ ಎಂದಾಗ ಅದೆಷ್ಟೋ ಜನರು ಆ ಸುದ್ದಿ ಕೇಳಿಯೇ ಬೆವರಿದ್ದರು. ಕಷ್ಟಪಟ್ಟು ಬೆವರು ಸುರಿಸಿ ಬೆಳೆಸಿದ ದೇಹಕ್ಕೆ ಜಿಮ್ ಆಸರೆ ಇಲ್ಲದೇ ಹೋದರೆ ಏನಪ್ಪಾ ಗತಿ ಎಂದು ಕಂಗಾಲಾಗಿದ್ದರು. ಆದರೆ, ಕೆಲವರು ದೇಹದಾರ್ಢ್ಯ ವಿಚಾರದಲ್ಲಿ ತೀರಾ ಹುಚ್ಚಿಗೆ ಬಿದ್ದು ಜಿಮ್​ಗೆ ಹೋಗಿ ದೇಹ ದಂಡಿಸುವ ಜೊತೆಗೆ ಸ್ಟೀರಾಯ್ಡ್, ಮದ್ದು ಹಾಗೂ ಇನ್ನಿತರ ಮಾದಕ ದ್ರವ್ಯದ ಮೊರೆ ಹೋಗುತ್ತಾರೆ ಕೂಡ. ಇಂತಹವರ ನಡುವೆ ಕಳೆದ ಜೂನ್​ನಲ್ಲಿ ಪುರಿ ದೇವಸ್ಥಾನದ ರಥೋತ್ಸವ ನಡೆದ ವೇಳೆ ಇಬ್ಬರು ಸಹೋದರರ ಫೋಟೋ ವೈರಲ್​ ಆಗಿ ಭಾರೀ ಸುದ್ದಿ ಮಾಡಿತ್ತು. ಅಪ್ಪಟ ಸಸ್ಯಾಹಾರಿಗಳಾದ ಅವರಿಬ್ಬರ ಫೋಟೋ ನೋಡಿ ಎಲ್ಲರೂ ಹುಬ್ಬೇರಿಸಿದ್ದಲ್ಲದೇ ಈ ಸಹೋದರರನ್ನು ನಿಜವಾದ ಬಾಹುಬಲಿಗಳೆಂದು ಕರೆದಿದ್ದರು.

ಪುರಿ ಜಗನ್ನಾಥ ದೇಗುಲದ ರಥೋತ್ಸವದಲ್ಲಿ ಜಗನ್ನಾಥ ಸ್ವಾಮಿ, ಬಾಲಭದ್ರ ಸ್ವಾಮಿ ಹಾಗೂ ಸುಭದ್ರಾ ದೇವಿಯನ್ನು ಹೊತ್ತ ಮೂರು ರಥಗಳನ್ನು ಎಳೆದು ಮೆರವಣಿಗೆ ಮಾಡಲಾಗುತ್ತದೆ. ಕಳೆದ 2020ನೇ ಇಸವಿಯ ಜೂನ್​ 23ರಂದು ನಡೆದ ಉತ್ಸವದಲ್ಲಿ ಕೊರೊನಾ ದೆಸೆಯಿಂದ ಮೊಟ್ಟ ಮೊದಲ ಬಾರಿಗೆ ಭಕ್ತ ಸಮೂಹವಿಲ್ಲದೇ ರಥೋತ್ಸವ ಮಾಡಲಾಗಿತ್ತು. ಸುಪ್ರೀಂ ಕೋರ್ಟ್​ ಅಣತಿ ಮೇರೆಗೆ ದೇಗುಲಕ್ಕೆ ಸೇರಿದವರನ್ನೂ ಸೇರಿಸಿ ಒಟ್ಟು 500 ಜನರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ನೆರೆದಿದ್ದ ಕನಿಷ್ಟ ಜನರ ಪೈಕಿ ರಥ ಎಳೆಯಲು ಕೈ ಜೋಡಿಸಿದ್ದ ಇಬ್ಬರು ಸಹೋದರರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದರು. ಅದಕ್ಕೆ ಕಾರಣ ಅವರ ಕಟ್ಟುಮಸ್ತಾದ ದೇಹ.

ಪುರಿಯ ಬಾಹುಬಲಿ ಎಂದೇ ಪ್ರಸಿದ್ಧರಾದ ಸಹೋದರರು

ಪುರಿಯ ಬಾಹುಬಲಿ ಎಂದೇ ಪ್ರಸಿದ್ಧರಾದ ಸಹೋದರರು

ಸಹೋದರರಾದ ಅನಿಲ್​ ಗೋಚಿಕರ್​ ಹಾಗೂ ದಾಮೋದರ್ ಗೋಚಿಕರ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಇವರಿಬ್ಬರನ್ನೂ ಪುರಿಯ ಬಾಹುಬಲಿಗಳೆಂದು ಕರೆಯಲಾಗಿತ್ತು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾದ ಅನಿಲ್​ ಗೋಚಿಕರ್ 2019ರಲ್ಲಿಯೂ ಪುರಿ ಜಗನ್ನಾಥನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಗಮನ ಸೆಳೆದಿದ್ದರು.

ಆರಂಭದಲ್ಲಿ ಸಹೋದರ ದಾಮೋದರ್ ಗೋಚಿಕರ್​ ಅವರಿಂದ ಪ್ರೇರಿತರಾಗಿದ್ದ ಅನಿಲ್​ ಗೋಚಿಕರ್ ಸುಮಾರು ಹತ್ತು ವರ್ಷಗಳ ಹಿಂದೆ ಕಟ್ಟುಮಸ್ತಾದ ದೇಹ ಬೆಳೆಸಬೇಕೆಂದು ಯೋಚಿಸಿ ಅದರತ್ತ ಗಮನ ಹರಿಸಿದ್ದರು. ಅದರ ಫಲವಾಗಿ ಅನೇಕ ಬಾರಿ ಮಿಸ್ಟರ್ ಒಡಿಶಾ ಪದಕವನ್ನು ಬಾಚಿಕೊಂಡ ಅವರು 2012ರಲ್ಲಿ ಮಿಸ್ಟರ್ ಇಂಡಿಯಾ ಪಟ್ಟವನ್ನೂ ತನ್ನದಾಗಿಸಿಕೊಂಡಿದ್ದರು ಹಾಗೂ 2016ರಲ್ಲಿ ದುಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ಟರ್ ಇಂಟರ್​ನ್ಯಾಶನಲ್ ಇಂಡಿಯನ್ ಎಂಬ ಪಟ್ಟವನ್ನೂ ಅಲಂಕರಿಸಿದ್ದರು.

ಹೀಗೆ ವಿವಿಧ ಪಟ್ಟಗಳನ್ನು ಅಲಂಕರಿಸಿದ್ದ ಅನಿಲ್​ಗೆ ರಥೋತ್ಸವದಲ್ಲಿ ರಥ ಎಳೆಯುವುದು ಏಕೆ ಇಷ್ಟ ಎಂದು ಕೇಳಿದ್ದಕ್ಕೆ, ದೇವರ ಸೇವೆ ಮಾಡದಿದ್ದರೆ ಎಷ್ಟು ದೇಹ ಬೆಳೆಸಿದರೆ ಏನು ಪ್ರಯೋಜನ? ಎಂದು ಉತ್ತರಿಸಿ ಬೆರಗಾಗಿಸಿದ್ದರು. ಇಂತಹ ದೈವಭಕ್ತ ದೇಹದಾರ್ಢ್ಯ ಪಟು ಅನಿಲ್​ ಗೋಚಿಕರ್​ ಅಪ್ಪಟ ಸಸ್ಯಾಹಾರಿ ಎನ್ನುವುದು ಇನ್ನೊಂದು ವಿಶೇಷ. ಮೊಟ್ಟೆಯನ್ನೂ ತಿನ್ನದ ಅವರು ಮದ್ಯಪಾನವನ್ನಾಗಲೀ, ಮಾದಕ ದ್ರವ್ಯ ಸೇವನೆಯನ್ನಾಗಲೀ ಮಾಡುವುದಿಲ್ಲವಂತೆ. ಕೇವಲ ಶುದ್ಧ ಸಸ್ಯಾಹಾರ ಪದ್ಧತಿಯನ್ನೇ ಪಾಲಿಸಿಕೊಂಡು ಬಂದು ದೇಹ ಬೆಳೆಸಿದ್ದಾರಂತೆ. ಈ ವಿಚಾರವೇ ಅನೇಕರಲ್ಲಿ ಬೆರಗು ಮೂಡಿಸಿದ್ದು ಶುದ್ಧ ಶಾಖಾಹಾರಿಗಳೂ ಹೀಗೆ ಕಟ್ಟುಮಸ್ತಾದ ದೇಹ ಬೆಳೆಸುವುದು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡಿದ್ದಾರೆ.

ಪುರಿಯ ಬಾಹುಬಲಿ ಎಂದೇ ಪ್ರಸಿದ್ಧರಾದ ಸಹೋದರರು

ಕಟ್ಟುಮಸ್ತಾದ ದೇಹ ಬೆಳಸಿದ ಪುರಿ ಜಗನ್ನಾಥನ ಸೇವಕರು

ಪುರಿ ಜಗನ್ನಾಥ ದೇಗುಲ

ಇದನ್ನೂ ಓದಿ: 
ಜೂಲಿಯೋ ಎಂಬ ಮಂಗನಿಗೇ ಗುಂಡಿಯೊತ್ತಿ ಬಾಳೆಹಣ್ಣು ಪಡೆದುಕೊಳ್ಳುವುದು ಗೊತ್ತಾಗುತ್ತದೆ ಎಂದರೆ 

ಸೂಯೆಜ್ ಕಾಲುವೆಯಲ್ಲಿ ದೈತ್ಯ ಹಡಗು ಮತ್ತೆ ತೇಲಲು ಹುಣ್ಣಿಮೆ ಚಂದ್ರನೇ ಕಾರಣ!

Published On - 2:32 pm, Sat, 10 April 21