
ನವದೆಹಲಿ, ಸೆಪ್ಟೆಂಬರ್ 7: ಭಾರತದಲ್ಲಿ ವಿವಿಧ ಆರೋಪಗಳನ್ನು ಹೊತ್ತು ದೇಶದ ಕಾನೂನಿನಿಂದ ತಪ್ಪಿಸಿಕೊಳ್ಳು ಬ್ರಿಟನ್ಗೆ ಪಲಾಯನಗೈದ ವಿಜಯ್ ಮಲ್ಯ, ನೀರವ್ ಮೋದಿ ಮತ್ತಿತರರು ಭಾರತದ ವಶಕ್ಕೆ ಸಿಗುವ ಕಾಲ ಸನ್ನಿಹಿತವಾದಂತಿದೆ. ಇತ್ತೀಚೆಗೆ ಬ್ರಿಟನ್ನ ಅಧಿಕಾರಿಗಳ ತಂಡವೊಂದು ದೆಹಲಿಯ (Delhi) ತಿಹಾರ್ ಜೈಲಿನ ಪರಿಸ್ಥಿತಿಯನ್ನು ಪರಿಶೀಲಿಸಿರುವ ಘಟನೆ ನಡೆದಿದೆ. ಎಎನ್ಐ ವರದಿ ಪ್ರಕಾರ ಬ್ರಿಟಿಷ್ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ನಿಂದ ಒಂದು ತಂಡವನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಈ ಅಧಿಕಾರಿಗಳು ಕಾರಾಗೃಹಕ್ಕೆ ಹೋಗಿ ಅಲ್ಲಿರುವ ಖೈದಿಗಳ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ ದೇಶದಲ್ಲಿ ಜೈಲು ನಿಯಮಾವಳಿಗಳು ಬಿಗಿಯಾಗಿವೆ. ಅಲ್ಲಿ ಆರೋಪಿ ಮತ್ತು ಅಪರಾಧಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು ಎನ್ನುವ ಕಾನೂನುಗಳಿವೆ. ಭಾರತದ ಜೈಲುಗಳಲ್ಲಿ ಖೈದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತದೆ. ಕಾರಾಗೃಹಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ, ಭದ್ರತೆ ಇಲ್ಲ ಎನ್ನುವ ಆರೋಪಗಳಿವೆ. ಭಾರತದಿಂದ ಪರಾರಿಯಾಗಿ ಹೋದ ಹಲವರು ಇವೇ ವಿಚಾರ ಮುಂದಿಟ್ಟುಕೊಂಡು ಅಲ್ಲಿರುವ ನ್ಯಾಯಾಲಯಗಳ ಮೂಲಕ ರಕ್ಷಣೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಕೇವಲ ಹತ್ತೇ ದಿನದಲ್ಲಿ ಬರೋಬ್ಬರಿ 826 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ
ಭಾರತದ ಜೈಲುಗಳಲ್ಲಿ ಸರಿಯಾದ ಭದ್ರತೆ ಇಲ್ಲ. ತಮ್ಮ ಜೀವಕ್ಕೆ ಹಾನಿಯಾಗಬಹುದು ಎಂಬಿತ್ಯಾದಿ ಕಾರಣಗಳನ್ನು ನ್ಯಾಯಾಲಯಗಳಿಗೆ ನೀಡಿ, ಭಾರತಕ್ಕೆ ಹಸ್ತಾಂತರಗೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದವರು ಇದೇ ತಂತ್ರ ಅನುಸರಿಸುತ್ತಿರುವುದು ತಿಳಿದುಬಂದಿದೆ.
ಆದರೆ, ಭಾರತವು ಈ ಆರೋಪಿಗಳನ್ನು ಒಪ್ಪಿಸಬೇಕು ಎಂದು ಬ್ರಿಟನ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದೆ. ಈ ಕಾರಣಕ್ಕೆ ಅಧಿಕಾರಿಗಳ ತಂಡವೊಂದನ್ನು ಬ್ರಿಟನ್ ತಿಹಾರ್ ಜೈಲಿಗೆ ಕಳುಹಿಸಿರುವುದು. ಗಣ್ಯರಿಗೆ ಅಗತ್ಯ ಬಿದ್ದರೆ ತಿಹಾರ್ ಜೈಲಿನ ಅಂಗಳದಲ್ಲೇ ವಿಶೇಷ ಭಾಗವನ್ನು ರಚಿಸಲು ಸಿದ್ಧ ಇರುವುದಾಗಿ ಬ್ರಿಟನ್ ಅಧಿಕಾರಿಗಳಿಗೆ ತಿಹಾರ್ ಜೈಲಿನ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ ಜುಲೈ ತಿಂಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ತಿಹಾರ್ ಜೈಲಿಗೆ ಭೇಟಿ ಕೊಟ್ಟಿರುವುದು ಗೊತ್ತಾಗಿದೆ. ಈ ತಂಡದಲ್ಲಿ ಬ್ರಿಟನ್ ರಾಯಭಾರಿ ಅಧಿಕಾರಿಗಳೂ ಕೂಡ ಇದ್ದರು ಎನ್ನುವ ಮಾಹಿತಿ ಇದೆ.
ಇದೇ ವೇಳೆ, ಜೈಲಿನಲ್ಲಿ ಯಾವುದೇ ಆರೋಪಿಗೂ ಅಕ್ರಮವಾಗಿ ವಿಚಾರಣೆ ಮಾಡುವುದಿಲ್ಲ ಎಂದು ಭಾರತ ಸರ್ಕಾರವೂ ಬ್ರಿಟನ್ಗೆ ವಾಗ್ದಾನ ಇತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್
ಕೇಂದ್ರ ಸಚಿವ ನಿತ್ಯಾನಂದ ರೈ ಅವರು 2024ರ ಡಿಸೆಂಬರ್ನಲ್ಲಿ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ, ಭಾರತದಿಂದ ಪರಾರಿಯಾದ ಆರೋಪಿಗಳನ್ನು ಮರಳಿ ವಶಕ್ಕೆ ಪಡೆಯಲು ಕಳೆದ 5 ವರ್ಷದಲ್ಲಿ ವಿವಿಧ ದೇಶಗಳಿಗೆ 178 ಮನವಿಗಳನ್ನು ಮಾಡಲಾಗಿದೆ. ಇವುಗಳ ಪೈಕಿ 23 ಮಂದಿಯ ಹಸ್ತಾಂತರವಾಗಿದೆ. ಇನ್ನೂ ಅನೇಕ ವ್ಯಕ್ತಿಗಳನ್ನು ಮರಳಿ ಪಡೆಯಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನ ಮಾಡಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ