West Bengal Elections 2021: ಗಾಲಿಕುರ್ಚಿಯ ಮೇಲೆ ಕುಳಿತೇ ಪ್ರಚಾರ ಮಾಡಲು ನಿರ್ಧರಿಸಿದ ಮಮತಾ ಬ್ಯಾನರ್ಜಿ

|

Updated on: Mar 14, 2021 | 1:40 PM

ಮಾರ್ಚ್ 9ರಂದು ನಡೆದ ಘಟನೆಯಲ್ಲಿ ಅವರಿಗೆ ಗಾಯವಾದ ನಂತರ ಇದೇ ಮೊದಲ ಬಾರಿಗೆ ದೀದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

West Bengal Elections 2021: ಗಾಲಿಕುರ್ಚಿಯ ಮೇಲೆ ಕುಳಿತೇ ಪ್ರಚಾರ ಮಾಡಲು ನಿರ್ಧರಿಸಿದ ಮಮತಾ ಬ್ಯಾನರ್ಜಿ
ಗಾಲಿಕುರ್ಚಿಯ ಮೇಲೆ ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ಮಾರ್ಚ್ 9ರಂದು ನಾಮಪತ್ರ ಸಲ್ಲಿಸಿದ ನಂತರ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗಾಲಿಕುರ್ಚಿಯ ಮೇಲೆ ಕುಳಿತೇ ಚುನಾವಣಾ ಪ್ರಚಾರ ಮೆರವಣಿಗೆ ನಡೆಸಲಿದ್ದಾರೆ. ಮಾರ್ಚ್ 9ರಂದು ನಡೆದ ಘಟನೆಯಲ್ಲಿ ಅವರಿಗೆ ಗಾಯವಾದ ನಂತರ ಇದೇ ಮೊದಲ ಬಾರಿಗೆ ದೀದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಾಂಧಿ ಮೂರ್ತಿ ಪ್ರದೇಶದಿಂದ ಹಜ್ರಾಕ್ಕೆ ಸಾರ್ವಜನಿಕ ಪ್ರಚಾರ ಮೆರವಣಿಗೆಯಲ್ಲಿ ಅವರು ತೆರಳಲಿದ್ದಾರೆ ಎಂದು ಟಿಎಂಸಿ ಪಕ್ಷದ ಮೂಲಗಳು ತಿಳಿಸಿವೆ. ಮೆರವಣಿಗೆಯ ನಂತರ ಹಜ್ರಾದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಗಳಿವೆ.

ತಮಗೆ ಆದ ಗಾಯಗಳಿಂದ ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ಇರುವುದಿಲ್ಲ. ಮೂರ್ನಾಲ್ಕು ದಿನಗಳ ನಂತರ ಮತ್ತೆ ಪ್ರಚಾರಕ್ಕೆ ಧುಮುಕುವುದಾಗಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಮಮತಾ ಬ್ಯಾನರ್ಜಿ ಎಸ್ಎಸ್​ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಎಡ ಮೊಣಕಾಲು, ಪಾದ, ಬಲಭುಜ, ಮೊಣಕೈ ಮತ್ತು ಕುತ್ತಿಗೆಗೆ ಗಾಯವಾಗಿದೆ ಎಂದು ತಪಾಸಣೆಯಲ್ಲಿ ಕಂಡು ಬಂದಿತ್ತು. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ 5 ಹಿರಿಯ ವೈದ್ಯರ ತಂಡ ಬ್ಯಾನರ್ಜಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿತ್ತು. 48 ಗಂಟೆಗಳ ಕಾಲ ಬ್ಯಾನರ್ಜಿ ಅವರನ್ನು ನಿಗಾದಲ್ಲಿರಿಸಲಾಗುವುದು. ಹಲ್ಲೆಗೊಳಗಾದ ಬೆನ್ನಲ್ಲೇ ಮಮತಾ ಅವರಿಗೆ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದರು.

ಗಾಯದ ಹಿಂದಿನ ಕಾರಣ ತಿಳಿಯಲು ವಿಶೇಷ ವೀಕ್ಷಕರ ನೇಮಕ

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರು ಗಾಯಗೊಳ್ಳಲು ಕಾರಣವಾದ ಘಟನೆಯ ಬಗ್ಗೆ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ವಿವೇಕ್​ ದುಬೆ ಮತ್ತು ಅಜಯ್ ನಾಯಕ್​ರನ್ನು ವಿಶೇಷ ವೀಕ್ಷಕರನ್ನಾಗಿ ನೇಮಕ ಮಾಡಿತ್ತು. ಅವರು ತಮ್ಮ ಪರಿಶೀಲನಾ ವರದಿಯನ್ನು ಇಂದು ಎಲೆಕ್ಷನ್ ಕಮಿಶನ್​ಗೆ ಸಲ್ಲಿಸಿತ್ತು. ಅಜಯ್​ ನಾಯಕ್​ ಹಾಗೂ ವಿವೇಕ್ ದುಬೆ ತಮ್ಮ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಮೊದಲು ಸ್ಥಳವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದ್ದಲ್ಲದೆ, ಸುತ್ತಲಿನವರನ್ನೂ ಕೆಲವರನ್ನು ವಿಚಾರಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಮತಾ ಬ್ಯಾನರ್ಜಿಯವರ ಮೇಲೆ ಹಲ್ಲೆ ನಡೆದಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕರು, ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾರನ್ನೂ ಭೇಟಿಯಾಗಿದ್ದರು. ಇದೊಂದು ಪಿತೂರಿ ಎಂದೇ ಪ್ರತಿಪಾದಿಸಿದ್ದರು.

ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ಮುಖಂಡರ ನಿಯೋಗ ಮನವಿಯನ್ನೂ ಸಲ್ಲಿಸಿದೆ. ನಂದಿಗ್ರಾಮದಲ್ಲಿ ನಡೆದ ಹಲ್ಲೆಯ ವಿವರಗಳನ್ನೊಳಗೊಂಡ ವರದಿಯನ್ನೂ ರಾಜ್ಯ ಸರ್ಕಾರ ಎಲೆಕ್ಷನ್​ ಕಮಿಷನ್​ಗೆ ಈಗಾಗಲೇ ಸಲ್ಲಿಸಿದೆ. ಆದರೆ ಈ ವರದಿ ಅಪೂರ್ಣವಾಗಿದೆ.. ಬೇರೆ ವರದಿ ನೀಡಬೇಕು ಎಂದು ಇಂದು ಚುನಾವಣಾ ಆಯೋಗ ಪಶ್ಚಿಮಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದೆ.

ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಸಲ್ಲಿಸಲಾದ ವರದಿಯಲ್ಲಿ ಸಂಪೂರ್ಣ, ಸ್ಪಷ್ಟವಾದ ಮಾಹಿತಿಗಳು ಇಲ್ಲ. ಘಟನೆ ಹೇಗೆ ನಡೆಯಿತು? ಅದರ ಹಿಂದೆ ಯಾರ ಕೈವಾಡ ಇರಬಹುದು? ಎಂಬಿತ್ಯಾದಿ ವಿವರಗಳು ಇಲ್ಲ. ಹಾಗಾಗಿ ಹಲ್ಲೆಗೆ ಸಂಬಂಧಪಟ್ಟಂತೆ ಇನ್ನಷ್ಟು ಮಾಹಿತಿಗಳನ್ನು ನೀಡಿ, ಹೊಸದಾಗಿ ವರದಿ ಸಲ್ಲಿಸಲು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Mamata Banerjee Attacked: ಚುನಾವಣಾ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದು ಹೇಗೆ? ವಿಡಿಯೊದಲ್ಲಿ ಸೆರೆಯಾಗಿವೆ ದೃಶ್ಯಗಳು

ಮಮತಾ ಬ್ಯಾನರ್ಜಿಗೆ ಗಾಯ; ನೆಟ್ಟಿಗರು ಪ್ರತಿಕ್ರಿಯಿಸಿದ ರೀತಿ ನೋಡಿ

Published On - 1:15 pm, Sun, 14 March 21