AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಎನ್​ಡಿಎ ಸೇರ್ಪಡೆ ಸಾಧ್ಯತೆ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ, ಟಿಎಂಸಿ ಸಂಸದೀಯ ಪಕ್ಷದಲ್ಲಿ ಪ್ರಮುಖ ವಿಭಜನೆ ಬಹುತೇಕ ಖಚಿತವಾಗಿದೆ. 20 ಬಂಡಾಯ ಸಂಸದರು ಎನ್‌ಡಿಎ ಸೇರುತ್ತಿರುವುದಾಗಿ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಕಾಕೋಲಿ ಘೋಷ್ ದಸ್ತಿದಾರ್ ಈ ಪತ್ರವನ್ನು ಸಲ್ಲಿಸಿದರು. ಮಮತಾ ಬ್ಯಾನರ್ಜಿ ಇಂಡಿಯ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸಿದಾಗಲೇ ನಡೆದ ಈ ಘಟನೆಯು ಟಿಎಂಸಿಗೆ ದೊಡ್ಡ ರಾಜಕೀಯ ಹೊಡೆತ ನೀಡಿದೆ.

ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಎನ್​ಡಿಎ ಸೇರ್ಪಡೆ ಸಾಧ್ಯತೆ
Mamata BanerjeeImage Credit source: PTI
ಸುಷ್ಮಾ ಚಕ್ರೆ
|

Updated on:Jun 08, 2026 | 5:55 PM

Share

ನವದೆಹಲಿ, ಜೂನ್ 8: ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಹೊಡೆತವನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ವಿಭಜನೆಯಾಗಿತ್ತು. ಇದೀಗ ಸಂಸದೀಯ ಪಕ್ಷದಲ್ಲಿ ವಿಭಜನೆ ಬಹುತೇಕ ಖಚಿತವಾಗಿದೆ. ಬಂಡಾಯವೆದ್ದಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರು ಕೇಂದ್ರ ಸಚಿವ ಮತ್ತು ಪಕ್ಷದ ವೀಕ್ಷಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಹಾಜರಿದ್ದರು. ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ, ಹಿರಿಯ ಡಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 20 ಟಿಎಂಸಿ ಸಂಸದರು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದರು. ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯಲ್ಲಿ ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಣ ಎನ್​ಡಿಎ ಸೇರಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

ಸ್ಪೀಕರ್​ಗೆ ಪತ್ರ ಬರೆದಿರುವ ಟಿಎಂಸಿ ಸಂಸದರು ಎನ್​ಡಿಎಗೆ ಸೇರ್ಪಡೆಯಾಗುವುದಾಗಿ ಹೇಳಿಕೆ ನೀಡಿದ್ದಾರೆ. ರಾಜಕೀಯ ವಲಯದ ಮೂಲಗಳ ಪ್ರಕಾರ, ಪತ್ರ ಬರೆದಿರುವ ಈ 20 ಪ್ಲಸ್ ಸಂಸದರು ಟಿಎಂಸಿಯಿಂದ ಸಂಪೂರ್ಣವಾಗಿ ಹೊರಬಂದು ಎನ್​ಡಿಎ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಸಂಸತ್ತಿನಲ್ಲಿ ತಮ್ಮ ಸಂಸದ ಸ್ಥಾನಕ್ಕೆ ಯಾವುದೇ ಧಕ್ಕೆ ಬರದಂತೆ ಕಾನೂನುಬದ್ಧವಾಗಿ ಪಕ್ಷದಿಂದ ಹೊರಬರಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಕ್ರೋಢೀಕರಿಸಲು ಈ ಬಂಡಾಯದ ಗುಂಪು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ನೇತೃತ್ವದ ಅತೃಪ್ತರ ಬಣ ಇದೇ ಪ್ಲಾನ್ ಮಾಡಿತ್ತು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ, ಮತ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಪತ್ರ; ಇಂಡಿಯ ಸಭೆಯ 5 ನಿರ್ಧಾರಗಳಿವು

ಒಂದೆಡೆ, ಮಮತಾ ಬ್ಯಾನರ್ಜಿ ಇಂಡಿಯ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ಬಂಡಾಯ ಸಂಸದರು ಪ್ರತ್ಯೇಕ ಬಣವನ್ನು ರಚಿಸುವ ಉದ್ದೇಶವನ್ನು ಘೋಷಿಸಿ ಸ್ಪೀಕರ್‌ಗೆ ಪತ್ರಗಳನ್ನು ಸಲ್ಲಿಸಿದರು. ಅವರು ಟಿಎಂಸಿ ಸಂಸದೀಯ ಪಕ್ಷದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.53ಕ್ಕೆ ಪತ್ರವನ್ನು ಸಲ್ಲಿಸಲಾಯಿತು.

ಲೋಕಸಭೆಯಲ್ಲಿ ಟಿಎಂಸಿ ಒಟ್ಟು 28 ಸಂಸದರನ್ನು ಹೊಂದಿದೆ. ಅವರಲ್ಲಿ 20 ಮಂದಿ ಸಹಿ ಹಾಕಿದ್ದಾರೆ ಎಂದು ಕಾಕೋಲಿ ಹೇಳಿದ್ದಾರೆ. ಆದರೂ, ಯಾರು ಯಾವುದಕ್ಕೆ ಸಹಿ ಹಾಕಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ, ಈ ಪಟ್ಟಿಯಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಪಾರ್ಥ ಭೌಮಿಕ್, ಶರ್ಮಿಳಾ ಸರ್ಕಾರ್, ಅಸಿತ್ ಮಾಲ್, ಜಗದೀಶ್ ಬಸುನಿಯಾ, ಕಾಲಿಪಾದ ಸೊರೆನ್, ಅರೂಪ್ ಚಕ್ರವರ್ತಿ, ರಚನಾ ಬ್ಯಾನರ್ಜಿ ಮತ್ತು ದೇವ್ ಸೇರಿದ್ದಾರೆ. ಇದಕ್ಕೂ ಮೊದಲು ಟಿಎಂಸಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ಕಾಕೋಲಿ ಘೋಷ್ ಸಲ್ಲಿಸಿದ ಪತ್ರದಲ್ಲಿ ಅವರು ಬಿಜೆಪಿಗೆ ಸೇರುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಅವರು ಎನ್‌ಡಿಎಗೆ ಸೇರಲಿದ್ದಾರೆ. ಇದರರ್ಥ ಅವರು ತೃಣಮೂಲ ಕಾಂಗ್ರೆಸ್‌ನಿಂದ ಪ್ರತ್ಯೇಕ ಗುಂಪಾಗಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಲು ಬಯಸುತ್ತಾರೆ. ಇದರರ್ಥ ಈ ಪತ್ರವನ್ನು ಅಂಗೀಕರಿಸಿದರೆ, ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷವು ವಿಭಜನೆಯಾಗುತ್ತದೆ. ಆದರೆ, ಓಂ ಬಿರ್ಲಾ ಇಂದು ಲೋಕಸಭೆಯಲ್ಲಿ ಇಲ್ಲ. ಅವರು ಬೇರೆ ರಾಜ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದಾರೆ. ಆದ್ದರಿಂದ, ಟಿಎಂಸಿ ಸಂಸದರು ಪತ್ರವನ್ನು ಅವರ ಕಚೇರಿಗೆ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆಯ ನಂತರ, ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷವು ವಿಭಜನೆಯಾಗಿದೆ. ರಿತಬ್ರತಾ ಬ್ಯಾನರ್ಜಿ ನೇತೃತ್ವದ 58 ಶಾಸಕರು, ಪ್ರತ್ಯೇಕ ಬಣವನ್ನು ರಚಿಸಿರುವುದಾಗಿ ಹೇಳಿಕೊಂಡು ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅದನ್ನು ಅನುಮೋದಿಸಿದ್ದಾರೆ. ಶಾಸಕರ ನಡುವಿನ ವಿಭಜನೆಯ ನಂತರ ಈಗ ಟಿಎಂಸಿ ಸಂಸದರ ನಡುವಿನ ವಿಭಜನೆ ಬಹುತೇಕ ಖಚಿತವಾಗಿದೆ. ಇದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 8 June 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More