Sukhvinder Singh Sukhu: ರಾಜಮನೆತನದ ಹೆಣ್ಮಗಳು, ಮಾಜಿ ಸಿಎಂ ಪತ್ನಿಯನ್ನೇ ಹಿಂದಿಕ್ಕಿ ಸಿಎಂ ಕುರ್ಚಿಗೇರಿದ ಸುಖ್ವಿಂದರ್‌ ಸಿಂಗ್‌ ಸುಖು ಯಾರು?

| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2022 | 10:07 PM

ಹಿಮಾಚಲ ಪ್ರದೇಶ ರಾಜಮನೆತನದ ಹೆಣ್ಮಗಳು, ಮಾಜಿ ಸಿಎಂ ಪತ್ನಿ ಪ್ರತಿಭಾ ಸಿಂಗ್ ಅವರನ್ನೇ ಹಿಂದಿಕ್ಕಿ ಸಿಎಂ ಕುರ್ಚಿಗೇರಿದ ಸುಖ್ವಿಂದರ್‌ ಸಿಂಗ್‌ ಸುಖು ಯಾರು? ಅವರು ನಡೆದ ರಾಜಕೀಯ ಹಾದಿ ಹೇಗಿದೆ? ಎನ್ನುವುದು ಈ ಕೆಳಗಿನಂತಿದೆ ನೋಡಿ.

Sukhvinder Singh Sukhu: ರಾಜಮನೆತನದ ಹೆಣ್ಮಗಳು, ಮಾಜಿ ಸಿಎಂ ಪತ್ನಿಯನ್ನೇ ಹಿಂದಿಕ್ಕಿ ಸಿಎಂ ಕುರ್ಚಿಗೇರಿದ ಸುಖ್ವಿಂದರ್‌ ಸಿಂಗ್‌ ಸುಖು ಯಾರು?
Sukhvinder Singh Sukhu
Follow us on

ಶಿಮ್ಲಾ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ (Himachal Pradesh CM) ಸ್ಥಾನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕಾಂಗ್ರೆಸ್‌ ಪ್ರಚಾರ ಸಮಿತಿ ಮುಖ್ಯಸ್ಥರಾಗಿದ್ದ ಸುಖ್ವಿಂದರ್‌ ಸಿಂಗ್‌ (Sukhwinder Singh Sukhu) ಅವರಿಗೆ ಮಣೆಹಾಕಿದೆ. ಇಂದು(ಡಿ.10) ಶಿಮ್ಲಾ ನಡೆದ ಸಭೆಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸುಖ್ವಿಂದರ್‌ ಸಿಂಗ್‌ ಸುಖು ಅವರನ್ನು ಆಯ್ಕೆ ಮಾಡಲಾಗಿದ್ದು, ನಾಳೆ ಭಾನುವಾರ (ಡಿಸೆಂಬರ್‌ 11) ಬೆಳಗ್ಗೆ 11 ಗಂಟೆಗೆ ಶಿಮ್ಲಾದಲ್ಲಿ ಸುಖ್ವಿಂದರ್‌ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ರಾಜಮನೆತನದ ಹೆಣ್ಮಗಳು, ಮಾಜಿ ಸಿಎಂ ಪತ್ನಿ ಪ್ರತಿಭಾ ಸಿಂಗ್ ಅವರನ್ನೇ ಹಿಂದಿಕ್ಕಿ ಸಿಎಂ ಕುರ್ಚಿಗೇರಿದ ಸುಖ್ವಿಂದರ್‌ ಸಿಂಗ್‌ ಸುಖು ಯಾರು? ಅವರು ನಡೆದ ರಾಜಕೀಯ ಹಾದಿ ಹೇಗಿದೆ? ಎನ್ನುವುದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಮಾಚಲ ಕೈ ಭಿನ್ನಮತ ಸುಖಾಂತ್ಯ: ಸುಖ್ವಿಂದರ್ ಸಿಂಗ್ ಸಿಎಂ, ಮುಕೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ಸ್ಥಾನ

ಹಮೀರ್‌ಪುರ ಜಿಲ್ಲೆಯ ನಾದೌನ್‌ನಿಂದ ಮೂರನೇ ಬಾರಿಗೆ ಶಾಸಕರಾಗಿರುವ 58 ವರ್ಷದ ಸುಖ್ವಿಂದರ್ ಸಿಂಗ್ ಸುಖು ಅವರು ವೃತ್ತಿಯಿಂದ ವಕೀಲರು. ಕಾಂಗ್ರೆಸ್‌ನ ವಿದ್ಯಾರ್ಥಿ ನಾಯಕರಾಗಿ ಹೆಸರು ಮಾಡಿದವರು. ಕಾಂಗ್ರೆಸ್ ವಿಂಗ್ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ನಿಂದ ಶ್ರೇಯಾಂಕಗಳ ಮೂಲಕ ಬಂದವರಾಗಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಆರಂಭಿಕ ಬದುಕು ಮತ್ತು ಶಿಕ್ಷಣ

1964ರ ಮಾರ್ಚ್ 27ರಂದು ಹಿಮಾಚಲ ಪ್ರದೇಶದ ನಾದೌನ್ ಗ್ರಾಮದಲ್ಲಿ ಸುಖ್ವಿಂದರ್ ಸಿಂಗ್ ಸುಖು ಜನಿಸಿದ್ದು, ಶಿಮ್ಲಾದ ಕಾಸಮ್ತಿಯಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ್ದಾರೆ. ಕಾನೂನು ವಿಷಯದಲ್ಲಿ ಪದವಿ ಪಡೆದುಕೊಂಡರು. ನಂತರ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ.. ಪತ್ನಿ ಕಮಲೇಶ್ ಠಾಕೂರ್ ಹಾಗೂ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸುಖ್ವಿಂದರ್‌ ಸಿಂಗ್‌ ಸುಖು ನಡೆದ ಬಂದ ರಾಜಕೀಯ ಹಾದಿ

* 1989- 1995: NSUI ನ ರಾಜ್ಯ ಅಧ್ಯಕ್ಷ

• 1998-2008: ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ

• 1992-1997: ಶಿಮ್ಲಾದ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್

• 1997-2002: ಶಿಮ್ಲಾದ ಮುನ್ಸಿಪಲ್ ಕಾರ್ಪೊರೇಶನ್‌ನ ಕೌನ್ಸಿಲರ್ ಆಗಿ ಮರು-ಚುನಾಯಿತರಾದರು

• 2003: ರಾಜ್ಯ ಶಾಸಕಾಂಗ ಸಭೆಗೆ ಚುನಾಯಿತರಾದರು

• 2007: ರಾಜ್ಯ ಶಾಸಕಾಂಗ ಸಭೆಗೆ ಮರು ಆಯ್ಕೆ

  • 2008 ರಲ್ಲಿ ರಾಜ್ಯ ಘಟಕದ ಕಾರ್ಯದರ್ಶಿಯನ್ನಾಗಿ ನೇಮಕ

• 2007-2012: ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ

• 2017: ಹದಿಮೂರನೇ ವಿಧಾನ ಸಭೆಗೆ ಮರು ಆಯ್ಕೆ

• 2017: ಸಾರ್ವಜನಿಕ ಉದ್ಯಮಗಳು, ಸವಲತ್ತುಗಳು ಮತ್ತು ವ್ಯವಹಾರ ಸಲಹಾ ಸಮಿತಿಗಳ ಸದಸ್ಯರಾಗಿ ನಾಮನಿರ್ದೇಶನ.

• 2013-2019: ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು

• 2022: ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ 2022 ರಲ್ಲಿ ನಾದೌನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

Published On - 9:46 pm, Sat, 10 December 22