Sedition Law: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕವೂ ದೇಶದ್ರೋಹ ಕಾಯ್ದೆಯ ಅಗತ್ಯವಿದೆಯಾ? ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ.

Sedition Law: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ
ಸುಪ್ರೀಂಕೋರ್ಟ್
Edited By:

Updated on: Jul 15, 2021 | 8:59 PM

ನವದೆಹಲಿ: ದೇಶದ್ರೋಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠ ಇಂದು ನಡೆಸಿದೆ. ದೇಶದ್ರೋಹದ ಕಾಯ್ದೆ (Sedition Law) ದುರ್ಬಳಕೆಯಾಗುತ್ತಿದೆ. ಇದೊಂದು ಬ್ರಿಟಿಷ್ ಕಾಲದ (Colonial Law) ಕಾನೂನು. ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕವೂ ಈ ಕಾನೂನಿನ ಅಗತ್ಯವಿದೆಯಾ? ಎಂದು ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ಎನ್​.ವಿ. ರಮಣ (NV Ramana) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ದೇಶದ್ರೋಹ ಕಾಯ್ದೆಯಡಿ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದು ಬ್ರಿಟಿಷ್ ಕಾಲದ ಕಾನೂನು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕವೂ ದೇಶದ್ರೋಹ ಕಾಯ್ದೆಯ ಅಗತ್ಯವಿದೆಯಾ? ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ದೇಶದ್ರೋಹದ ಕಾಯ್ದೆಯನ್ನು ರದ್ದು ಪಡಿಸಲು ಕೋರಿ ಕರ್ನಾಟಕದ ಎಸ್.ಜಿ. ಒಂಭತ್ತಕೆರೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್ ನೀಡಿದೆ.

ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಬರುವ ದೇಶದ್ರೋಹ ಕಾಯ್ದೆಯು ಭಾರತೀಯ ಪ್ರಜೆಗಳ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ದೇಶದ್ರೋಹ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಮೂಲದ ನಿವೃತ್ತ ಮೇಜರ್ ಜನರಲ್ ಎಸ್​.ಜಿ. ಒಂಭತ್ತೆಕರೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಸಾಹತುಶಾಹಿಯಾದ ಈ ದೇಶದ್ರೋಹ ಕಾಯ್ದೆಯನ್ನೇ ಬ್ರಿಟಿಷರು ಮಹಾತ್ಮ ಗಾಂಧೀಜಿಯವರ ಬಾಯಿ ಮುಚ್ಚಿಸಲು ಬಳಸಿದ್ದರು ಎಂದು ಸುಪ್ರೀಂಕೋರ್ಟ್​ ಸಿಜಿಐ ಎನ್​.ವಿ. ರಮಣ ಅರ್ಜಿ ವಿಚಾರಣೆ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ 6 ವಾರದಲ್ಲಿ ಮಾರ್ಗಸೂಚಿ ರೂಪಿಸಿ, ಪರಿಹಾರದ ಮೊತ್ತ ನಿರ್ಧರಿಸಬೇಕು – ಸುಪ್ರೀಂಕೋರ್ಟ್​

ಇದನ್ನೂ ಓದಿ:India Map Twitter: ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ ಎಫ್​ಐಆರ್​; ಭೂಪಟ ತಪ್ಪಾಗಿ ತೋರಿಸಿದ್ದು ದೇಶದ್ರೋಹವೆಂದು ಆರೋಪ

(Why Colonial Sedition Law Colonial needed 75 years after Independence Supreme Court Asks Union Government )

Published On - 1:19 pm, Thu, 15 July 21