
ನವದೆಹಲಿ, ಮಾರ್ಚ್ 14: ಟಿವಿ9 ನೆಟ್ವರ್ಕ್ ಆಯೋಜಿಸಿದ ನಾಲ್ಕನೇ ಆವೃತ್ತಿಯ ಡಬ್ಲ್ಯುಐಟಿಟಿ ಶೃಂಗಸಭೆಯಲ್ಲಿ (ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್ 2026) ಉದ್ಯಮ ವಲಯದ ಪರಿಣಿತರು ಇಂದಿನ ಸ್ಟಾರ್ಟಪ್ ಲೋಕದ ಬಗ್ಗೆ ವಿಚಾರ ವಿನಿಮಯ ಮಾಡಿದರು. ಯಾವುದೇ ಕಂಪನಿ ಅಥವಾ ಸ್ಟಾರ್ಟಪ್ಗೆ ಮೌಲ್ಯವೇ ಪ್ರಧಾನವಾಗಿರುತ್ತದೆ. ಮೌಲ್ಯದ ಮೇಲೆ ಗಮನ ಕೊಟ್ಟರೆ ಮೌಲ್ಯಮಾಪನ ತನ್ನಂತಾನೆ ಉತ್ತಮವಾಗಿರುತ್ತದ. ಇದು ಡಬ್ಲ್ಯುಐಟಿಟಿ ಸಮಿಟ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಲ್ವರು ಪರಿಣಿತರು ಒಮ್ಮತವಾಗಿ ವ್ಯಕ್ತಪಡಿಸಿದ ಅಭಿಪ್ರಾಯವಾಗಿತ್ತು.
ಮೌಲ್ಯ ಮತ್ತು ಮೌಲ್ಯಮಾಪನ (Valuation) ವಿಚಾರ ಕುರಿತು ನಡೆದ ಡಿಬೇಟ್ನಲ್ಲಿ ಟಿಐಇ (TiE) ಎಕ್ಸಿಕ್ಯೂಟಿವ್ ಡೈರೆಕ್ಟರ್ ಉಪಾಸನಾ ಶರ್ಮಾ, ಗ್ಯಾಬಿಟ್ ಸಹ-ಸಂಸ್ಥಾಪಕಿ ಅರ್ಪಣಾ ಶಾಹಿ, ಸ್ಕೈ ಏರ್ ಮೊಬಿಲಿಟಿ ಸಂಸ್ಥಾಪಕ ಅಂಕಿತ್ ಕುಮಾರ್ ಮತ್ತು ಫಂಡಮೆಂಟಂ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ನ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ಅವರು ಪಾಲ್ಗೊಂಡು ಚರ್ಚೆ ನಡೆಸಿದರು.
ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ ಮಾಡಬೇಕೆನ್ನುವವರು ಅನಿಶ್ಚಿತ ಪರಿಸ್ಥಿತಿ ಸಂಭಾಳಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ ಉಪಾಸನಾ ಶರ್ಮಾ. ಯುದ್ಧ ಇರಲಿ, ಇಲ್ಲದೇ ಇರಲಿ, ಅನಿಶ್ಚಿತತೆ ಎನ್ನುವುದು ಇದ್ದೇ ಇರುತ್ತದೆ. ಯಾವುದೇ ಕ್ಷೇತ್ರದಲ್ಲೂ ಹೊಸ ಬ್ಯುಸಿನೆಸ್ ಮಾಡುವವರು ಇದನ್ನು ಎದುರಿಸಬೇಕಾಗುತ್ತದೆ ಎಂಬುದು ಅವರ ಅನಿಸಿಕೆ.
ಜಾಗತಿಕ ಲಾಜಿಸ್ಟಿಕ್ಸ್ ಇಕೋಸಿಸ್ಟಂಗಳು ಸ್ಟಾರ್ಟಪ್ಗಲಿಗೆ ಸ್ಥಳೀಯವಾಗಿ ಅನುಕೂಲವಾಗಬಲ್ಲುವು. ಇದರಿಂದ ದೇಶಕ್ಕೂ ಅನುಕೂಲವಾಗುತ್ತದೆ ಎಂದು ಸ್ಕೈ ಏರ್ ಮೊಬಿಲಿಟಿ ಸಿಇಒ ಅಂಕಿತ್ ಕುಮಾರ್ ಅಭಿಪ್ರಾಯಪಟ್ಟರು. ಪ್ಯಾನಲ್ ಡಿಸ್ಕಶನ್ನಲ್ಲಿ ಮುಂದುವರಿದು ಮಾತನಾಡಿದ ಅವರು, ಭಾರತದಲ್ಲಿ ಒಂದು ಉತ್ಪನ್ನ ನಿರ್ಮಿಸಲು ಇರುವ ಸಾಧಕ ಮತ್ತು ಬಾಧಕಗಳನ್ನು ವಿವರಿಸಿದರು.
‘ಭಾರತದಲ್ಲಿ ಮೂರು ವರ್ಷದಲ್ಲಿ ಒಂದು ಉತ್ಪನ್ನ ಕಟ್ಟಲು ಆಗುವುದಿಲ್ಲ. ಅದು 10 ವರ್ಷದ ಪ್ರಕ್ರಿಯೆ. ಜನರು ಮತ್ತು ಪರಿಸರದ ಮೇಲೆ ಪೂರಕ ಪರಿಣಾಮ ಬೀರುವಂಥದ್ದನ್ನು ರಚಿಸುವುದು ಬಹಳ ಮೌಲ್ಯಯುತವೆನಿಸುತ್ತದೆ’ ಎಂದರು.
ಒಬ್ಬ ಹೂಡಿಕೆದಾರ ದೀರ್ಘಕಾಲದ ಆಸ್ತಿಯಲ್ಲಿ ಹೂಡಿಕೆ ಮಾಡಿದಾಗ, ಅದರ ಮೌಲ್ಯ ಮತ್ತು ಮೌಲ್ಯಮಾಪನವು ಸಾಮ್ಯವಾಗಿದ್ದರೆ ಮಾತ್ರ ಹಣ ಮಾಡಲು ಸಾಧ್ಯ. ಸ್ಟಾರ್ಟಪ್ಗಳು ಆರಂಭವಾಗಿ ಮೊದಲ ಕೆಲ ವರ್ಷ ಸಾಮರ್ಥ್ಯ ನಿರ್ಮಾಣಕ್ಕೆ ಒತ್ತು ಕೊಡುತ್ತವೆ. ನಂತರ ಬೆಳವಣಿಗೆಯನ್ನು ಗಮನಿಸಬಹುದು ಎಂದು ಫಂಡಮೆಂಟಮ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಕಂಪನಿಯ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Tue, 24 March 26