Opinion: ಹೆಚ್​ ಡಿ ದೇವೇಗೌಡರ ಕೈಯಲ್ಲಿ ಸಿಎಂ ಇಬ್ರಾಹಿಂ ಒಂದು ರಾಜಕೀಯ ಅಸ್ತ್ರವಾಗಬಹುದೇ? ಒಂದು ವಿಶ್ಲೇಷಣೆ

HD Devegowda: ಇಬ್ರಾಹಿಂ ಈಗ ಚಿತ್ರ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ನನ್ನ ಮನಸ್ಸು ಪರಿಶುದ್ಧವಾಗಿದೆ. ನಾನು ಶಾಪ ಹಾಕಿದರೆ ಅದು ಘೋರ ಪರಿಣಾಮವನ್ನು ಬೀರುತ್ತದೆ ಎಂದು ಅವರು ದೂರ್ವಾಸ ಮುನಿಯ ರೀತಿ ಮಾತನಾಡುತ್ತಾ ರಾಜಕಾರಣಕ್ಕೆ ಪೌರಾಣಿಕ ಟಚ್ ಕೊಡಲು ಪ್ರಯತ್ನಿಸುತ್ತಿದ್ದಾರೆ. ಆರ್ ಎಸ್ ಎಸ್ ನಲ್ಲಿಯೂ ಒಳ್ಳೆಯವರಿದ್ದಾರೆ ಎನ್ನುತ್ತಾ ಬಿಜೆಪಿಯ ಬಿ ಟೀಂ ರೀತಿ ಮಾತನಾಡುತ್ತಿದ್ದಾರೆ. ಇಬ್ರಾಹಿಂ ಅವರನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆಯೇ? ಎಂಬುದು ಸದ್ಯದ ಕುತೂಹಲ. ಹಿರಿಯ ಪತ್ರಕರ್ತ ಸಿ. ರುದ್ರಪ್ಪ ಅವರಿಂದ ವಿಶ್ಲೇಷಣೆ

Opinion: ಹೆಚ್​ ಡಿ ದೇವೇಗೌಡರ ಕೈಯಲ್ಲಿ ಸಿಎಂ ಇಬ್ರಾಹಿಂ ಒಂದು ರಾಜಕೀಯ ಅಸ್ತ್ರವಾಗಬಹುದೇ? ಒಂದು ವಿಶ್ಲೇಷಣೆ
ಜನತಾ ಜಲಧಾರೆ: ಜಲ ಸಂಗ್ರಹಕ್ಕೆ ಹೊರಟ 15 ಗಂಗಾ ರಥಗಳನ್ನು ಬೀಳ್ಕೊಟ್ಟ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
Follow us
| Updated By: ಸಾಧು ಶ್ರೀನಾಥ್​

Updated on:Feb 03, 2022 | 10:37 AM

ರಾಜಕಾರಣದಲ್ಲಿ ದಿಢೀರನೆ ಬೆಳಕಿಗೆ ಬರುವವರ ಬಗ್ಗೆ ಕುತೂಹಲ ಸಹಜ. who is janardhana pujari? (ಯಾರು ಜನಾರ್ಧನ ಪೂಜಾರಿ?). ಇದು ತುರ್ತು ಪರಿಸ್ಥಿತಿ ನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದಿ ಇಂಡಿಯನ್ ಎಕ್ಸ್​ಪ್ರೆಸ್​ ದಿನಪತ್ರಿಕೆ ವರದಿಯೊಂದರ ಶೀರ್ಷಿಕೆಯಾಗಿತ್ತು. ಮಂಗಳೂರು ಕ್ಷೇತ್ರದ ಹಾಲಿ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಕೆ.ಕೆ. ಶೆಟ್ಟಿಯವರಿಗೆ ಟಿಕೆಟ್ ತಪ್ಪಿಸಿ ಜನಾರ್ಧನ ಪೂಜಾರಿಯವರಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರು ಪ್ರಸಿದ್ಧ ಕ್ರಿಮಿನಲ್ ಲಾಯರ್ ಯೂಸುಫ್ ಹೈದರ್ ಅವರ ಜೂನಿಯರ್ ಆಗಿದ್ದರು. ಕಾಂಗ್ರೆಸ್ ಸದಸ್ಯರೂ ಆಗಿರಲಿಲ್ಲ. ಈ ಬಿಲ್ಲವ ಯುವಕನ ಬಗ್ಗೆ ಪತ್ರಕರ್ತ ಗೇಬ್ರಿಯಲ್ ವಾಜ್ ತಮ್ಮ ವರದಿಯಲ್ಲಿ ಹೀಗೆ ಕುತೂಹಲ ವ್ಯಕ್ತಪಡಿಸಿದ್ದರು.

ಇದೇ ರೀತಿ 1971 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದ ಟಿಕೇಟನ್ನು ಗಿಟ್ಟಿಸಿಕೊಂಡಿದ್ದ ಸೇವಾ ದಳದ ಸಾಮಾನ್ಯ ಕಾರ್ಯಕರ್ತ ಸಿ.ಕೆ. ಜಾಫರ್ ಷರೀಫ್ ಬಗ್ಗೆಯೂ ಕುತೂಹಲ ವ್ಯಕ್ತವಾಗಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಈ ಚುರಕಾದ ಯುವಕನನ್ನು ಎಸ್. ನಿಜಲಿಂಗಪ್ಪನವರು ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಕರೆದುಕೊಂಡು ಬಂದಿದ್ದರು. ಆದರೆ ಜಾಫರ್ ಷರೀಫ್, ನಿಜಲಿಂಗಪ್ಪ ಕ್ಯಾಂಪಿನ ವಿದ್ಯಮಾನಗಳನ್ನು ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಹಸ್ಯವಾಗಿ ರವಾನಿಸಿ ಅವರ ವಿಶ್ವಾಸವನ್ನು ಗಳಿಸಿದ್ದರು.

ಅದೇ ರೀತಿ 1973 ರ ಸುಮಾರಿಗೆ ರಾಜ್ಯ ರಾಜಕೀಯ ವಲಯದಲ್ಲಿ”ಈ ಸಿ ಎಂ ಇಬ್ರಾಹಿಂ ಯಾರು?”ಎಂಬ ಪ್ರಶ್ನೆ ಉದ್ಭವಿಸಿತ್ತು. ಒಂದು ದಿನ ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ರಾಜ್ಯಮಟ್ಟದ ಯುವಜನ ಸಮಾವೇಶ ನಡೆಯುತ್ತಿತ್ತು. ವೇದಿಕೆಯ ನೆಲಹಾಸಿನ ಮೇಲೆ ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಚ್ ಡಿ ದೇವೇಗೌಡ ಮೊದಲಾದ ನಾಯಕರು ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು. ವೇದಿಕೆಯ ತುದಿಯಲ್ಲಿ ಒಂದು ಮೈಕ್ ಇಟ್ಟಿದ್ದರು. ವಿವಿಧ ಜಿಲ್ಲೆಯ ಯುವ ಮುಖಂಡರು ಭಾಷಣ ಮಾಡಿ ಹೋಗುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ಎಚ್ ಸಿ ಪ್ರಕಾಶ್ ಅವರ ಸರದಿ ಬಂದಿತು. ಆದರೆ ಅವರಿಗೆ ಸ್ಟೇಜ್ ಫಿಯರ್ ಶುರುವಾಯಿತು. ತಮ್ಮೊಂದಿಗೆ ಕಾರ್ಯಕರ್ತರ ನಿಯೋಗದಲ್ಲಿ ಬಂದಿರುವ ಭದ್ರಾವತಿಯ ಯುವಕ ಸಿ.ಎಂ. ಇಬ್ರಾಹಿಂ ಅವರೇ ತಮ್ಮ ಬದಲು ವೇದಿಕೆಯಲ್ಲಿ ಮಾತನಾಡಲು ಸರಿಯಾದ ವ್ಯಕ್ತಿ ಎಂದು ಅವರಿಗೆ ಅನ್ನಿಸಿತು.

ರಾಜ್ಯೋತ್ಸವ, ಗಣೇಶೋತ್ಸವಗಳಲ್ಲಿ ಮತ್ತು ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ಇಬ್ರಾಹಿಂ ಮಾಡುತ್ತಿದ್ದ ಅದ್ಭುತವಾದ ಭಾಷಣಗಳು ಅವರ ನೆನಪಿಗೆ ಬಂದವು. ಲಿಂಗಾಯತ ಮಠವೊಂದರಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಇಬ್ರಾಹಿಂ, ಶರಣರ ವಚನಗಳನ್ನು, ಕವಿಪುಂಗವರ ನುಡಿಮುತ್ತುಗಳನ್ನು ಪೋಣಿಸಿ, ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಮಾಡಿದ ವಿಶಿಷ್ಟ ಶೈಲಿಯ ಭಾಷಣ ಸಭಾಂಗಣದಲ್ಲಿ ಮಾರ್ದನಿಸಿತು. ಆಗ ಮೊದಲ ಬಾರಿಗೆ ಮುಖಂಡರು ಇಬ್ರಾಹಿಂ ಅವರತ್ತ ತಲೆ ಎತ್ತಿ ನೋಡಿದರು. ವೀರೇಂದ್ರ ಪಾಟೀಲ್ ಮಾರನೆಯ ದಿನವೇ ಇಬ್ರಾಹಿಂ ಅವರನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ಇಬ್ರಾಹಿಂ ರಾಜ್ಯ ರಾಜಕಾರಣಕ್ಕೆ ದೊಡ್ಡಮಟ್ಟದ ಪ್ರವೇಶ ಪಡೆದರು. ಮುಸ್ಲಿಂ ನಾಯಕರೆಲ್ಲಾ ದೇವರಾಜ ಅರಸು ಕ್ಯಾಂಪಿಗೆ ಜಿಗಿದಿದ್ದರು. ಸಂಸ್ಥಾ ಕಾಂಗ್ರೆಸ್ ನಲ್ಲಿ ಯಾರೂ ಇರಲಿಲ್ಲ. ಆ ಕೊರತೆಯನ್ನು ಇಬ್ರಾಹಿಂ ತುಂಬಿದರು. ಆಗ ಅವರೊಬ್ಬ ಗ್ಲಾಮರಸ್ ಯುವ ನಾಯಕ. 1978 ರಲ್ಲಿ ಜನತಾ ಪಕ್ಷದಿಂದ ಶಿವಾಜಿ ನಗರ ಕ್ಷೇತ್ರದ ಶಾಸಕರಾದರು. ವೀರೇಂದ್ರ ಪಾಟೀಲ್ ಜೊತೆಗೆ ಇಂದಿರಾ ಕಾಂಗ್ರೆಸ್ಸಿಗೆ ಮರಳಿದ ಇಬ್ರಾಹಿಂ, ಗುಂಡೂರಾವ್ ಸಂಪುಟದಲ್ಲಿ ಸಚಿವರಾದರು.

ತಮ್ಮ ಹರಿತವಾದ ನಾಲಿಗೆಯನ್ನು ಯಾವ ದಿಕ್ಕಿಗೆ ಬೇಕಾದರೂ ಹೊರಳಿಸಿ ಭಾಷಣ ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ಇಬ್ರಾಹಿಂ ಅವರನ್ನು ಬಳಸಿಕೊಳ್ಳಲು ಅನೇಕ ನಾಯಕರು ಪ್ರಯತ್ನಿಸಿದ್ದಾರೆ. 1994 ರಲ್ಲಿ ದೇವೇಗೌಡರು ಅಧಿಕಾರದ ದಡವನ್ನು ತಲುಪಲು ಇಬ್ರಾಹಿಂ ವಿಶೇಷವಾಗಿ ಪ್ರಯತ್ನಿಸಿದ್ದರು. ದೇವೇಗೌಡರಿಗಾಗಿ ರಾಜ್ಯದಲ್ಲೆಡೆ ಮುಸ್ಲಿಂ ಮುಖಂಡರ ಸಭೆಗಳನ್ನು ಸಂಘಟಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಇಬ್ರಾಹಿಂ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ದೇವೇಗೌಡರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ. ಅವರು ಹಲವು ಸುತ್ತು ಉತ್ತರ ಭಾರತದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು. ಆಗ ಅವರನ್ನು ಅಲ್ಲಿನ ಜನರಿಗೆ ಪರಿಚಯಿಸಲು ಇಬ್ರಾಹಿಂ ಮಾಡುತ್ತಿದ್ದ ಹಿಂದೂಸ್ತಾನಿ ಭಾಷಣಗಳು ಜನಪ್ರಿಯವಾಗಿದ್ದವು.

ನಂತರ ಸಿದ್ದರಾಮಯ್ಯನವರ ತೆಕ್ಕೆಗೆ ಜಾರಿದ ಇಬ್ರಾಹಿಂ ಅಹಿಂದ ಸಮಾವೇಶಗಳಲ್ಲಿ ಸಾವಿರಾರು ಜನರನ್ನು ತಮ್ಮ ಅಮೋಘವಾದ ಭಾಷಣಗಳ ಮೂಲಕ ರಂಜಿಸಿದರು. 2013 ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಮಗೆ ಮಂತ್ರಿ ಸ್ಥಾನ ನೀಡಬಹುದೆಂದು ನಿರೀಕ್ಷಿಸಿದ್ದರು. ಅದು ಹುಸಿಯಾಯಿತು. ಇತ್ತೀಚೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನವೂ ಕೈ ತಪ್ಪುತ್ತಿದ್ದಂತೆ ಇಬ್ರಾಹಿಂ ಸಿದ್ದರಾಮಯ್ಯನವರ ವಿರುದ್ಧ ಸಿಡಿದಿದ್ದಾರೆ.

ಈ ಬೆಳವಣಿಗೆಯಿಂದ ದೇವೇಗೌಡರ ಮನಸ್ಸಿಗೆ ಸ್ವಲ್ಪ ಸಮಾಧಾನವಾಗಿದ್ದರೆ ಯಾರೂ ಆಶ್ಚರ್ಯಪಡಬೇಕಿಲ್ಲ! ಅವರು ಯೋಗ ಸಾಧನೆ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಆದರೆ ಅವರ ಮನಸ್ಸಿಗೆ ನೆಮ್ಮದಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಬೇಡ ಬೇಡವೆಂದರೂ ಅವರ ಮನಸ್ಸಿನೊಳಗೆ ಕೆಲವು ನೆನಪುಗಳು ಮತ್ತು ಸಂಗತಿಗಳು ನುಗ್ಗಿ ಬರುತ್ತಿವೆ:

1. ವಿಧಾನ ಸೌಧದ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫೋಟೊ ಇತ್ತು. ಜೆ.ಎಚ್ .ಪಟೇಲ್, ಎಸ್.ಎಂ.ಕೃಷ್ಣ, ಧರಂ ಸಿಂಗ್, ಬಿ ಎಸ್​ ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹೀಗೆ ಯಾವ ಮುಖ್ಯಮಂತ್ರಿಯೂ ಆ ಫೋಟೋವನ್ನು ತೆಗೆಸಿರಲಿಲ್ಲ. ಆದರೆ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಅದನ್ನು ತೆಗೆಸಿಬಿಟ್ಟರು.

2. 2018 ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು “ಜೆಡಿಎಸ್ ಬಿಜೆಪಿಯ ಬಿ ಟೀಮ್”ಎಂದು ಟೀಕಿಸಿದ್ದರು. ಅದರಿಂದಾಗಿ ಜೆಡಿಎಸ್ ಹಲವು ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು. ರಾಹುಲ್ ಗಾಂಧಿಯವರಿಂದ ಈ ಹೇಳಿಕೆಯನ್ನು ಕೊಡಿಸಿದ್ದು ಸಿದ್ದರಾಮಯ್ಯನವರೇ ಎನ್ನುವುದು ದೇವೇಗೌಡರಿಗೆ ಚೆನ್ನಾಗಿ ಗೊತ್ತು. ಈ ಹೇಳಿಕೆಯಿಂದ ಡ್ಯಾಮೇಜ್ ಆಯಿತು. ಇಲ್ಲದಿದ್ದರೆ ನಮಗೆ 60 ಸೀಟು ಬರುತ್ತಿದ್ದವು ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದರು.

3. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯನವರ ನಡವಳಿಕೆಯಲ್ಲಿ ಬದಲಾವಣೆಯನ್ನು ದೇವೇಗೌಡರು ಗುರ್ತಿಸಿದ್ದರು. ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ಮತ್ತು ಬಜೆಟ್ ಮೇಲಿನ ಚರ್ಚೆಗಳಿಗೆ ಕುಮಾರಸ್ವಾಮಿಯವರು ಉತ್ತರ ಹೇಳುತ್ತಿದ್ದಾಗ ಸಿದ್ದರಾಮಯ್ಯನವರು ಸದನದಿಂದ ಎದ್ದು ಹೋಗುತ್ತಿದ್ದುದನ್ನು ಕೂಡಾ ದೇವೇಗೌಡರು ಗಮನಿಸಿದ್ದರು. siddaramaiah was not even in the assembly when mr kumaraswamy spoke during the three day session recently ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದು ಗಮನಾರ್ಹ.

4. ಜಮೀರ್ ಅಹ್ಮದ್ ಮೊದಲಾದ ತಾವೇ ಬೆಳೆಸಿದ್ದ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಹೈಜಾಕ್ ಮಾಡುತ್ತಿದ್ದಾರೆ ಎಂಬ ಬೇಸರವೂ ದೇವೇಗೌಡರಿಗೆ ಇದೆ. they also wooed one or two muslim leaders who were with me ಎಂದು ಅವರು ಅದೇ ಸಂದರ್ಶನದಲ್ಲಿ ಹೇಳಿದ್ದರು.

5. ಸಮ್ಮಿಶ್ರ ಸರ್ಕಾರ ಯಶಸ್ವಿಯಾದರೆ ರಾಜ್ಯ ರಾಜಕಾರಣದ ಮೇಲಿನ ತಮ್ಮ ಹಿಡಿತ ತಪ್ಪಿಹೋದೀತೆಂಬ ಆತಂಕದಿಂದಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಪಿತೂರಿ ಮಾಡಿರಬಹುದೆಂಬ ಅನುಮಾನ ದೇವೇಗೌಡರಿಗೆ ಮೊದಲಿಂದಲೂ ದಟ್ಟವಾಗಿತ್ತು.

ಅಧಿಕಾರವಿರಲಿ ಅಥವಾ ಇಲ್ಲದಿರಲಿ ಹಲವು ದಶಕಗಳಿಂದ ರಾಜಕಾರಣದ ದಾಳಗಳನ್ನು ಲೀಲಾಜಾಲವಾಗಿ ಉರುಳಿಸುತ್ತಾ ಬಂದಿರುವ ದೇವೇಗೌಡರಿಗೆ ಈಗ ಸಿದ್ದರಾಮಯ್ಯನವರೇ ಒಂದು ತೊಡರುಗಾಲು ಆಗಿರುವುದು ಸ್ಪಷ್ಟ. ಕಳೆದ ವರ್ಷ ದೇವೇಗೌಡರು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ದೆಹಲಿಗೆ ತೆರಳಲಿ ಎಂಬ ಸಲಹೆ ನೀಡಿದ್ದರು. ಅವರು ಏಕೆ ಅಂತಹ ಹೇಳಿಕೆ ನೀಡಿದರು ಎಂಬುದು ಬಹಳ ಜನರಿಗೆ ಆಗ ಅರ್ಥವಾಗಿರಲಿಲ್ಲ.

ಸಿದ್ದರಾಮಯ್ಯನವರ ಸುತ್ತಲೂ ಕ್ರೋಢೀಕರಣವಾಗುತ್ತಿರುವ ಮುಸ್ಲಿಂ ಮತಗಳನ್ನು ಚದುರಿಸಲು ದೇವೇಗೌಡರು ಇಬ್ರಾಹಿಂ ಅವರನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೇ? ಎಂಬ ಕುತೂಹಲ ಸಹಜ. ಈ ಅಸ್ತ್ರ ಮೊದಲಿನ ಮೊನಚನ್ನು ಉಳಿಸಿಕೊಂಡಿದೆಯೇ? 2013 ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಊರು ಭದ್ರಾವತಿಯಲ್ಲಿ ಇಬ್ರಾಹಿಂ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಇಬ್ರಾಹಿಂ ಈಗ ಚಿತ್ರ-ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ನನ್ನ ಮನಸ್ಸು ಪರಿಶುದ್ಧವಾಗಿದೆ. ನಾನು ಶಾಪ ಹಾಕಿದರೆ ಅದು ಘೋರ ಪರಿಣಾಮವನ್ನು ಬೀರುತ್ತದೆ ಎಂದು ಅವರು ದೂರ್ವಾಸ ಮುನಿಯ ರೀತಿ ಮಾತನಾಡುತ್ತಾ ರಾಜಕಾರಣಕ್ಕೆ ಪೌರಾಣಿಕ ಟಚ್ ಕೊಡಲು ಪ್ರಯತ್ನಿಸುತ್ತಿದ್ದಾರೆ.

ಆರ್ ಎಸ್ ಎಸ್ ನಲ್ಲಿಯೂ ಒಳ್ಳೆಯವರಿದ್ದಾರೆ. ಭಾವೂರಾವ್ ದೇಶಪಾಂಡೆ ಅವರ ಕಾಲಲ್ಲಿ ಚಪ್ಪಲಿಯೇ ಇರಲಿಲ್ಲ. ಜಗನ್ನಾಥ ರಾವ್ ಜೋಶಿಯವರ ಬಳಿ ಆಸ್ಪತ್ರೆ ಬಿಲ್ ಕಟ್ಟಲು ದುಡ್ಡೇ ಇರಲಿಲ್ಲ ಎನ್ನುತ್ತಾ ಬಿಜೆಪಿಯ ಬಿ ಟೀಮಿನವರ ರೀತಿ ಮಾತನಾಡುತ್ತಿದ್ದಾರೆ. ಇಬ್ರಾಹಿಂ ಅವರನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆಯೇ? ಅಥವಾ ಅವರ ಭಾಷಣಗಳು ಕೇವಲ ಮನರಂಜನೆಗೆ ಸೀಮಿತವಾಗುತ್ತವೆಯೇ? ಈ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗಬೇಕಾಗಿದೆ.

– ಸಿ. ರುದ್ರಪ್ಪ, ಹಿರಿಯ ಪತ್ರಕರ್ತರು

Published On - 10:29 am, Thu, 3 February 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ