Karnataka Assembly Elections 2023: ಅಧಿಕಾರ ವಿರೋಧಿ ಅಲೆ ಹೊಡೆದೋಡಿಸಲು ಮೋದಿ ಮಂತ್ರ ಏನು?

| Updated By: ಗಣಪತಿ ಶರ್ಮ

Updated on: Apr 21, 2023 | 5:01 PM

ಕೊವಿಡ್​​ನಿಂದಾಗಿ, ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗದೇ ಆಡಳಿತ ವಿರೋಧಿ ಅಲೆ ಹುಟ್ಟಿರಬಹುದು ಎಂಬ ಗುಮಾನಿ ಬಿಜೆಪಿ ಪಕ್ಷದ ಹಲವಾರು ನಾಯಕರಿಗೆ ಕಾಡುತ್ತಿದೆ. ಅದೇ ಕಾರಣದಿಂದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ತಮ್ಮ ಭರವಸೆಯನ್ನಿಟ್ಟುಕೊಂಡಿದ್ದಾರೆ.

Karnataka Assembly Elections 2023: ಅಧಿಕಾರ ವಿರೋಧಿ ಅಲೆ ಹೊಡೆದೋಡಿಸಲು ಮೋದಿ ಮಂತ್ರ ಏನು?
ಪ್ರಧಾನಿ ನರೇಂದ್ರ ಮೋದಿ
Follow us on

ವಿಧಾನಸಭೆ ಚುನಾವಣೆ (Karnataka Assembly Elections 2023) ನಡೆಯುತ್ತಿರುವ ಕರ್ನಾಟಕದಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಮುಂದಿನ 20 ದಿನಗಳಲ್ಲಿ 20 ಕ್ಕೂ ಹೆಚ್ಚಿನ ಕಡೆ, ಪ್ರಧಾನಿ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 1985ರ ನಂತರ ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಸಹ ತಿರುಗಿ ಅಧಿಕಾರಕ್ಕೆ ಬಂದ ಇತಿಹಾಸ ಕರ್ನಾಟಕದಲ್ಲಿ ಇಲ್ಲ. ಪಕ್ಕದ ಕೇರಳ ಕೂಡ ಇದೇ ರೀತಿಯ ರಾಜಕೀಯ ಇತಿಹಾಸವನ್ನು ಹೊಂದಿತ್ತು. ಆದರೆ, 2 ವರ್ಷದ ಹಿಂದೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಆಗ ಅಧಿಕಾರದಲ್ಲಿದ್ದ ಸಿಪಿಐ(ಎಂ) ಪಕ್ಷವು ಪುನಃ ಗೆದ್ದು ಅಧಿಕಾರ ಹಿಡಿದು ಕೇರಳದಲ್ಲಿ ಒಂದು ಹೊಸ ಮೈಲಿಗಲ್ಲನ್ನು ಹುಟ್ಟುಹಾಕಿತ್ತು. ಕರ್ನಾಟಕದಲ್ಲಿ ಇದೇ ರೀತಿಯ ಇತಿಹಾಸ ಹುಟ್ಟುಹಾಕಬೇಕು ಎಂಬುದು ಭಾರತೀಯ ಜನತಾ ಪಕ್ಷದ ಆಸೆ ಇರಬಹುದು. ಕೊವಿಡ್​​ನಿಂದಾಗಿ, ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗದೇ ಆಡಳಿತ ವಿರೋಧಿ ಅಲೆ ಹುಟ್ಟಿರಬಹುದು ಎಂಬ ಗುಮಾನಿ ಬಿಜೆಪಿ ಪಕ್ಷದ ಹಲವಾರು ನಾಯಕರಿಗೆ ಕಾಡುತ್ತಿದೆ. ಅದೇ ಕಾರಣದಿಂದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ತಮ್ಮ ಭರವಸೆಯನ್ನಿಟ್ಟುಕೊಂಡಿದ್ದಾರೆ.

ಹಾಗಾದರೆ, ಪ್ರಧಾನಿ ಮೋದಿ, ಕರ್ನಾಟಕ ಬಿಜೆಪಿ ಮೇಲೆ ಇರುವ ಆಡಳಿತ ವಿರೋಧಿ ಅಲೆಯನ್ನು ಮಣಿಸಲು ಯಾವ ರೀತಿಯ ತಂತ್ರ ಹೆಣೆಯಬಹುದು? ರಾಜ್ಯದ ಹಲವಾರು ಊರುಗಳಿಂದ ಬರುತ್ತಿರುವ ಪ್ರತಿಕ್ರಿಯೆಯ ಆಧಾರದ ಮೇಲೆ ಹೇಳುವದಾದರೆ, ಬಿಜೆಪಿ ಮೂರು ರೀತಿಯಲ್ಲಿ ಮತ ಕೇಳಲು ಸಿದ್ಧವಾಗಿದೆ. ಒಂದು, ಕ್ಷೇತ್ರದಲ್ಲಿ ನಿಂತ ಅಭ್ಯರ್ಥಿಯನ್ನು ನೋಡಬೇಡಿ, ಪಕ್ಷದ ಚಿಹ್ನೆ ನೋಡಿ ಮತ ಹಾಕಿ ಎಂಬ ಮನವಿಯೊಂದಿಗೆ ಬಿಜೆಪಿ ರಾಜ್ಯದ ಜನರ ಬಳಿ ಹೋಗುತ್ತಿದೆ. ಎರಡು, ಮೋದಿ ಇರುವುದರಿಂದ, ಕೆಲಸ ಆಗಿಯೇ ಆಗುತ್ತದೆ ಮತ್ತು ಅವರು ಎಲ್ಲೂ ಅಪರಾ-ತಪರಾ ಆಗಲು ಬಿಡುವುದಿಲ್ಲ. ಹಾಗಾಗಿ ಮೋದಿ ಮುಖ ನೋಡಿ ಎಂದು ಹೇಳಲು ಬಿಜೆಪಿ ಹಿಂದೆ ಮುಂದೆ ನೋಡುವುದಿಲ್ಲ . ನಮ್ಮ ಪಕ್ಷಕ್ಕೆ ಸಂಪೂರ್ಣ ಅಧಿಕಾರ ನೀಡಿ, ಆಗ ಬಿಜೆಪಿ ಮಾಡುವ ಕೆಲಸದ ಪರಿಯೇ ಬೇರೆ ಆಗಿರುತ್ತದೆ ಎಂಬುದು.

ಇದನ್ನೂ ಓದಿ: Karnataka Polls: ಜಾತಿ ಮೀಸಲಾತಿ ನಿರ್ಣಯ; ಬಿಜೆಪಿಗೆ ವರವೋ?

ಇದರ ಜೊತೆಗೆ ಮೋದಿ, ತಮ್ಮ ಭಾಷಣದಲ್ಲಿ, ಸ್ಥಳೀಯ ಸಾಂಸ್ಕೃತಿಕ, ಸಾಮಾಜಿಕ ಹರಿಕಾರರನ್ನು ನೆನೆಯುವುದು ಮತ್ತು ಆ ಮೂಲಕ ಮತದಾರರ ಜೊತೆ ಹೃದಯದ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಈ ಹಿಂದೆ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲ, ಮೋದಿ, ಕಾಂಗ್ರೆಸ್ ಆಡಳಿತವಿದ್ದಾಗ ಯಾವ ರೀತಿಯ ಅನಾನುಕೂಲ ಜನರಿಗೆ ಆಗಿತ್ತು ಎನ್ನುವುದನ್ನು ತಮ್ಮದೇ ಧಾಟಿಯಲ್ಲಿ ಹೇಳುತ್ತಾರೆ. ಇದರ ಜೊತೆಗೆ ಡಬಲ್ ಇಂಜಿನ್ ಸರಕಾರ ಬಂದ ಮೇಲೆ ಜನರಿಗೆ ಯಾವ ರೀತಿಯ ಪ್ರಯೋಜನ ಆಯ್ತು ಎನ್ನುವುದನ್ನು ಅವರು ಹೇಳುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ಸ್ಪಷ್ಟ ನೀತಿಗಳು ಕರ್ನಾಟಕ್ಕೆ ಕೂಡ ಹೇಗೆ ಸಹಾಯಕವಾಯ್ತು ಎಂಬುದನ್ನು ಅವರು ಹೇಳದೇ ಇರಲಾರರು. ಜಾತೀ ಮೀಸಲಾತಿಯ ವಿಚಾರದಲ್ಲಿಕಾಂಗ್ರೆಸ್ ಪಕ್ಷ ಗೊಂದಲದಲ್ಲಿ ಇರುವಂತಿದೆ. ಮುಸ್ಲಿಂರನ್ನು ಓಲೈಸಲು ಹೋಗಿ ಒಕ್ಕಲಿಗರು ಮತ್ತು ಲಿಂಗಾಯತರು ಆ ಪಕ್ಷದಿಂದ ದೂರ ಹೋಗುವ ಸಾಧ್ಯತೆ ಇರುವಂತೆ ಕಾಣುತ್ತಿದೆ. ತಮ್ಮ ಸಭೆಗಳಲ್ಲಿ, ಈ ವಿಚಾರವನ್ನು ಪ್ರಧಾನಿ ಘಂಟಾಘೋಷವಾಗಿ ಹೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಕ್ಷದ ಉಳುದ ನಾಯಕರು ಮಾಡಿದಂತೆ, ಅವರು ಸಹ, ಅಭ್ಯರ್ಥಿಗಳಿಗಿಂತ ಪಕ್ಷದ ಚಿಹ್ನೆಗೆ ಮತ ಕೇಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ