Karnataka Assembly Election 2023 Highlights: ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಭೆ ಆರಂಭ

| Updated By: ಗಂಗಾಧರ​ ಬ. ಸಾಬೋಜಿ

Updated on:Apr 21, 2023 | 10:20 PM

Breaking News Today Highlights Updates: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಉಮೇದುವಾರಿಕೆ ವಾಪಸ್​ ಪಡೆಯಲು ಏ.25 ಕೊನೆಯದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗುತ್ತದೆ. ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​ನಲ್ಲಿ...

Karnataka Assembly Election 2023 Highlights: ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಭೆ ಆರಂಭ
ಕೇಂದ್ರ ಸಚಿವ ಅಮಿತ್ ಶಾ

ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಉಮೇದುವಾರಿಕೆ ವಾಪಸ್​ ಪಡೆಯಲು ಏ.24 ಕೊನೆಯದಿನವಾಗಿದೆ. ಇಂದು (ಏ.21) ಚುನಾವಣಾ ಅಧಿಕಾರಿಗಳು ನಾಮಪತ್ರಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಕಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಈ ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿದ್ದು, ಡಿಕೆ ಶಿವಕುಮಾರ್​ ಅವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ತಮ್ಮ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ನಿನ್ನೆ (ಏಪ್ರಿಲ್ 20) ಸಹೋದರ ಸಂಸದ ಡಿಕೆ ಸುರೇಶ್​ ಅವರಿಂದಲೂ ನಾಮಪತ್ರ ಹಾಕಿಸಿದ್ದಾರೆ. ಬಿಜೆಪಿ ಪಾಳಯದ ಕೇಂದ್ರ ಕಮಲಕಲಿಗಳು ರಾಜ್ಯ ಪ್ರವಾಸದಲ್ಲಿದ್ದು, ತಮ್ಮದೆಯಾದ ಚುನಾವಣಾ ತಂತ್ರ-ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್​​​​

LIVE NEWS & UPDATES

The liveblog has ended.
  • 21 Apr 2023 09:54 PM (IST)

    Karnataka Assembly Election 2023 Live: ಬಡವರು ಬಡವರಾಗಿಯೇ ಇರಲಿ ಎಂದು ಬಯಸುವ ಪಕ್ಷ ಕಾಂಗ್ರೆಸ್​: ಬಿವೈ ವಿಜಯೇಂದ್ರ

    ಮೈಸೂರು: ಉಚಿತ ಘೋಷಣೆಗಳ ಮೂಲಕ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊರಟಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ದೇಶದಲ್ಲಿ ಸುದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಬಡವರು ಬಡವರಾಗಿಯೇ ಇರಲಿ ಎಂದು ಬಯಸಿತ್ತು ಎಂದು ಕಿಡಿಕಾರಿದ್ದಾರೆ.

  • 21 Apr 2023 09:20 PM (IST)

    Karnataka Assembly Election 2023 Live: ಮನೆಮನೆಗೆ ತೆರಳಿ ಮತಯಾಚನೆ ಮಾಡಿದ ಅಶ್ವಥ್ ನಾರಾಯಣ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅಶ್ವಥ್ ನಾರಾಯಣ ಪ್ರಚಾರ ಆರಂಭಿಸಿದ್ದಾರೆ. ಸುಬ್ರಹ್ಮಣ್ಯನಗರದ ಇ ಬ್ಲಾಕ್​ನಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತಯಾಚನೆ ಮತಯಾಚನೆ ಮಾಡಿದ್ದಾರೆ. ಅಶ್ವಥ್ ನಾರಾಯಣ್​ಗೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

  • 21 Apr 2023 08:57 PM (IST)

    Karnataka Assembly Election 2023 Live: ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಭಿಸಿದ್ದೇನೆ

    ಮೈಸೂರು: ವರಿಷ್ಠರ ತೀರ್ಮಾನದಂತೆ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಭಿಸಿದ್ದೇನೆ. ಶ್ರೀವತ್ಸ ಅಭ್ಯರ್ಥಿ ಆಗ್ತಾರೆಂದು ನಾನು ಕಲ್ಪನೆ ಮಾಡಿಕೊಂಡಿರಲಿಲ್ಲ ಎಂದರು.

  • 21 Apr 2023 08:33 PM (IST)

    Karnataka Assembly Election 2023 Live: ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳಲ್ಲಿ 8 ನಾಮಪತ್ರಗಳು ತಿರಸ್ಕೃತ

    ಚಿತ್ರದುರ್ಗ: ಜಿಲ್ಲೆಯ 6 ಕ್ಷೇತ್ರಗಳಲ್ಲಿ 8 ನಾಮಪತ್ರಗಳು ತಿರಸ್ಕೃತ ಮಾಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭುರಿಂದ ಮಾಹಿತಿ ನೀಡಿದ್ದಾರೆ. 90 ನಾಮಪತ್ರಗಳು ಕ್ರಮಬದ್ಧ, 8 ನಾಮಪತ್ರಗಳು, ಮೊಳಕಾಲ್ಮೂರು ಕ್ಷೇತ್ರದಲ್ಲಿ 12, ಹೊಸದುರ್ಗ ಕ್ಷೇತ್ರದಲ್ಲಿ 15, ಹೊಳಲ್ಕೆರೆ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಮೂರು ಕ್ಷೇತ್ರಗಳ ಎಲ್ಲಾ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, ಚಳ್ಳಕೆರೆಯಲಿ 8 ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ ಮಾಡಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ 29 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿದ್ದು, 6 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ, ಹಿರಿಯೂರಲ್ಲಿ 14 ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ ಮಾಡಲಾಗಿದೆ.

  • 21 Apr 2023 08:15 PM (IST)

    Karnataka Assembly Election 2023 Live: ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ

    ಹಾಸನ: ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ, ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್ ಗೌಡ ಹೇಳಿದರು. ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಕೃಷ್ಣೇಗೌಡ ಮನವೊಲಿಸುವ ಬಗ್ಗೆ ಕಾಂಗ್ರೆಸ್ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.

  • 21 Apr 2023 07:35 PM (IST)

    Karnataka Assembly Election 2023 Live: ಕೆಲ ಹೊತ್ತಿನಲ್ಲೇ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಭೆ

    ಬೆಂಗಳೂರು: ಕೆಲ ಹೊತ್ತಿನಲ್ಲೇ ಅಮಿತ್ ಶಾ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ. ವಿವಿಧ ರಾಜ್ಯಗಳಿಂದ ಬಂದಿರುವ ವಿಸ್ತಾರಕರು, ಚುನಾವಣಾ ಪ್ರಚಾರ ಮತ್ತು ನಿರ್ವಹಣಾ ಸಮಿತಿ ಸದಸ್ಯರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೇರಿ ಪ್ರಮುಖರು ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

  • 21 Apr 2023 07:10 PM (IST)

    Karnataka Assembly Election 2023 Live: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಫುಡ್ ಕಿಟ್​ಗಳು ಜಪ್ತಿ

    ರಾಮನಗರ: ಚನ್ನಪಟ್ಟಣ ತಾಲೂಕಿನ ‌ಚಿಕ್ಕಮಳೂರು ಗ್ರಾಮದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 500ಕ್ಕೂ ಹೆಚ್ಚು ಫುಡ್ ಕಿಟ್​ಗಳು ಜಪ್ತಿ ಮಾಡಲಾಗಿದೆ. ದಾಳಿ ನಡೆಸಿ ಫ್ಲೈಯಿಂಗ್ ‌ಸ್ಕ್ವಾಡ್​ ಅಧಿಕಾರಿಗಳಿಂದ ಪರಿಶೀಲನೆ ವೇಳೆ ಪತ್ತೆ. ಚನ್ನಪಟ್ಟಣ ‌ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 21 Apr 2023 07:06 PM (IST)

    Karnataka Assembly Election 2023 Live: ನರೇಂದ್ರ ಮೋದಿಯವರ ಬ್ರಹ್ಮಾಸ್ತ್ರಗಳು ವರ್ಕೌಟ್ ಆಗೊಲ್ಲ

    ಬೆಂಗಳೂರು: ಪ್ರಸನ್ನ ಕುಮಾರ್ ಟಿಕೆಟ್ ಸಿಗದೆ ವಂಚಿತರಾಗಿದ್ದರು. ಇಂದು ನಮ್ಮ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ಕೆಲಸ ಮಾಡಲಿದ್ದಾರೆ. ಕನಿಷ್ಠ 5 ಸ್ಥಾನಗಳನ್ನ ಗೆಲ್ಲಬೇಕು ಅಂತ ಪ್ರಸನ್ನ ಹಾಗೂ ಮಂಜುನಾಥ್ ಹೊರಟಿದ್ದಾರೆ. ಇದಕ್ಕಾಗಿ ಅವರಿಬ್ಬರಿಗೂ ನಾನು ಚಿರರುಣಿ. ನರೇಂದ್ರ ಮೋದಿಯವರ ಬ್ರಹ್ಮಾಸ್ತ್ರಗಳು ವರ್ಕೌಟ್ ಆಗೊಲ್ಲ. ಯಾರು ಏನೇ ಹೇಳಿದ್ರೂ ಅವರು ಅಧಿಕಾರಕ್ಕೆ ಬರೊಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

  • 21 Apr 2023 06:43 PM (IST)

    Karnataka Assembly Election 2023 Live: ನನ್ನ ಉಸಿರು ಇರೋವರೆಗೂ ವರುಣ ಜನರನ್ನು ಕೈಬಿಡುವುದಿಲ್ಲ

    ಮೈಸೂರು: ಮೇ 13ರಂದು ಕಾಂಗ್ರೆಸ್, ಜೆಡಿಎಸ್​ಗೆ ದೊಡ್ಡ ಆಘಾತ ಕಾದಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಜಿಲ್ಲೆಯ ಟಿ.ನರಸೀಪುರದಲ್ಲಿ ಮಾತನಾಡಿದ ಅವರು, ನನ್ನ ಉಸಿರು ಇರೋವರೆಗೂ ವರುಣ ಜನರನ್ನು ಕೈಬಿಡುವುದಿಲ್ಲ. ಪಕ್ಷಕ್ಕಾಗಿ ಹಗಲಿರುಳು ಎಲ್ಲರೂ ದುಡಿಯೋಣ. ಈ ಬಾರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವ ದುಷ್ಟ ಶಕ್ತಿಯೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • 21 Apr 2023 06:03 PM (IST)

    Karnataka Assembly Election 2023 Live: ಕೆಂಪರಾಜು ಬೆಂಬಲಿಗರಿಂದ ಮತದಾರರಿಗೆ ಆಮೀಷ: 5.50 ಲಕ್ಷ ರೂ. ಹಣ ಜಪ್ತಿ

    ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ನಕ್ಕಲಹಳ್ಳಿಯಲ್ಲಿ ಮತದಾರರಿಗೆ ಹಂಚುತ್ತಿದ್ದ 5.50 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಹಣ ಹಂಚಲು ಬಳಕೆ ಮಾಡ್ತಿದ್ದ ಕಾರು ಸಹ ವಶಕ್ಕೆ ಪಡೆಯಲಾಗಿದೆ.  ಗೌರಿಬಿದನೂರು ಪಕ್ಷೇತರ ಅಭ್ಯರ್ಥಿ ಕೆ.ಕೆಂಪರಾಜು ಬೆಂಬಲಿಗರಿಂದ ಹಣ ಹಂಚಿಕೆ ಮಾಡಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • 21 Apr 2023 05:59 PM (IST)

    Karnataka Assembly Election 2023 Live: ಏಳು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಸಿದ್ಧರಾಮಯ್ಯ ಪ್ರಚಾರ

    ಬೆಂಗಳೂರು: ಸೋಮವಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಆರಂಭಿಸಲಿದ್ದು, ಸತತ ಏಳು ದಿನಗಳ ಕಾಲ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಏಳು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

  • 21 Apr 2023 05:20 PM (IST)

    Karnataka Assembly Election 2023 Live: ಜಗದೀಶ್​ ಶೆಟ್ಟರ್​ ಸೋಲಿಸಲು ಬಿಜೆಪಿ ರಣತಂತ್ರ

    ಹುಬ್ಬಳ್ಳಿ: ಜಗದೀಶ್​ ಶೆಟ್ಟರ್​ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು, ಕೈ ಹಿಡಿದ ಶೆಟ್ಟರ್​ಗೆ ಶಾಕ್ ಕೊಡಲು RSS ಅಖಾಡಕ್ಕಿಳಿದಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರವೇ RSS ಟಾರ್ಗೆಟ್ ಮಾಡಿದ್ದು, ನಾಗ್ಪುರದಿಂದ 50 ವಿಶೇಷ ಪ್ರಚಾರಕರು, ವಿಸ್ತಾರಕರು ಎಂಟ್ರಿ ಕೊಟ್ಟಿದ್ದಾರೆ. BJP ಕಾರ್ಯಕರ್ತರಲ್ಲದೇ ಸಂಘದಿಂದ್ಲೂ ಪ್ರತ್ಯೇಕ ಪ್ರಚಾರ ಸಾಧ್ಯೆತೆ ಇದೆ.

  • 21 Apr 2023 04:58 PM (IST)

    Karnataka Assembly Election 2023 Live: ಮಳೆಯಿಂದಾಗಿ ಅಮಿತ್ ಶಾ ರೋಡ್‌ ಶೋ ರದ್ದು: ಬೆಂಗಳೂರಿನತ್ತ ತೆರಳುವ ಸಾಧ್ಯತೆ

    ಬೆಂಗಳೂರು ಗ್ರಾಮಾಂತರ: ಮಳೆಯಿಂದ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಅಮಿತ್ ಶಾ ರೋಡ್‌ಶೋ ರದ್ದು ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ರೋಡ್‌ ಶೋ ನಡೆಸಬೇಕಿತ್ತು. ದೇವನಹಳ್ಳಿ ಸುತ್ತಮುತ್ತ ಮಳೆ ಹಿನ್ನೆಲೆ ರೋಡ್‌ಶೋ ಕ್ಯಾನ್ಸಲ್​ ಮಾಡಲಾಗಿದೆ. ಸದ್ಯ ಕೆಐಎಬಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಜಯಪುರ ಬದಲಿಗೆ ಬೆಂಗಳೂರಿನತ್ತ ತೆರಳುವ ಸಾಧ್ಯತೆ ಇದೆ.

  • 21 Apr 2023 04:34 PM (IST)

    Karnataka Assembly Election 2023 Live: ಪುತ್ರ ಮಲ್ಲಿಕಾರ್ಜುನ ಗೆಲ್ಲುವ ವಿಶ್ವಾಸವಿದೆ: ಮಾಡಾಳ್ ವಿರೂಪಾಕ್ಷಪ್ಪ

    ದಾವಣಗೆರೆ: ನನಗೆ ಹಾಗೂ ನನ್ನ ಪುತ್ರನಿಗೆ ಬಿಜೆಪಿ ಟಿಕೆಟ್​ ಕೊಡಲಿಲ್ಲ. ಇದೇ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಪುತ್ರ ಕಣಕ್ಕಿಳಿದ್ದಾನೆ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.  ಸ್ವಾಭಿಮಾನಿ ಹೆಸರಿನಲ್ಲಿ ನನ್ನ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಚನ್ನಗಿರಿ ವಿಧಾನಸಭೆ ಕ್ಷೇತ್ರದಲ್ಲಿ  ನನ್ನದೇ ಆದ ತಂಡ ಇದೆ. ಚನ್ನಗಿರಿ ಕ್ಷೇತ್ರದಲ್ಲಿ ಪುತ್ರ ಮಲ್ಲಿಕಾರ್ಜುನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

  • 21 Apr 2023 04:18 PM (IST)

    Karnataka Assembly Election 2023 Live: ಚಾಮರಾಜಪೇಟೆ ‘ಕೈ’ ಅಭ್ಯರ್ಥಿ ಜಮೀರ್ ನಾಮಪತ್ರ ಅಂಗೀಕಾರ

    ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್​ ಅಭ್ಯರ್ಥಿ ಜಮೀರ್ ನಾಮಪತ್ರವನ್ನು ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ನಾಮಪತ್ರ ಅಂಗೀಕರಿಸದಂತೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ತಾಯಿಯ ಹೆಸರು ಉಲ್ಲೇಖಿಸಿಲ್ಲವೆಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ಚುನಾವಣಾಧಿಕಾರಿಯೂ ಈ ಬಗ್ಗೆ ಎಚ್ಚರಿಕೆ ನೀಡದ ಹಿನ್ನೆಲೆ ಜಮೀರ್ ಅಹ್ಮದ್ ನಾಮಪತ್ರ ಅಂಗೀಕರಿಸಿರಲಿಲ್ಲ.

  • 21 Apr 2023 03:59 PM (IST)

    Karnataka Assembly Election 2023 Live: ಆಮ್​ ಆದ್ಮಿ ಪಕ್ಷದ 40 ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ

    ಬೆಂಗಳೂರು: ಆಮ್​ ಆದ್ಮಿ ಪಕ್ಷದ 40 ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ ಸಿಎಂ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ರಾಜ್ಯಸಭಾ ಸದಸ್ಯರಾದ ಹರ್ಭಜನ್ ಸಿಂಗ್, ರಾಘವ್ ಚಡ್ಡಾ, ಟೆನ್ನಿಸ್ ಕೃಷ್ಣ ಸೇರಿದಂತೆ 40 ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

  • 21 Apr 2023 03:37 PM (IST)

    Karnataka Assembly Election 2023 Live: ಡಿ.ಕೆ.ಶಿವಕುಮಾರ್​ಗೆ ಸಿಎಂ ಬೊಮ್ಮಾಯಿ ಟಾಂಗ್​

    ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ವಾರ್​ ಶುರುವಾಗಿದ್ದು, ಡಿ.ಕೆ.ಶಿವಕುಮಾರ್​ ಅವರೇ ಲಿಂಗಾಯತ ಡ್ಯಾಂ ಬಗ್ಗೆ ಮಾತನಾಡಿದ್ದೀರಿ. ಲಿಂಗಾಯತ ಡ್ಯಾಂ ಎಷ್ಟು ಗಟ್ಟಿ ಇದೆ ಎಂಬ ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರವಿದ್ದಾಗ ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ ಎಂದು ಡಿಕೆಶಿಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

  • 21 Apr 2023 03:14 PM (IST)

    Karnataka Assembly Election 2023 Live: ಪಕ್ಷದ ಸಿದ್ಧಾಂತ ಒಪ್ಪಿ ಬಂದವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ

    ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ ಸಂಪೂರ್ಣ ನೆಲಸಮ ಆಗುತ್ತದೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕಿಡಿಕಾರಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ 135ರಿಂದ 140 ಸ್ಥಾನ ಗೆಲ್ಲುತ್ತದೆ. ನಾಳೆ ಅಥವಾ ನಾಡಿದ್ದು ನಮ್ಮ ಪ್ರಚಾರ ಕಾರ್ಯ ಆರಂಭವಾಗಲಿದೆ. ರಾಜ್ಯದಲ್ಲಿ ಮೋದಿ, ಅಮಿತ್ ಶಾ ಚುನಾವಣಾ ಪ್ರಚಾರ ಮಾಡ್ತಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬಂದವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

  • 21 Apr 2023 03:07 PM (IST)

    Karnataka Assembly Election 2023 Live: ಸಿಎಂ ಬೊಮ್ಮಾಯಿ ಪರ ಪತ್ನಿ ಚೆನ್ನಮ್ಮ ಬೊಮ್ಮಾಯಿ ಮತಯಾಚನೆ

    ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಪರ ಪತ್ನಿ ಚೆನ್ನಮ್ಮ ಬೊಮ್ಮಾಯಿ ಮತಯಾಚನೆ ಮಾಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಿಕ್ಕನೆಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಮತ್ತೆ ಗೆದ್ದು ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

  • 21 Apr 2023 02:29 PM (IST)

    Karnataka Assembly Election Live: ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗೆ ದೂರು

    ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್   ಅವರ ನಾಮಪತ್ರ ತಿರಸ್ಕೃತ ಮಾಡುವಂತೆ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ನಾಮಪತ್ರದಲ್ಲಿ ಸಾಕಷ್ಟು ಲೋಪದೋಷಗಳಿವೆ‌ ಎಂದು ನವ ಭಾರತ ಸೇನಾ ಪಾರ್ಟಿಯ ವಿಧಾನಸಭಾ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರು ಸೇರಿಕೊಂಡು ದೂರು ನೀಡಿದ್ದಾರೆ.

  • 21 Apr 2023 02:05 PM (IST)

    Karnataka Assembly Election Live: ಧಾರವಾಡ ಪ್ರವೇಶಕ್ಕೆ ವಿನಯ್​ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ

    ಧಾರವಾಡ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಕಾಂಗ್ರೆಸ್​ ನಾಯಕ ವಿನಯ್ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​​ ತಿರಸ್ಕರಿಸಿದೆ.

  • 21 Apr 2023 01:00 PM (IST)

    Karnataka Assembly Election Live: ಡಿಕೆ ಶಿವಕುಮಾರ್​ಗೆ ಬಿಗ್​ ರಿಲೀಫ್​​, ನಾಮಪತ್ರ ಅಂಗೀಕಾರ

    ಬೆಂಗಳೂರು: ಸಾಕಷ್ಟು ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಾಮಪತ್ರ ಅಂಗೀಕಾರಗೊಂಡಿದೆ. ಇದರಿಂದ ಕನಕಪುರದಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಡಿಕೆ ಶಿವಕುಮಾರ್​ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ಮಾಹಿತಿ ಮತ್ತು ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಬೇರೆಯೇ ಇದೆ.  ಹೀಗಾಗಿ ಡಿಕೆಶಿ ನಾಮಪತ್ರ ತಿರಸ್ಕಾರ ಆಗುವ ಆತಂಕವಿತ್ತು. ಆದರೆ ಎಲ್ಲ ಆಂತಕಗಗಳು ಶಮನವಾಗಿದೆ.

  • 21 Apr 2023 12:37 PM (IST)

    Karnataka Assembly Election Live: ಡಿಕೆ ಶಿವಕುಮಾರ್​ ನಾಮಪತ್ರ ತಿರಸ್ಕೃತವಾಗುವ ಅನುಮಾನವಿದೆ: ಡಿಕೆ ಸುರೇಶ್​

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ನಾಮಪತ್ರ ತಿರಸ್ಕೃತವಾಗುವ ಅನುಮಾನವಿದೆ. ಹಾಗಾಗಿ ನಾನು ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿಯವರು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಡೌನ್​ಲೋಡ್​ ಮಾಡಿದ್ದಾರೆ. ಬಿಜೆಪಿಯ ಕುತಂತ್ರ ಮತ್ತು ಷಡ್ಯಂತ್ರ ಬಗ್ಗೆ ನಮಗೆ ಮಾಹಿತಿ ಬಂತು. ಪಕ್ಷದ ವರಿಷ್ಠರಿಂದ ಮಾಹಿತಿ ಬಂದ ಹಿನ್ನೆಲೆ ನಾಮಪತ್ರ ಸಲ್ಲಿಸಿದ್ದೇನೆ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

  • 21 Apr 2023 12:29 PM (IST)

    Karnataka Assembly Election Live: ಬೀದರ್​ನಲ್ಲಿ ವಿವಿಧ ಸಮುದಾಯದ ಸ್ವಾಮೀಜಿಗಳೊಂದಿಗೆ ಜೆಪಿ ನಡ್ಡಾ ಸಭೆ

    ಬೀದರ್​: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು(ಏ.21) ಬೀದರ್​ ಜಿಲ್ಲೆ ಪ್ರವಾಸದಲ್ಲಿದ್ದು, ಜೆಪಿ ನಡ್ಡಾ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜಿಲ್ಲೆಯ ಪ್ರಮುಖ ಸ್ವಾಮೀಜಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಚಳಕಾಪುರ ಸಿದ್ಧಾರೂಢ ಮಠದ ಶಿವಕುಮಾರ್ ಮಾಹಾಸ್ವಾಮೀಜಿ, ಭಾವಗಿ ಲಿಂಗೇಶ್ವರ ಭಾವಗಿ ಮಠ ಚನ್ನಬಸವ ಸ್ವಾಮೀಜಿ  ಸೇರಿದಂತೆ ಜಿಲ್ಲೆಯ 15 ಕ್ಕೂ ವಿವಿಧ ಜಾತಿಯ ಸ್ವಾಮೀಜಿಗಳು ಭಾಗಿಯಾಗಿದ್ದಾರೆ. ವಿವಿಧ ಸಮುದಾಯದ ಸ್ವಾಮೀಜಿಗಳೊಂದಿಗೆ ಸಭೆ ನಡೆಸಿ ಮತ ಸೆಳೆಯಲು ರಣತಂತ್ರ

  • 21 Apr 2023 11:54 AM (IST)

    Karnataka Assembly Election Live: ಕನಕಪುರದಲ್ಲಿ ಯಾರು ಸ್ಪರ್ಧಿಸ್ತಾರೆಂದು ಕಾಲವೇ ಉತ್ತರ ನೀಡುತ್ತೆ: ಡಿಕೆ ಶಿವಕುಮಾರ್​​

    ಬೆಂಗಳೂರು: ಕನಕಪುರದಲ್ಲಿ ಯಾರು ಸ್ಪರ್ಧಿಸ್ತಾರೆಂದು ಕಾಲವೇ ಉತ್ತರ ನೀಡುತ್ತೆ. ಷಡ್ಯಂತ್ರ, ಕುತಂತ್ರ ಎಲ್ಲವೂ ನಡೆಯುತ್ತಿದೆ. ಬಿಜೆಪಿ ನಾಯಕರು ಏನು ಬೇಕಾದರೂ ಮಾಡಿಕೊಳ್ಳಲಿ. ಯಾರ ಅನುಕಂಪ ಕೂಡ ನಮಗೆ ಬೇಕಾಗಿಲ್ಲ. ಯಾರ ಅನುಕಂಪ ಕೂಡ ನಮಗೆ ಬೇಕಾಗಿಲ್ಲ. ಮನೆಯಿಂದ ಹೊರಹಾಕಿ ಬಿಟ್ಟರೆ ನಾವು ಒದ್ದಾಡಬೇಕಾಗುತ್ತಲ್ಲ. ಅದಕ್ಕಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

  • 21 Apr 2023 11:50 AM (IST)

    Karnataka Assembly Election Live: ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ: ಡಿಕೆ ಶಿವಕುಮಾರ್​

    ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಈ ವಿಚಾರವಾಗಿ ಇಂದು (ಏ.21) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಏನೇ ಷಡ್ಯಂತ್ರ ಮಾಡುತ್ತಿದ್ದಾರೆ ಗೊತ್ತಿದೆ. ಕಳೆದ ಬಾರಿಯೇ ನನ್ನ ಆಸ್ತಿ ಮೌಲ್ಯದ ಬಗ್ಗೆ ವಿವರಣೆ ನೀಡಬೇಕಾಯ್ತು. ನಾನು ಹೊಸ ಆಸ್ತಿ ಯಾವುದನ್ನೂ ಕೂಡ ಖರೀದಿ ಮಾಡಿಲ್ಲ. ನನ್ನ ವಿರುದ್ದ ಷಡ್ಯಂತ್ರ ಮಾಡ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

    ನನ್ನನ್ನು ಹೇಗಾದರೂ ಮಾಡಿ ಚಚ್ಚಿ ಚಚ್ಚಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವನು ಇರುವುದಕ್ಕೆ ತಾನೇ ಕಾಂಗ್ರೆಸ್ ಗಟ್ಟಿಯಾಗುತ್ತಿದೆ ಅಂತ, ವಿರೋಧಿಗಳು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ಬಂದ ತೀರ್ಪಿನ ಬಗ್ಗೆ ಕೇಳ್ತಾ ಇದ್ದೀರಿ. ರಾಜಕೀಯ ಸೀನ್​​ನಿಂದಲೇ ನಮ್ಮನ್ನು ತೆಗೆದು ಹಾಕಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕೇವಲ ಒಂದೇ ದಿನದಲ್ಲಿ ಏನೇನೋ ಮಾಡಿದರಲ್ಲ. ಸೋನಿಯಾ ಗಾಂಧಿ ಅವರಿಗೆ ಕೊಡಬಾರದ ಕಾಟ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • 21 Apr 2023 11:41 AM (IST)

    Karnataka Assembly Election Live: ಸಿದ್ದರಾಮಯ್ಯ ನಯವಂಚಕ, ದಲಿತ ವಿರೋಧಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ನಯವಂಚಕ ಮತ್ತು ದಲಿತ ವಿರೋಧಿ. 2006ರಲ್ಲಿ ದಲಿತ ಸಮುದಾಯ ಸಿದ್ದರಾಮಯ್ಯಗೆ ರಕ್ಷಣೆ ನೀಡಿದ್ದರು. ಆದರೆ ಸಿದ್ದರಾಮಯ್ಯರಿಂದಲೇ ದಲಿತ ನಾಯಕತ್ವ ಕೊನೆಯಾಯಿತು. ಈ ಬಾರಿ ದಲಿತ ಸಮುದಾಯ ಸಿದ್ದರಾಮಯ್ಯರ ಕೈಹಿಡಿಯುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರಿಗಾಗಿ ದಲಿತರು ಪ್ರಾಣ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅದನ್ನು ಉಳಿಸಿಕೊಳ್ಳಲಿಲ್ಲ. ಡಾ. ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ್​ ಖರ್ಗೆಯವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಮತ್ತು ಅವರ ಪಟಾಲಂ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದಿದ್ದರೇ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಬೇಕಿತ್ತು ? ಯಾಕೆ ಚಾಮುಂಡೇಶ್ವರಿ ಬಿಟ್ಟು ವರುಣಾಗೆ ಏಕೆ ಬಂದರು? ಎಂದು  ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

  • 21 Apr 2023 10:56 AM (IST)

    Karnataka Assembly Election Live: 224 ಕ್ಷೇತ್ರಗಳಲ್ಲಿ ನಾಮಪತ್ರ ಪರಿಶೀಲನೆ ಆರಂಭ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಏಜೆಂಟ್ ಗಳು ಅಥವಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಹಲವು ಹಂತಗಳಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಪರಿಶೀಲನೆ ವೇಳೆ ನಾಲ್ವರಿಗೆ ಮಾತ್ರ ಹಾಜರಿರಲು ಅವಕಾಶ ನೀಡಲಾಗಿದೆ. ನಾಮಪತ್ರ ಪರಿಶೀಲನೆ ವೇಳೆ ಖುದ್ದು ಅಭ್ಯರ್ಥಿಯೇ ಹಾಜರಾಗಬಹುದು. ಅಲ್ಲದೇ ಅಭ್ಯರ್ಥಿ ನೇಮಕ ಮಾಡಿಕೊಂಡಿರುವ ಚುನಾವಣಾ ಏಜೆಂಟ್ ಕೂಡಾ ಭಾಗಿಯಾಗಬಹುದು.

  • 21 Apr 2023 10:50 AM (IST)

    Karnataka Assembly Election Live: ಇಂದಿನಿಂದ ಅಮಿತ್​ ಶಾ ಎರಡು ದಿನ ರಾಜ್ಯ ಪ್ರವಾಸ

    ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್​ ನಾಯಕರು ರಾಜ್ಯ ಪ್ರವಾಸದಲ್ಲಿದ್ದು, ಇಂದು (ಏ.21) ಬೆಂಗಳೂರಿಗೆ ಆಗಮಿಸಲಿದ್ದಾರೆ.ಚುನಾವಣಾ ಚಾಣಕ್ಯ ಅಮಿತ್​ ಶಾ ಅವರು ಇಂದು ಮಧ್ಯಾಹ್ನ 3:15ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.45ಕ್ಕೆ ದೇವನಹಳ್ಳಿಯಲ್ಲಿ ಅಮಿತ್ ಶಾ ಅವರ ರೋಡ್​ ಶೋ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ರೇಸ್​ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್​ಗೆ ಬರಲಿದ್ದು, ರಾತ್ರಿ 7.45ರಿಂದ 9ರವರೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ರಾತ್ರಿ ರೇಸ್​​ಕೋರ್ಸ್​ ರಸ್ತೆಯ ಹೋಟೆಲ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

    ನಾಳೆ (ಏ.22) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.

  • 21 Apr 2023 10:14 AM (IST)

    Karnataka Assembly Election Live: ಕೆಎಸ್​ ಈಶ್ವರಪ್ಪ ರಾಜಕೀಯ ನಡೆಗೆ ಪ್ರಧಾನಿ ಮೋದಿ ಶ್ಲಾಘನೆ

    ಶಿವಮೊಗ್ಗ: ಚುನಾವಣಾ ರಾಜಕೀಯಕ್ಕೆ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆ ಕೆ.ಎಸ್​.ಈಶ್ವರಪ್ಪ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಕೆ.ಎಸ್​.ಈಶ್ವರಪ್ಪ ಅವರ ನಡೆಯನ್ನು ಶ್ಲಾಘಿಸಿದ್ದಾರೆ.

  • 21 Apr 2023 10:06 AM (IST)

    Karnataka Assembly Election Live: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ 3632 ಅಭ್ಯರ್ಥಿಗಳು

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಧಿ ಮುಕ್ತಾಯವಾಗಿದ್ದು, ಒಟ್ಟು 3632 ಜನ ನಾಮಪತ್ರ ಸಲ್ಲಿಸಿದ್ದಾರೆ.

  • 21 Apr 2023 09:52 AM (IST)

    Karnataka Assembly Election Live: ಜೆಡಿಎಸ್ ಮುಖಂಡ ಬೆಳ್ಳಿ ಲೋಕೆಶ್ ಬಿಜೆಪಿ ಸೇರ್ಪಡೆ

    ತುಮಕೂರು: ಜೆಡಿಎಸ್ ಮುಖಂಡ ಬೆಳ್ಳಿ ಲೋಕೆಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ತುಮಕೂರು ಸಂಸದ ಜಿಎಸ್ ಬಸವರಾಜ್, ಶಾಸಕ‌ ಜ್ಯೋತಿ ಗಣೇಶ್ ಹಾಗೂ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದಾರೆ.

  • 21 Apr 2023 09:50 AM (IST)

    Karnataka Assembly Election Live: ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ವಾಗ್ದಾಳಿ

    ಚಾಮರಾಜನಗರ: ಸೋಮಣ್ಣ ಯಾರು ಎಂದು ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ  ವಿ.ಸೋಮಣ್ಣ ಅವರು ತಿರುಗೇಟು ನೀಡಿದ್ದಾರೆ.  2006ರ ಚುನಾವಣೆಯಲ್ಲಿ ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ. ಬರೀ ಮೈಯಲ್ಲಿ ದೇವಸ್ಥಾನದಿಂದ ಮೈಸೂರಿಗೆ ಹೋಗಿದ್ದೇನೆ. ಅವತ್ತು ಸಿದ್ದರಾಮಯ್ಯಗಾಗಿ ಕೆಲಸ ಮಾಡಿದ್ದೆ. ಇದೆಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಸಾಹೇಬರ ತಲೆಯಲ್ಲಿ ಇಲ್ಲ. ನಾನು ಸಾಹೇಬ್ರೆ ಅಂತೀನಿ, ಅವರು ಏಕವಚನದಲ್ಲಿ ಮಾತನಾಡ್ತಾರೆ. ಈಗ ಅವರು ವಿಪಕ್ಷ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನು ಅಭ್ಯರ್ಥಿ, ಸಿದ್ದರಾಮಯ್ಯ ಕೂಡ ಅಭ್ಯರ್ಥಿ ಎಂದರು.

  • 21 Apr 2023 09:20 AM (IST)

    Karnataka Assembly Election Live: ಸಿಎಂ ಆಗಲು ಏನು ಮಾಡಬೇಕು ಅಂತ ಸೋಮಣ್ಣರನ್ನ ಪ್ರಶ್ನಿಸಿದ ಬಾಲಕ

    ಚಾಮರಾಜನಗರ: ಸಚಿವ ವಿ. ಸೋಮಣ್ಣ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಚಾಮರಾಜನಗರದ ವಿವಿಧೆಡೆ ಮತಯಾಚಿಸುತ್ತಿದ್ದಾರೆ. ಪಾರ್ಕ್​, ಹೋಟೆಲ್​, ಕ್ಯಾಂಟೀನ್​​​, ಅಂಗಡಿಗಳ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಓರ್ವ ಬಾಲಕ ಮುಖ್ಯಮಂತ್ರಿಯಾಗಲು ಏನು ಮಾಡಬೇಕು ಅಂತ ಸೋಮಣ್ಣರನ್ನು ಪ್ರಶ್ನಿಸಿದ್ದಾರೆ.

    ಇದಕ್ಕೆ ವಿ ಸೋಮಣ್ಣ ಅವರು ನೀನು ಏನು ಮಾಡಬೇಡಾ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ-ಗಿಎಂ ಎಲ್ಲಾ ಲೆಕ್ಕ ಇಲ್ಲ ನೀನೆ ದೊಡ್ಡ ಸಿಎಂ. ಚೆನ್ನಾಗಿ ಓದು, ಕ್ರೀಡೆಯಲ್ಲಿ ಆಕ್ಟಿವಾಗಿರು. ಬಾಕಿದೆಲ್ಲಾ ಬಿಟ್ಬಿಡು. ನಿನ್ನ ಹಣೆಯಲ್ಲಿ ಬರೆದಿದ್ದರೇ ಆಗುತ್ತೀಯಾ, ಎಂದು ಬಾಲಕನಿಗೆ ಸೋಮಣ್ಣ ಕಿವಿ ಮಾತು ಹೇಳಿದ್ದಾರೆ.

  • Published On - Apr 21,2023 9:13 AM

    Follow us