UPI ಮೂಲಕ ಬಿಎಂಟಿಸಿಗೆ ಹರಿದುಬಂತು 1 ಕೋಟಿ ರೂ., ದೇಶದಲ್ಲೇ ಮೊದಲು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಯುಪಿಐ ಪಾವತಿಯ ಮೂಲಕ ದಿನಕ್ಕೆ ಒಂದು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಹೊಸ ದಾಖಲೆ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ ಕಳೆದ ಮೂರು ದಿನಗಳಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿದ್ದು, ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ಚಿಲ್ಲರೆ ಜಗಳಕ್ಕೆ ತೆರೆ ಎಳೆದಿದೆ. ಬಿಎಂಟಿಸಿಯ ಯಶಸ್ಸು ಇತರ ಸಾರಿಗೆ ನಿಗಮಗಳಿಗೆ ಮಾದರಿಯಾಗಿದೆ.
Updated on: Feb 07, 2025 | 8:15 AM

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ನಲ್ಲಿ ಬೆಂಗಳೂರು ಜನತೆಯ ಜೀವನಾಡಿಯಾಗಿದೆ. ಪ್ರತಿದಿನ ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆರು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ. ಆದರೆ, ಅದರಲ್ಲಿ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗುವ ಹೊಸ ದಾಖಲೆ ಸೃಷ್ಟಿಯಾಗಿದೆ.

ಈ ಹಿಂದೆ ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡ್ತಿತ್ತು, ಆದರೆ ಜನವರಿ 4 ರ ನಂತರ ಯುಪಿಐ ಮೂಲಕ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇದೀಗ ಕಳೆದ ಮೂರು ದಿನಗಳಿಂದ ಅಂದರೆ ಫೆಬ್ರವರಿಯಲ್ಲಿ ಪ್ರತಿದಿನ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಬಿಎಂಟಿಸಿಗೆ ಬರುತ್ತಿದೆ.

ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದಂತೆ ಆಗಿದೆ. ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ನಿಂತಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿಯಲ್ಲಿ 6500 ಬಸ್ಗಳಿವೆ, ಆ ಬಸ್ಗಳಿಂದ ಪ್ರತಿದಿನ 5 ರಿಂದ 6 ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಹರಿದು ಬರುತ್ತದೆ. ತಿಂಗಳಿಗೆ 180 ಕೋಟಿಯಷ್ಟು ಸಂಗ್ರಹವಾದರೆ, ಅದರಲ್ಲಿ 90 ಕೋಟಿಯಷ್ಟು ಶಕ್ತಿ ಯೋಜನೆ ಟಿಕೆಟ್ ಕಲೆಕ್ಷನ್ ಆಗುತ್ತಿದೆ.

ಅದರಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಕಲೆಕ್ಷನ್ ಆಗುತ್ತಿರುವುದು ವಿಶೇಷ. ಬಿಎಂಟಿಸಿಯ ಎಲ್ಲಾ ಬಸ್ಗಳಲ್ಲೂ UPI ಕೋಡ್ ಅಳವಡಿಸಲಾಗಿದೆ. ಇದರಿಂದ ಬಿಎಂಟಿಸಿಯಲ್ಲಿ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಮುಖಂಡ ಜಗದೀಶ್ ಇದಕ್ಕೆ ನಮ್ಮ ಬಿಎಂಟಿಸಿ ನಿರ್ವಾಹಕರು ಕಾರಣ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಒಟ್ಟಿನಲ್ಲಿ ಪ್ರತಿದಿನ ಬಿಎಂಟಿಸಿ ಬಸ್ನಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ದೊಡ್ಡ ಜಗಳಕ್ಕೆ ಈ ಯುಪಿಐ ಪೇಮೆಂಟ್ ಬ್ರೇಕ್ ಹಾಕಿರುವುದಂತು ಸುಳ್ಳಲ್ಲ.

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ
Read More



