
ಜುಲೈ 28 ರಿಂದ ಆಗಸ್ಟ್ 8 ರವರೆಗೆ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಭಾರತೀಯ ಹಾಕಿ ತಂಡ ಪ್ರಯಾಣ ಬೆಳೆಸಿದೆ. ಇದಕ್ಕೂ ಮುನ್ನ ಮೊದಲು ಭಾರತೀಯ ಪುರುಷರ ಹಾಕಿ ತಂಡವನ್ನು ವಿಶೇಷ ಸಂಭ್ರಮಾಚರಣೆಯ ಮೂಲಕ ಹುರಿದುಂಬಿಸಲಾಯಿತು.

ಬೆಂಗಳೂರಿಗೆ ಆಗಮಿಸಿದ ಭಾರತೀಯ ಹಾಕಿ ತಂಡವನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ವಿಶೇಷವಾಗಿ ಬರಮಾಡಿಕೊಂಡರು. ಅಷ್ಟೇ ಅಲ್ಲದೆ ಆಟಗಾರರ ಫೋಟೋವನ್ನು ಒಳಗೊಂಡ ವಿಶೇಷ ಕೇಕ್ ಅನ್ನು ಕಟ್ ಮಾಡುವ ಮೂಲಕ ಶುಭ ಹಾರೈಸಲಾಯಿತು.

ಇದೇ ವೇಳೆ ಆಟಗಾರರು ಬೆಂಗಳೂರಿನ ಸ್ಥಳೀಯ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದು ವಿಶೇಷ. ಇದೀಗ ಟೀಮ್ ಇಂಡಿಯಾ ಹಾಕಿ ಆಟಗಾರರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರಿಂದಲೂ ಶುಭ ಹಾರೈಕೆಗಳು ಮೂಡಿಬರುತ್ತಿವೆ.

ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕದೊಂದಿಗೆ ಹಿಂತಿರುಗಿದ್ದ ಭಾರತೀಯ ಹಾಕಿ ತಂಡವು ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಡುವ ವಿಶ್ವಾಸದಲ್ಲಿದ್ದಾರೆ.

ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ಅದರಂತೆ ಜುಲೈ 31 ರಂದು ಭಾರತ ತಂಡವು ಇಂಗ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಕಾಮನ್ವೆಲ್ತ್ ಗೇಮ್ಸ್ ಅಭಿಯಾನ ಆರಂಭಿಸಲಿದೆ.

ಭಾರತ ಹಾಕಿ ತಂಡ ಹೀಗಿದೆ: ಪಿಆರ್ ಶ್ರೀಜೇಶ್, ಕೃಷನ್ ಬಹದ್ದೂರ್, ಪಾಠಕ್ (ಗೋಲ್ ಕೀಪರ್ಸ್), ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್ ಪ್ರೀತ್ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಜರ್ಮನ್ ಪ್ರೀತ್ ಸಿಂಗ್ (ಡಿಫೆಂಡರ್ಸ್), ಮನ್ ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶ್ ದೀಪ್ ಸಿಂಗ್, ನೀಲಕಂಠ ಶರ್ಮ (ಮಿಡ್ ಫೀಲ್ಡರ್ಸ್), ಮಂದೀಪ್ ಸಿಂಗ್, ಗುಜರಾತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್ (ಫಾವರ್ಡ್ಸ್)