
ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಮಾಡುವಾಗ, ರಿಷಭ್ ಪಂತ್ ಕಾಲಿಗೆ ಗಾಯವಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಗಾಯದ ಹೊರತಾಗಿಯೂ ಪಂತ್ ಆಟದ ಎರಡನೇ ದಿನದಂದು ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿ ಅರ್ಧಶತಕವನ್ನು ಸಹ ಬಾರಿಸಿದರು.

ಆದಾಗ್ಯೂ, ಗಂಭೀರವಾಗಿ ಗಾಯಗೊಂಡಿದ್ದರೂ ಭಾರತೀಯ ಆಟಗಾರನೊಬ್ಬ ಮೈದಾನಕ್ಕೆ ಕಾಲಿಟ್ಟಿರುವುದು ಇದೇ ಮೊದಲಲ್ಲ. ನೋವಿನ ನಡುವೆಯೂ ಮೈದಾನಕ್ಕೆ ಮರಳಿ ಅದ್ಭುತ ಪ್ರದರ್ಶನ ನೀಡಿದ್ದಲ್ಲದೆ, ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅನೇಕ ಆಟಗಾರರು ಈ ಪಟ್ಟಿಯಲಿದ್ದಾರೆ. ಅತ್ಯಂತ ವಿಶೇಷವೆಂದರೆ ಮಾಜಿ ನಾಯಕರಾದ ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಕೂಡ ಈ ಪಟ್ಟಿಯಲ್ಲಿದ್ದಾರೆ.

1980-81ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಈ ವೇಳೆ ಗಾಯಕ್ಕೆ ತುತ್ತಾಗಿದ್ದ ಕಪಿಲ್ ದೇವ್ ಅದ್ಭುತ ಪ್ರದರ್ಶನ ನೀಡಿದರು. ಈ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕಪಿಲ್ ಮಂಡಿರಜ್ಜು ಗಾಯಕ್ಕೆ ಒಳಗಾದರು. ಆದಾಗ್ಯೂ ಈ ನೋವಿನಲ್ಲೂ ಬೌಲಿಂಗ್ ಮಾಡಿದ್ದ ಕಪಿಲ್ 28 ರನ್ಗಳಿಗೆ 5 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನು 83 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ಈ ಪಂದ್ಯವನ್ನು 59 ರನ್ಗಳಿಂದ ಗೆದ್ದುಕೊಂಡಿತು.

2002 ರಲ್ಲಿ ಆಂಟಿಗುವಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ವೇಗಿ ಮರ್ವಿನ್ ಡಿಲ್ಲನ್ ಅವರ ಚೆಂಡು ಅನಿಲ್ ಕುಂಬ್ಳೆ ಅವರ ಮುಖಕ್ಕೆ ಬಡಿದು ಅವರ ದವಡೆ ಮುರಿದುಹೋಯಿತು. ಆದಾಗ್ಯೂ ಮತ್ತೆ ಕಣಕ್ಕಿಳಿದಿದ್ದ ಅನಿಲ್ ಕುಂಬ್ಳೆ ಬ್ರಿಯಾನ್ ಲಾರಾ ಅವರ ವಿಕೆಟ್ ಪಡೆದರು. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

2011 ರ ವಿಶ್ವಕಪ್ ಸಮಯದಲ್ಲಿ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಹಲವು ಬಾರಿ ವಾಂತಿ ಮಾಡಿಕೊಂಡರು ಆದರೆ ಇದರ ಹೊರತಾಗಿಯೂ ಅವರು 113 ರನ್ಗಳ ಇನ್ನಿಂಗ್ಸ್ ಆಡಿದರು, ಇದರಿಂದಾಗಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 80 ರನ್ಗಳಿಂದ ಗೆದ್ದಿತು.

2022 ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬೆರಳಿನ ಗಾಯಕ್ಕೆ ತುತ್ತಾದರು. ಇದರಿಂದಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರೋಹಿತ್ ಕೇವಲ 28 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಐದು ಸಿಕ್ಸರ್ಗಳ ಸಹಾಯದಿಂದ ಔಟಾಗದೆ 51 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರಾದರೂ ತಮ್ಮ ತಂಡವನ್ನು ಗೆಲುವಿಗೆ ಕೊಂಡೊಯ್ಯುವಲ್ಲಿ ವಿಫಲರಾದರು.