
2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯಲಿದೆ. ಎರಡು ತಂಡಗಳ ಬಲಾಬಲವನ್ನು ನೋಡಿದರೆ, ಈ ಬಾರಿಯೂ ಟೀಂ ಇಂಡಿಯಾವೇ ಗೆಲುವಿನ ಫೆವರೇಟ್ ಎನಿಸಿಕೊಂಡಿದೆ. ಆದಾಗ್ಯೂ ಪಾಕಿಸ್ತಾನದ ಮಾಜಿ ಆಟಗಾರರು ಇದನ್ನು ಅಲ್ಲಗಳೆಯುತ್ತಿದ್ದಾರೆ.

ಏಷ್ಯಾಕಪ್ ವೇಳಾಪಟ್ಟಿ ಪ್ರಕಟವಾದ ಬಳಿಕ ಪಾಕ್ ತಂಡದ ಮಾಜಿ ಆಟಗಾರರು ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತ ಟೀಂ ಇಂಡಿಯಾದ ನ್ಯೂನತೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ಬಾಜಿದ್ ಖಾನ್ ಸೇರಿಕೊಂಡಿದ್ದಾರೆ. ಬಾಜಿದ್ ಖಾನ್, ‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯನ್ನು ಭಾರತ ತುಂಬಾ ಅನುಭವಿಸಲಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಭಾರತ ತಂಡ ಉತ್ತಮವಾಗಿದೆ ಆದರೆ ಕೆಲವು ಸ್ಟಾರ ಆಟಗಾರರ ಅನುಪಸ್ಥಿತಿಯನ್ನು ಅದು ಮಿಸ್ ಮಾಡಿಕೊಳ್ಳುತ್ತದೆ ಎಂದಿದ್ದಾರೆ. ಇದರ ಜೊತೆಗೆ, ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ವಿರುದ್ಧ ಪರಿಣಾಮಕಾರಿಯಾಗಿ ಆಡಿಲ್ಲ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಬಹುದು ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆ ಉತ್ತಮವಾಗಿಲ್ಲ ಎಂದು ಬಾಜಿದ್ ಖಾನ್ ಪಿಟಿವಿ ಸ್ಪೋರ್ಟ್ಸ್ನಲ್ಲಿ ಹೇಳಿದ್ದಾರೆ. ‘ಸೂರ್ಯಕುಮಾರ್ ಬಹುತೇಕ ಎಲ್ಲರ ವಿರುದ್ಧ ರನ್ ಗಳಿಸಿದ್ದಾರೆ. ಆದರೆ ಅವರು ಪಾಕಿಸ್ತಾನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದಕ್ಕೆ ಕಾರಣ ವೇಗದ ದಾಳಿ ಅಥವಾ ಇನ್ನಾವುದೋ ಕಾರಣ ಇರಬಹುದು. ಅದು ಏನೇ ಇರಲಿ, ಸೂರ್ಯ ಮಾತ್ರ ಪಾಕ್ ವಿರುದ್ಧ ಪರಿಣಾಮಕಾರಿಯಾಗಿಲ್ಲ ಎಂದಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬಗ್ಗೆಯೂ ಮಾತನಾಡಿದ ಅವರು,‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಟಕ್ಕೆ ತೀವ್ರತೆಯನ್ನು ತರುತ್ತಾರೆ, ಹೀಗಾಗಿ ಭಾರತ ಖಂಡಿತವಾಗಿಯೂ ಅದನ್ನು ಕಳೆದುಕೊಳ್ಳುತ್ತದೆ.

ರವೀಂದ್ರ ಜಡೇಜಾ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಕಳವಳಕಾರಿ ಎನ್ನಬಹುದು. ಜನರು ವಿರಾಟ್ ಮತ್ತು ರೋಹಿತ್ ಬಗ್ಗೆ ಮಾತನಾಡುತ್ತಾರೆ, ಆದರೆ ಜಡೇಜಾ ತಂಡಕ್ಕೆ ನಿಜವಾಗಿಯೂ ಸಹಾಯ ಮಾಡಿದ ಆಟಗಾರ. ಅಕ್ಷರ್ ಪಟೇಲ್ ಇದ್ದಾರೆ ಆದರೆ ಜಡೇಜಾ ಒಬ್ಬ ಬ್ಯಾಟ್ಸ್ಮನ್, ಬೌಲರ್ ಮತ್ತು ಮುಖ್ಯವಾಗಿ ಅವರ ಫೀಲ್ಡಿಂಗ್ನಿಂದಾಗಿ ಸಮತೋಲನವನ್ನು ನೀಡುತ್ತಿದ್ದರು ಎಂದಿದ್ದಾರೆ.

ಏಷ್ಯಾಕಪ್ಗಾಗಿ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್
Published On - 4:20 pm, Mon, 25 August 25