- Kannada News Photo gallery Cricket photos Bhuvneshwar Kumar and Sanju Samson will have one shot at redemption in India vs Australia T20I series
IND vs AUS T20I Series: ಬಿಸಿಸಿಐ ಮಾಸ್ಟರ್ ಪ್ಲಾನ್: 1 ವರ್ಷದ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಈ ಸ್ಟಾರ್ ಆಟಗಾರ
Bhuvneshwar Kumar Team India Come back: ಸ್ವಿಂಗ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಭುವನೇಶ್ವರ್ ಕುಮಾರ್ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 16 ವಿಕೆಟ್ ಪಡೆಯುವ ಮೂಲಕ ಭುವಿ ಫಾರ್ಮ್ಗೆ ಮರಳಿದ್ದಾರೆ.
Updated on: Nov 07, 2023 | 11:22 AM

ಐಸಿಸಿ ಏಕದಿನ ವಿಶ್ವಕಪ್ 2023 ನಿರ್ಣಾಯಕ ಹಂತದತ್ತ ತಲುಪುತ್ತಿದೆ. ಇದರ ನಡುವೆ ಭಾರತೀಯ ಕ್ರಿಕೆಟ್ ತಂಡ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯ್ಕೆ ಸಮಿತಿಯು ಈಗಾಗಲೇ 2024 ರಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೆ ಸಜ್ಜಾಗುತ್ತಿದೆ. ಇದರ ಮೊದಲ ಭಾಗವಾಗಿ ಭಾರತ ತಂಡ ವಿಶ್ವಕಪ್ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ.

ಆಸೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಈ ವಾರದ ಅಂತ್ಯದಲ್ಲಿ ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. ಈ ಸರಣಿಗೆ ಕೊಹ್ಲಿ, ರೋಹಿತ್, ಜಡೇಜಾ, ಬುಮ್ರಾ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಒಂದು ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಬೌಲರ್ ಕಮ್ಬ್ಯಾಕ್ ಮಾಡುವುದು ಖಚಿತವಾಗಿದೆ.

ಸ್ವಿಂಗ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಭುವನೇಶ್ವರ್ ಕುಮಾರ್ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 16 ವಿಕೆಟ್ ಪಡೆಯುವ ಮೂಲಕ ಭುವಿ ಫಾರ್ಮ್ಗೆ ಮರಳಿದ್ದಾರೆ.

"ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಆಯ್ಕೆಗಾರರು ಎಲ್ಲಾ ಹಿರಿಯ ಬೌಲರ್ಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಲು ಭುವನೇಶ್ವರ್ ಅವರಂತಹ ಅನುಭವಿ ಸೀಮರ್ ಅಗತ್ಯವಿದೆ. ಅವರನ್ನು ವಾಪಸ್ ಕರೆಸಿಕೊಳ್ಳಬಹುದು” ಎಂದು ಬಿಸಿಸಿಐ ಮೂಲವೊಂದು TOI ಗೆ ಹೇಳಿದೆ.

ಕಳಪೆ ಫಾರ್ಮ್ನ ನಂತರ ತಂಡದಿಂದ ಹೊರಗುಳಿದ ನಂತರ, ಭುವನೇಶ್ವರ್ ಕುಮಾರ್ ಐಪಿಎಲ್ 2023 ಆಡಿದರು. ಆದರೆ, ಅಲ್ಲಿಯೂ ಅವರಿಗೆ ಅದೃಷ್ಟವಿರಲಿಲ್ಲ. 14 ಪಂದ್ಯಗಳಲ್ಲಿ, ಅವರು 8.33 ರ ಎಕಾನಮಿ ರೇಟ್ಗೆ 16 ವಿಕೆಟ್ಗಳನ್ನು ಪಡೆದರು, ಇದು ಐಪಿಎಲ್ನಲ್ಲಿ ಅವರ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ.

ಇದರಿಂದಾಗಿ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪರಿಗಣಿಸಲಾಗಿಲ್ಲ. ಏಕದಿನ ಕ್ರಿಕೆಟ್ನಿಂದ ದೂರ ಉಳಿದರು. ಆದರೆ, ಇದೀಗ ಅವರು ಫಾರ್ಮ್ಗೆ ಮರಳಿದ್ದಾರೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ಕೇವಲ 5.84 ಎಕಾನಮಿ ದರದಲ್ಲಿ 16 ವಿಕೆಟ್ಗಳನ್ನು ಪಡೆದಿದ್ದಾರೆ. ಟಿ20 ವಿಶ್ವಕಪ್ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಿ ಬಿಸಿಸಿಐ ಆಯ್ಕೆ ಮಾಡುತ್ತಿದ್ದು, ಭುವನೇಶ್ವರ್ ಕುಮಾರ್ಗೆ ಇದೊಂದು ಅಗ್ನಿಪರೀಕ್ಷೆ ಕೂಡ ಆಗಿದೆ.

ಇವರ ಜೊತೆಗೆ ರಿಯಾನ್ ಪರಾಗ್, ಸಂಜು ಸ್ಯಾಮ್ಸನ್ ಕೂಡ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಮುಂಬರುವ ಸರಣಿಯಲ್ಲಿ ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.









