- Kannada News Photo gallery Cricket photos cheteshwar pujara to play in duleep trophy for west zone after dropping from west indies tour
IND vs WI: ಟೆಸ್ಟ್ ತಂಡದಿಂದ ಕೈಬಿಟ್ಟ ಬಳಿಕ ದುಲೀಪ್ ಟ್ರೋಫಿಯತ್ತ ಮುಖಮಾಡಿದ ಪೂಜಾರ
Cheteshwar Pujara Selection: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಪ್ರಕಟಿಸಿದ ಬಿಸಿಸಿಐನ ಹಿರಿಯ ಆಯ್ಕೆ ಸಮಿತಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಪೂಜಾರ ಅವರನ್ನು ತಂಡದಿಂದ ಕೈಬಿಟ್ಟಿದೆ. ಹೀಗಾಗಿ ಪೂಜಾರ ಇದೀಗ ದುಲೀಪ್ ಟ್ರೋಫಿಯತ್ತ ಮುಖಾಮಾಡಿದ್ದಾರೆ.
Updated on:Jun 24, 2023 | 8:41 AM

ಪ್ರಸ್ತುತ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಗೋಡೆ ಎಂದೇ ಕರೆಸಿಕೊಳ್ಳುವ ಚೇತೇಶ್ವರ ಪೂಜಾರ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಪ್ರಕಟಿಸಿದ ಬಿಸಿಸಿಐನ ಹಿರಿಯ ಆಯ್ಕೆ ಸಮಿತಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಪೂಜಾರ ಅವರನ್ನು ತಂಡದಿಂದ ಕೈಬಿಟ್ಟಿದೆ. ಹೀಗಾಗಿ ಪೂಜಾರ ಇದೀಗ ದುಲೀಪ್ ಟ್ರೋಫಿಯತ್ತ ಮುಖಾಮಾಡಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಪೂಜಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಫೈನಲ್ ಪಂದ್ಯದ ತಯಾರಿಗಾಗಿಯೇ ತಂಡಕ್ಕಿಂತ ಮೊದಲೇ ಇಂಗ್ಲೆಂಡ್ ತಲುಪಿದ್ದ ಪೂಜಾರ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 14 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 27 ರನ್ ಗಳಿಸಿದ್ದರು. ಹೀಗಾಗಿ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಪೂಜಾರ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ಪರ ಆಡಲಿದ್ದಾರೆ ಎಂದು ತಿಳಿಸಿದೆ. ಪೂಜಾರ ಅಲ್ಲದೆ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾದ ಸೂರ್ಯಕುಮಾರ್ ಯಾದವ್ ಕೂಡ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಟೀಂ ಇಂಡಿಯಾ ಆಯ್ಕೆಗೂ ಮುನ್ನ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಪಶ್ಚಿಮ ವಲಯ ತಂಡದ ಪರ ಆಡುವವರಿದ್ದರು. ಆದರೆ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಈ ಇಬ್ಬರ ಆಯ್ಕೆಯಾಗಿರುವುದರಿಂದ ದುಲೀಪ್ ಟ್ರೋಫಿಯಲ್ಲಿ ಇವರ ಸ್ಥಾನದಲ್ಲಿ ಪೂಜಾರ ಹಾಗೂ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.

ವಾಸ್ತವವಾಗಿ ಜೈಸ್ವಾಲ್ ಮತ್ತು ಗಾಯಕ್ವಾಡ್ ಇಬ್ಬರೂ ಆರಂಭಿಕ ಆಟಗಾರರು. ಆದರೆ ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಇರುವ ಕಾರಣ ಇಬ್ಬರಿಗೂ ಟೀಂ ಇಂಡಿಯಾದಲ್ಲಿ ಓಪನ್ ಮಾಡುವ ಅವಕಾಶ ಸಿಗುವುದಿಲ್ಲ. ಪೂಜಾರ ಅನುಪಸ್ಥಿತಿಯಿಂದ ನಂಬರ್-3 ಸ್ಥಾನ ಖಾಲಿಯಾಗಿದೆ. ಹೀಗಾಗಿ ಪೂಜಾರ ಸ್ಥಾನವನ್ನು ಈ ಇಬ್ಬರಲ್ಲಿ ಒಬ್ಬರು ತುಂಬಲಿದ್ದಾರೆ.

ಇತ್ತ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತನ್ನ ಮೊದಲ ಪಂದ್ಯವನ್ನು ಜುಲೈ 5 ರಂದು ಆಡಬೇಕಾಗಿದ್ದು, ಈ ಪಂದ್ಯವನ್ನು ಕೇಂದ್ರ ವಲಯ ಮತ್ತು ಪೂರ್ವ ವಲಯ ನಡುವಿನ ಪಂದ್ಯದ ವಿಜೇತ ತಂಡದೊಂದಿಗೆ ಆಡಲಿದೆ.

ಇನ್ನು ಪೂಜಾರ ಟೆಸ್ಟ್ ವೃತ್ತಿ ಜೀವನಕ್ಕೆ ಬರುವುದಾದರೆ, ವರದಿಗಳ ಪ್ರಕಾರ, ಪೂಜಾರಗೆ ಟೀಂ ಇಂಡಿಯಾದ ಹಾದಿ ಸಂಪೂರ್ಣವಾಗಿ ಮುಚ್ಚಿಹೋಗಿಲ್ಲ. ಜೈಸ್ವಾಲ್ ಹಾಗೂ ಗಾಯ್ಕ್ವಾಡ್ ಅವರಂತಹ ಯುವ ಆಟಗಾರರನ್ನು ಪ್ರಯತ್ನಿಸುವ ಸಲುವಾಗಿ ಆಯ್ಕೆದಾರರು ಪೂಜಾರ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಹೀಗಾಗಿ ಪೂಜಾರ ದೇಶೀಯ ಕ್ರಿಕೆಟ್ನಲ್ಲಿ ರನ್ ಗಳಿಸಿದರೆ, ಅವರು ಮತ್ತೆ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
Published On - 7:22 am, Sat, 24 June 23




