ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಕೇವಲ ಅಭಿಮಾನಿಗಳಿಂದ ಮಾತ್ರವಲ್ಲದೆ ಕ್ರಿಕೆಟ್ ಪಂಡಿತರು ಕೂಡ ಈ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ವಿರಾಟ್ ಕೊಹ್ಲಿಯೇ ಏಕದಿನ ತಂಡದ ನಾಯಕನಾಗಿ ಮುಂದುವರಿಯಬೇಕಾಗಿತ್ತು ಎಂದು ಹೇಳುತ್ತಿದ್ದಾರೆ.
ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ ಕೂಡ ಬಿಸಿಸಿಐ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಬಿಸಿಸಿಐ ವಿರಾಟ್ ಕೊಹ್ಲಿಗೆ ಕನಿಷ್ಠ ಗೌರವವನ್ನೂ ನೀಡಲಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಅನಿಸುತ್ತದೆಯೇ?, ನನಗಂತು ಇಲ್ಲ. ಕೊಹ್ಲಿಗೆ ಬಿಸಿಸಿಐ ಗೌರವ ಕೊಟ್ಟಿಲ್ಲ. ನಾಯಕನಾಗಿ ಅವರು 65 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ 4ನೇ ನಾಯಕನಾಗಿದ್ದಾರೆ. ನಾಯಕನಾಗಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ವಿರಾಟ್. ನಾಯಕನಾಗಿ ಅವರ ದಾಖಲೆ ಕೆಟ್ಟದಾಗಿಲ್ಲ ಎಂದು ಯಾರೂ ಬಿಸಿಸಿಐಗೆ ಹೇಳಿಲ್ಲವೆ ಎಂದು ಕನೇರಿಯಾ ಬೇಸರ ಹೊರಹಾಕಿದ್ದಾರೆ.
ಕೊಹ್ಲಿಯ ದಾಖಲೆ ನೋಡಿದರೆ ಅವರಿಗೆ ಗೌರವ ಸಲ್ಲಬೇಕು. ನಿಜ ಅವರು ನಾಯಕನಾಗಿ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಆದರೆ, ಅದೊಂದು ಕಾರಣಕ್ಕೆ ಈರೀತಿ ಮಾಡುವುದು ಸರಿಯೇ?. ಈಗಿನ ಕ್ರಿಕೆಟ್ನಲ್ಲಿ ಇಬ್ಬರೇ ಸೂಪರ್ ಸ್ಟಾರ್ಗಳಿರುವುದು. ಅದು ಕೊಹ್ಲಿ ಮತ್ತು ಬಾಬರ್ ಅಜಾಮ್. ನಿಮ್ಮ ಸೂಪರ್ ಸ್ಟಾರ್ಗೆ ನೀವು ಗೌರವ ನೀಡಬೇಕು - ದಾನಿಶ್ ಕನೇರಿಯಾ.
ಕೊಹ್ಲಿಗೆ ಒಂದು ವಿಷಯವನ್ನೂ ತಿಳಿಸದೆ ಬಿಸಿಸಿಐ ಅವರನ್ನು ನಾಯಕತ್ವದಿಂದ ಕಿತ್ತೆಸಗಿದೆ. ಸೌರವ್ ಗಂಗೂಲಿ ದೊಡ್ಡ ಹೆಸರು, ಅವರು ಮಾಜಿ ನಾಯಕ. ಅವರಿಂದಲೂ ಏನು ಮಾಡಲು ಸಾಧ್ಯ ಆಗಲಿಲ್ಲವೇ ಎಂದು ಬಿಸಿಸಿಐ ವಿರುದ್ಧ ಕನೇರಿಯಾ ಸಿಟ್ಟು ಹೊರಹಾಕಿದ್ದಾರೆ.
ಇನ್ನು ಭಾರತ ತಂಡದ ಮಾಜಿ ಆಲ್ರೌಂಡರ್ ಹಾಗೂ ಮಾಜಿ ಹೆಡ್ ಕೋಚ್ ಮದನ್ ಲಾಲ್ ಪ್ರತಿಕ್ರಿಯಿಸಿದ್ದು, ಓಡಿಐ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ ಏಕದಿನ ತಂಡದ ನಾಯಕತ್ವದಿಂದ ಕೆಳಗೆ ಇಳಿಸಿರುವ ಬಿಸಿಸಿಐ ನಿರ್ಧಾರ ಸರಿಯಿಲ್ಲ ಎಂದಿದ್ದಾರೆ.
ಮುಂದಿನ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಲು ಅರ್ಹರಾಗಿದ್ದರು ಎಂದು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ, ಬಿಸಿಸಿಐ ತೆಗೆದುಕೊಂಡಿರುವ ಈ ಹಠಾತ್ ನಿರ್ಧಾರದಿಂದ ನನಗೆ ಅಚ್ಚರಿ ಉಂಟಾಗಿದೆ ಎಂದು ಹೇಳಿದ್ದಾರೆ.
"ಈ ಬಗ್ಗೆ ಸೆಲೆಕ್ಟರ್ಗಳ ಮನಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ, ಆದರೆ ಕೊಹ್ಲಿ ನಾಯಕನಾಗಿ ಉತ್ತಮ ಫಲಿತಾಂಶ ನೀಡುತ್ತಿರುವಾಗ ನೀವು ಅವರನ್ನು ಏಕೆ ಬದಲಾವಣೆ ಮಾಡುತ್ತಿದ್ದೀರಿ? ಟಿ20 ತಂಡದ ನಾಯಕತ್ವದಿಂದ ಅವರು ಕೆಳಗಿಳಿದ ಬಗ್ಗೆ ನನಗೆ ಅರ್ಥವಾಗಿದೆ. ಮೂರೂ ಸ್ವರೂಪದಲ್ಲಿ ಗಮನ ಹರಿಸುವುದು ತುಂಬಾನೇ ಕಷ್ಟ. ಆ ಮೂಲಕ ಎರಡು ಸ್ವರೂಪದಲ್ಲಿ ಅವರು ಗಮನ ಕೇಂದ್ರಿಕರಿಸಲು ಬಯಸಿದ್ದರು - ಮದನ್ ಲಾಲ್.