
ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ 1983 ರ ವಿಶ್ವಕಪ್ ಗೆದ್ದುಕೊಂಡಿತು. ಆ ಬಳಿಕ ಮತ್ತೊಂದು ಏಕದಿನ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಬರೋಬ್ಬರಿ 28 ವರ್ಷಗಳು ಬೇಕಾಯಿತು. ಭಾರತ ಈ ವಿಶ್ವಕಪ್ ಗೆಲ್ಲುವಲ್ಲಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ಪಾತ್ರ ಅಪಾರವಾಗಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಯುವಿ ಅಮೋಘ ಪ್ರದರ್ಶನ ನೀಡಿದ್ದರು.

ಇಂದಿಗೆ ಭಾರತ 2011 ರ ಏಕದಿನ ವಿಶ್ವಕಪ್ ಗೆದ್ದು 14 ವರ್ಷಗಳು ಕಳೆದಿವೆ. ಇದೀಗ ಅಂದಿನ ವಿಶ್ವಕಪ್ಗೆ ಟೀಂ ಇಂಡಿಯಾ ಆಯ್ಕೆಯ ಬಗ್ಗೆ ಇದ್ದ ಸಮಸ್ಯೆಗಳ ಬಗ್ಗೆ ಅಂದು ತಂಡದ ಮುಖ್ಯ ಕೋಚ್ ಆಗಿದ್ದ ಗ್ಯಾರಿನ ಕ್ರಸ್ಟನ್ ಮಾತನಾಡಿದ್ದು, ಕೆಲವು ಅಚ್ಚರಿಯ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಯುವರಾಜ್ ಸಿಂಗ್ ಬಗ್ಗೆ ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ.

Rediff.com ಜೊತೆ ಈ ಬಗ್ಗೆ ಮಾತನಾಡಿರುವ ಗ್ಯಾರಿ, ‘2011 ರ ವಿಶ್ವಕಪ್ಗೆ ಯುವರಾಜ್ ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. 15 ಆಟಗಾರರನ್ನು ಆಯ್ಕೆ ಮಾಡಲು ಆಯ್ಕೆದಾರರಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಅದೃಷ್ಟವಶಾತ್ ನಾವು ಯುವರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದವು.

ನಾನು ಮತ್ತು ಧೋನಿ ಇಬ್ಬರೂ ಯುವರಾಜ್ ಸಿಂಗ್ ಅವರನ್ನು ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸಿದ್ದೆವು. ನಾನು ಯಾವಾಗಲೂ ಯುವರಾಜ್ ಅವರ ದೊಡ್ಡ ಅಭಿಮಾನಿ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿತ್ತು. ಕೆಲವೊಮ್ಮೆ ಅವರು ನನ್ನನ್ನು ತುಂಬಾ ಕೀಟಲೆ ಮಾಡಿದರೂ ನನಗೆ ಅವರೆಂದರೆ ತುಂಬಾ ಇಷ್ಟ ಎಂದಿದ್ದಾರೆ.

2011 ರ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಅವರ ಪ್ರದರ್ಶನ ತುಂಬಾ ಉತ್ತಮವಾಗಿತ್ತು. ಬ್ಯಾಟಿಂಗ್ನಲ್ಲಿ 362 ರನ್ ಬಾರಿಸಿದ್ದ ಯುವಿ, ಬೌಲಿಂಗ್ನಲ್ಲಿ 15 ವಿಕೆಟ್ಗಳನ್ನು ಪಡೆದರು. ಈ ಅದ್ಭುತ ಪ್ರದರ್ಶನದಿಂದಾಗಿ ಅವರನ್ನು ಟೂರ್ನಮೆಂಟ್ನ ಆಟಗಾರನಾಗಿಯೂ ಆಯ್ಕೆ ಮಾಡಲಾಯಿತು. ಫೈನಲ್ನಲ್ಲಿ ಟೀಂ ಇಂಡಿಯಾ, ಶ್ರೀಲಂಕಾವನ್ನು 6 ವಿಕೆಟ್ಗಳಿಂದ ಸೋಲಿಸಿ 28 ವರ್ಷಗಳ ನಂತರ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.