- Kannada News Photo gallery Cricket photos Harshit Rana Undergoes Knee Surgery After T20 World Cup Exit; Vows Comeback
ಟಿ20 ವಿಶ್ವಕಪ್ ನಡುವೆ ಶಸ್ತ್ರಚಿಕಿತ್ಸೆಗೊಳಗಾದ ಟೀಂ ಇಂಡಿಯಾ ವೇಗಿ
Harshit Rana Undergoes Knee Surgery: ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ಟೀಂ ಇಂಡಿಯಾದ ವೇಗಿ ಹರ್ಷಿತ್ ರಾಣಾ T20 ವಿಶ್ವಕಪ್ನಿಂದ ಹೊರಬಿದ್ದಿದ್ದರು. ಇದೀಗ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಚೇತರಿಕೆ ಭರವಸೆ ನೀಡಿದ್ದಾರೆ. ಸಿರಾಜ್, ರಾಣಾ ಬದಲಿಗೆ ತಂಡಕ್ಕೆ ಸೇರಿದ್ದರು. ವಾಷಿಂಗ್ಟನ್ ಸುಂದರ್ ಮತ್ತು ಜಸ್ಪ್ರೀತ್ ಬುಮ್ರಾ ಗುಣಮುಖರಾಗಿದ್ದಾರೆ.
Updated on: Feb 09, 2026 | 3:53 PM

ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದ ಟೀಂ ಇಂಡಿಯಾ ಯುವ ವೇಗಿ ಹರ್ಷಿತ್ ರಾಣಾ, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಇದು ತಂಡಕ್ಕೆ ಆಘಾತ ನೀಡಿತ್ತು. ರಾಣಾ ಬದಲಿಗೆ ಬಿಸಿಸಿಐ ಮೊಹಮ್ಮದ್ ಸಿರಾಜ್ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದಿಂದ ಹೊರಬಿದ್ದಿರುವ ಹರ್ಷಿತ್ ರಾಣಾ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ತಾನು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಣಾ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರಾಣಾ, ಬೇಗನೇ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ಸಮಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ರಾಣಾ, ರನ್-ಅಪ್ ಮಾಡುವುದಕ್ಕೆ ಕಷ್ಟಪಡಬೇಕಾಯಿತು. ಇದರಿಂದಾಗಿ ಅವರು ಕೇವಲ ಒಂದು ಓವರ್ ಬೌಲಿಂಗ್ ಮಾಡಿ ಅಭ್ಯಾಸ ಪಂದ್ಯದಿಂದ ಹೊರ ನಡೆದಿದ್ದರು. ರಾಣಾ ಅವರ ಗಾಯದ ಗಂಭೀರತೆಯನ್ನು ಅರಿತು ಅವರನ್ನು ಟಿ20 ವಿಶ್ವಕಪ್ನಿಂದ ಹೊರಗಿಡಲಾಗಿತ್ತು.

2026 ರ ಟಿ20 ವಿಶ್ವಕಪ್ನಿಂದ ಹೊರಬೀಳುವ ಮೊದಲು, ಹರ್ಷಿತ್ ರಾಣಾ ಉತ್ತಮ ಫಾರ್ಮ್ನಲ್ಲಿದ್ದರು. ಬೌಲಿಂಗ್ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ರಾಣಾ ಅವರ ಪ್ರದರ್ಶನ ಅಮೋಘವಾಗಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಅವರು ಗಾಯಗೊಂಡಿದ್ದು ತಂಡದ ಚಿಂತೆ ಹೆಚ್ಚಿಸಿತ್ತು. ಏಕೆಂದರೆ ಹರ್ಷಿತ್ ಅವರಂತೆಯೇ, ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದರು. ಪ್ರಸ್ತುತ ಚೇತರಿಸಿಕೊಂಡಿರುವ ಸುಂದರ್ ತಂಡವನ್ನು ಕೂಡಿಕೊಂಡಿದ್ದಾರೆ.

ಟೀಂ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ತನ್ನ ಎರಡನೇ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ಆಡಲಿದ್ದು, ಆ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ಗೆ ಆಡುವ ಅವಕಾಶ ಸಿಗಬಹುದು. ಸುಂದರ್ ಮಾತ್ರವಲ್ಲದೆ ಜ್ವರದಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಕೂಡ ಇದೀಗ ಚೇತರಿಸಿಕೊಂಡಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಆ ಪಂದ್ಯದಲ್ಲಿ ಇವರಿಬ್ಬರು ಆಡಬಹುದು.
