- Kannada News Photo gallery Cricket photos He's dismissed Kohli, Pujara, Jadeja Brett Lee Fires Away Todd Murphy Warning For Team India Ahead of 3rd Test
Brett Lee: ಆಸ್ಟ್ರೇಲಿಯಾ ತಂಡದಲ್ಲಿ ಆ ಆಟಗಾರನಿದ್ದಾನೆ: ಟೀಮ್ ಇಂಡಿಯಾಕ್ಕೆ ವಾರ್ನಿಂಗ್ ಕೊಟ್ಟ ಬ್ರೆಟ್ ಲೀ
India vs Australia 3rd Test: ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಟಿಮ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ಮೂರನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಹೊಸ ಸ್ಪಿನ್ನರ್ ಟಾಡ್ ಮರ್ಫಿ ಕಂಟಕವಾಗಿ ಪರಿಣಮಿಸಲಿದ್ದಾರೆ ಎಂದು ಬ್ರೆಟ್ ಲೀ ಹೇಳಿದ್ದಾರೆ.
Updated on:Feb 21, 2023 | 10:24 AM

ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯಗೊಂಡಿದೆ. ನಡೆದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವ ಮೂಲಕ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದೀಗ ಉಭಯ ತಂಡಗಳು ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಹೀಗಿರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಟಿಮ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ಮೂರನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಹೊಸ ಸ್ಪಿನ್ನರ್ ಟಾಡ್ ಮರ್ಫಿ ಕಂಟಕವಾಗಿ ಪರಿಣಮಿಸಲಿದ್ದಾರೆ ಎಂದು ಬ್ರೆಟ್ ಲೀ ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ ಲೀ, ''ನೇಥನ್ ಲ್ಯಾನ್ ನಂತರಕ್ಕೆ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಅವರೇ 22 ವರ್ಷದ ಸೂಪರ್ ಸ್ಟಾರ್ ಆಫ್ ಸ್ಪಿನ್ನರ್ ಟಾಡ್ ಮರ್ಫಿ. ಅವರದ್ದು ಅದ್ಭುತ ಪದಾರ್ಪಣೆ. ಆಸ್ಟ್ರೇಲಿಯಾ ಸೋತಿರಬಹುದು. ಆದರೆ, ಮರ್ಫಿ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತು ಸಲಾಂ ಎಂದಿದೆ,'' ಎಂದು ಲೀ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಮರ್ಫಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಬರೋಬ್ಬರಿ 7 ವಿಕೆಟ್ ಕಿತ್ತು ಮಿಂಚಿದರು. ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಆರ್. ಅಶ್ವಿನ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.

''ಮೊದಲ ಪಂದ್ಯದಲ್ಲಿ ಟಾಡ್ ಮರ್ಫಿ 7 ವಿಕೆಟ್ ಪಡೆದುಕೊಂಡರು. ಅದರಲ್ಲಿ ಐದು ವಿಕೆಟ್ಗಳು, ಕೆಎಲ್ ರಾಹುಲ್, ಆರ್ ಅಶ್ವಿನ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರದ್ದು. ಎಂಥಾ ಸ್ಮರಣಿಯ ಪದಾರ್ಪಣೆ. ವಿಶೇಷ ಎಂದರೆ ಮರ್ಫಿ ಈ ಸಾಧನೆಯನ್ನು ಅವರ ಕುಟುಂಬದ ಉಪಸ್ಥಿತಿಯಲ್ಲಿ ಸಾಧಿಸಿದ್ದರು,'' ಎಂದು ಬ್ರೆಟ್ ಲೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 132 ರನ್ಗಳ ಜಯ ಸಾಧಿಸಿತು. ಬಳಿಕ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರರೇ ಉಳಿದ ಪಂದ್ಯಗಳಿಗೂ ಆಯ್ಕೆಯಾಗಿದ್ದಾರೆ. ಆದರೆ, ಉಪ ನಾಯಕ ಯಾರು ಎಂಬುದನ್ನು ಬಿಸಿಸಿಐ ಬಹಿರಂಗ ಪಡಿಸಿಲ್ಲ. 2ನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದ ಜಯದೇವ್ ಉನಾದ್ಕಟ್ ಅವರನ್ನು ಉಳಿದ ಎರಡು ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.
Published On - 10:22 am, Tue, 21 February 23









