
ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಆಗಸ್ಟ್ 7 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿ ಟೀಂ ಇಂಡಿಯಾ ಇದೆ. ಆದರೆ ಅದಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ನಾಯಕ ಶುಭ್ಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ(PC-PTI).

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿಯಂತ್ತಾಗಿದೆ. ಹೀಗಾಗಿ ಶತಾಯಗತಾಯ ಈ ಸರಣಿಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ ಲಂಕಾ ನಾಡಿನಲ್ಲಿ ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಆದರೆ ಇದೇ ಅಭ್ಯಾಸದ ವೇಳೆ ಶುಭ್ಮನ್ ಗಿಲ್ ಕೈಯಿಗೆ ಗಾಯಮಾಡಿಕೊಂಡಿದ್ದಾರೆ(PC-PTI).

ವರದಿಯ ಪ್ರಕಾರ, ಕೊಲಂಬೊದಲ್ಲಿ ನಡೆಯಬೇಕಿರುವ ಅಭ್ಯಾಸ ಪಂದ್ಯಕ್ಕೂ ಮುನ್ನ ನಡೆದ ತಂಡದ ಅಭ್ಯಾಸದ ಸಮಯದಲ್ಲಿ ಶುಭ್ಮನ್ ಗಿಲ್ ಅವರ ಹೆಬ್ಬೆರಳಿಗೆ ಎರಡು ಬಾರಿ ಚೆಂಡು ತಗುಲಿದೆ. ಇದರಿಂದಾಗಿ ಗಿಲ್ ತಮ್ಮ ಅಭ್ಯಾಸವನ್ನು ಮಟುಕುಗೊಳಿಸಿ ಕೈಗೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಅಭ್ಯಾಸವನ್ನು ಮುಂದುವರೆಸಿದ್ದಾರೆ(PC-PTI).

ಆದಾಗ್ಯೂ, ಬ್ಯಾಟಿಂಗ್ ಅಭ್ಯಾಸದ ನಂತರ, ನಾಯಕ ಗಿಲ್ ಇತರ ಆಟಗಾರರೊಂದಿಗೆ ಸ್ಲಿಪ್ ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದ್ದಾಗ, ಚೆಂಡು ಅವರ ಗಾಯಗೊಂಡ ಹೆಬ್ಬೆರಳಿಗೆ ತಗುಲಿದೆ. ಇದರಿಂದಾಗಿ ಗಿಲ್ ತೀವ್ರ ನೋವಿನಿಂದ ಬಳಲುತ್ತಿರುವುದು ಕಂಡುಬಂದಿತು. ಕೂಡಲೇ ವೈದ್ಯಕೀಯ ಸಿಬ್ಬಂದಿ ಮತ್ತೊಮ್ಮೆ ಗಿಲ್ ಅವರನ್ನು ಪರೀಕ್ಷಿಸಿತು. ಇದಾದ ಬಳಿಕ ಗಿಲ್ ಮುಂದಿನ ಅಭ್ಯಾಸದಲ್ಲಿ ಭಾಗವಹಿಸದೆ ವಿಶ್ರಾಂತಿಗೆ ತೆರಳಿದರು ಎಂದು ವರದಿಯಾಗಿದೆ(PC-PTI).

ಪ್ರಸ್ತುತ ಶುಭ್ಮನ್ ಗಿಲ್ ಅವರ ಗಾಯದ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಇದು ಖಂಡಿತವಾಗಿಯೂ ಟೀಂ ಇಂಡಿಯಾವನ್ನು ಕಠಿಣ ಸ್ಥಿತಿಯಲ್ಲಿ ಇರಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ವಾರ ಬಾಕಿ ಇದೆ. ಹೀಗಾಗಿ ಗಿಲ್ ಅಷ್ಟರಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅಭ್ಯಾಸ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಗಿಲ್ ಗಾಯಗೊಂಡಿರುವುದರಿಂದ ಅವರರು ಈ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ(PC-PTI).