- Kannada News Photo gallery Cricket photos IPL 2022 retention: Virat Kohli has taken pay cut for larger interest of team
IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
IPL 2022 retention: ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಕಡಿಮೆ ಮೊತ್ತ ಪಡೆದಿರುವ ಕಾರಣ ಇದೀಗ ಆರ್ಸಿಬಿ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ತಂಡವು ಮೆಗಾ ಹರಾಜಿಗಾಗಿ ಒಟ್ಟು 57 ಕೋಟಿ ಉಳಿದಿದೆ.
Updated on: Dec 01, 2021 | 5:53 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿದೆ. ಅದರಲ್ಲೂ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಅದು ಕೂಡ ಕಡಿಮೆ ಮೊತ್ತ ನೀಡಿ ಸ್ಟಾರ್ ಆಟಗಾರರನ್ನು ಒಪ್ಪಿಸುವ ಮೂಲಕ ಎಂಬುದು ವಿಶೇಷ.

ಹೌದು, ಈ ಬಾರಿ ಆರ್ಸಿಬಿ ವಿರಾಟ್ ಕೊಹ್ಲಿಗೆ ನೀಡುತ್ತಿರುವುದು 15 ಕೋಟಿ ರೂ. ಮಾತ್ರ. ಆದರೆ 2018 ರಿಂದ ಕೊಹ್ಲಿಗೆ ಆರ್ಸಿಬಿ ನೀಡುತ್ತಿರುವುದು ಬರೋಬ್ಬರಿ 17 ಕೋಟಿ ರೂ. ಆದರೆ ಈ ಬಾರಿ 2 ಕೋಟಿ ರೂ. ಅನ್ನು ಕೊಹ್ಲಿ ಕಡಿತಗೊಳಿಸಿದ್ದಾರೆ. ಏಕೆಂದರೆ ಈ ಬಾರಿ 33 ಕೋಟಿಯೊಳಗೆ 3 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಕೊಹ್ಲಿ ಕೂಡ ತಮ್ಮ ಮೊತ್ತವನ್ನು 15 ಕೋಟಿಗೆ ಇಳಿಸಿದ್ದಾರೆ.

ವಿರಾಟ್ ಕೊಹ್ಲಿಯು ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಗೆ ದುಡ್ಡಿಗಿಂತ ಆರ್ಸಿಬಿ ತಂಡವೇ ಮುಖ್ಯ. ಹೀಗಾಗಿ ಅವರು ಕಡಿಮೆ ಮೊತ್ತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರ್ಸಿಬಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಇನ್ನೊಂದೆಡೆ ಕಳೆದ 14 ಕೋಟಿ 25 ಲಕ್ಷ ರೂ. ಪಡೆದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿ 11 ಕೋಟಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅಂದರೆ ಕಳೆದ ಬಾರಿಗಿಂತ ಮ್ಯಾಕ್ಸ್ವೆಲ್ 3 ಕೋಟಿ ಕಡಿಮೆ ಮೊತ್ತಕ್ಕೆ ಓಕೆ ಅಂದಿದ್ದಾರೆ. ಇಲ್ಲಿ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿ ಫ್ರಾಂಚೈಸಿ ನೀಡಿದ ಆಫರ್ ಅನ್ನು ಸ್ವೀಕರಿಸಿ ತಂಡದಲ್ಲೇ ಉಳಿದುಕೊಳ್ಳಲು ಬಯಸಿದ್ದಾರೆ.

ಇದಾಗ್ಯೂ ಕಡಿಮೆ ಮೊತ್ತದ ನೆಪವೊಡ್ಡಿ ಇಬ್ಬರೂ ಆಟಗಾರರು ಆರ್ಸಿಬಿ ತಂಡವನ್ನು ತೊರೆದಿಲ್ಲ ಎಂಬುದು ವಿಶೇಷ. ಏಕೆಂದರೆ ಈ ಬಾರಿ ಎರಡು ಹೊಸ ಫ್ರಾಂಚೈಸಿಗಳಿದ್ದು, ಇಬ್ಬರು ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರೆ ದೊಡ್ಡ ಮೊತ್ತ ಸಿಗುತ್ತಿತ್ತು. ಇದಾಗ್ಯೂ ಕೊಹ್ಲಿ-ಮ್ಯಾಕ್ಸ್ವೆಲ್ ಕಡಿಮೆ ಮೊತ್ತ ಪಡೆದು ಆರ್ಸಿಬಿಯಲ್ಲೇ ಮುಂದುವರೆಯಲು ಒಪ್ಪಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಕಡಿಮೆ ಮೊತ್ತ ಪಡೆದಿರುವ ಕಾರಣ ಇದೀಗ ಆರ್ಸಿಬಿ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ತಂಡವು ಮೆಗಾ ಹರಾಜಿಗಾಗಿ ಒಟ್ಟು 57 ಕೋಟಿ ಉಳಿದಿದೆ. ಈ ಮೊತ್ತದೊಂದಿಗೆ ಆರ್ಸಿಬಿ ತಂಡವು ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿದೆ.









