- Kannada News Photo gallery Cricket photos IPL 2024 CSK fans accuse shivam dube and shardul takur reason for csk lost
IPL 2024: ಸಿಎಸ್ಕೆ ಸೋಲಿಗೆ ತಂಡದ ಈ ಇಬ್ಬರು ಆಟಗಾರರೇ ಕಾರಣ ಎಂದ ಫ್ಯಾನ್ಸ್..!
IPL 2024: ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡರು ಸಿಎಸ್ಕೆ ತಂಡ ಎಲ್ಲೂ ರನ್ರೇಟ್ ಕುಸಿಯಲು ಬಿಡಲಿಲ್ಲ. ರಹಾನೆ ಹಾಗೂ ರಚಿನ್ ಉತ್ತಮ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಸಿಎಸ್ಕೆ ಸೋಲಿನ ಸುಳಿಗೆ ಸಿಲುಕಿತು.
Updated on:May 19, 2024 | 4:16 PM

ಚಿನ್ನಸ್ವಾಮಿ ಮೈದಾನದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಎಂಟ್ರಿಕೊಟ್ಟಿದೆ. ಇತ್ತ ಕೊನೆಯವರೆಗೂ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ ಸಿಎಸ್ಕೆ ತಂಡ ದಾಖಲೆಯ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈಚೆಲ್ಲಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಗೆಲುವಿಗೆ 219 ರನ್ ಹಾಗೂ ಪ್ಲೇಆಫ್ಗೆ ಅರ್ಹತೆ ಪಡೆಯಲು 201 ರನ್ ಗುರಿ ಪಡೆದು ಇನ್ನಿಂಗ್ಸ್ ಆರಂಭಿಸಿದ ಚೆನ್ನೈ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

ವಾಸ್ತವವಗಾಗಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡರು ಸಿಎಸ್ಕೆ ತಂಡ ಎಲ್ಲೂ ರನ್ರೇಟ್ ಕುಸಿಯಲು ಬಿಡಲಿಲ್ಲ. ರಹಾನೆ ಹಾಗೂ ರಚಿನ್ ಉತ್ತಮ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಸಿಎಸ್ಕೆ ಸೋಲಿನ ಸುಳಿಗೆ ಸಿಲುಕಿತು.

ಪ್ಲೇಆಫ್ಗೇರಲು ಸುವರ್ಣಾವಕಾಶ ಹೊಂದಿದ್ದ ಸಿಎಸ್ಕೆಗೆ ಈ ಪಂದ್ಯದ ಗೆಲುವು ಅವಕಶ್ಯಕವೇ ಇರಲಿಲ್ಲ. ಬದಲಿಗೆ ಆರ್ಸಿಬಿ ನೀಡಿದ ಗುರಿಯಲ್ಲಿ ಕೇವಲ 17 ರನ್ಗಳನ್ನು ಕಡಿಮೆ ಹೊಡೆದಿದ್ದರೂ, ನೇರವಾಗಿ ಪ್ಲೇಆಫ್ಗೇರುತ್ತಿತ್ತು. ಆದರೆ ತಂಡದಲ್ಲಿ ಪ್ರಮುಖ ಬೌಲರ್ಗಳ ಅಲಭ್ಯತೆ ಹಾಗೂ ಪ್ರಮುಖ ಬ್ಯಾಟರ್ಗಳು ಕೈಕೊಟ್ಟಿದ್ದು, ಸಿಎಸ್ಕೆ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಅದರಲ್ಲೂ ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗದ ನೇತೃತ್ವವಹಿಸಿಕೊಂಡಿದ್ದ ಅನುಭವಿ ವೇಗಿ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ಲಯ ಕಳೆದುಕೊಂಡಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಈ ಪಂದ್ಯದಲ್ಲಿ ಶಾರ್ದೂಲ್ 4 ಓವರ್ಗಳಲ್ಲಿ ಬರೋಬ್ಬರಿ 61 ರನ್ ನೀಡಿ ಎರಡು ವಿಕೆಟ್ ಪಡೆದರು.

ತಂಡದ ಸ್ಪಿನ್ನರ್ಗಳು ರನ್ಗಳಿಗೆ ಕಡಿವಾಣ ಹಾಕಿದ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಶಾರ್ದೂಲ್ ಎಡವಿದರು. ಯಾರ್ಕರ್ ಬೌಲ್ ಮಾಡುವ ಬರದಲ್ಲಿ ಆರ್ಸಿಬಿ ಬ್ಯಾಟರ್ಗಳು ಸಿಕ್ಸರ್ ಬಾರಿಸಲು ಸುಲಭವಾಗುವಂತೆ ಫುಲ್ ಟಾಸ್ ಬೌಲ್ಗಳನ್ನು ಹೆಚ್ಚಾಗಿ ಬೌಲ್ ಮಾಡಿದರು. ಇದರ ಲಾಭ ಪಡೆದ ಆರ್ಸಿಬಿ ಬ್ಯಾಟರ್ಗಳು ಬೌಂಡರಿ, ಸಿಕ್ಸರ್ಗಳ ಮಳೆಗರೆದರು.

ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್ ತಮ್ಮ ಅನುಭವವನ್ನು ಧಾರೆ ಎರೆಯುವಲ್ಲಿ ವಿಫಲವಾದರೆ, ಬ್ಯಾಟಿಂಗ್ನಲ್ಲಿ ತಂಡದ ಸ್ಫೋಟಕ ಬ್ಯಾಟರ್ ಶಿವಂ ದುಬೆ ನಿರ್ಣಾಯಕ ಪಂದ್ಯದಲ್ಲಿ ಗೆಲುವಿನ ಇನ್ನಿಂಗ್ಸ್ ಆಡಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ರಹಾನೆ ವಿಕೆಟ್ ಬಳಿಕ ಬ್ಯಾಟಿಂಗ್ಗೆ ಬಂದ ದುಬೆ, ರಹಾನೆ ಮಾಡಿದ ಕೆಲಸವನ್ನು ಮುಂದುವರೆಸುಕೊಂಡು ಹೋಗುವಲ್ಲಿ ವಿಫಲರಾದರು. ಅಲ್ಲದೆ ಮ್ಯಾಕ್ಸ್ವೆಲ್ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಕೈಚೆಲ್ಲಿದ ಕ್ಯಾಚ್ನ ಜೀವದಾನವನ್ನು ದುಬೆ ಸರಿಯಾಗಿ ಸದುಪಯೋಗಪಡಿಸಿಕೊಳ್ಳಲಿಲ್ಲ.

ಇದು ಸಾಲದೆಂಬಂತೆ 61 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡುತ್ತಿದ್ದ ರಚಿನ್ ರವೀಂದ್ರ, ಶಿವಂ ದುಬೆ ಜೊತೆಗಿನ ಸಂವಹನದ ಕೊರತೆಯಿಂದಾಗಿ ರನೌಟ್ಗೆ ಬಲಿಯಾಗಬೇಕಾಯಿತು. ಅಂತಿಮವಾಗಿ ರನ್ಗಳಿಸಲು ಹೆಣಗಾಡುತ್ತಿದ್ದ ದುಬೆ, 15 ಎಸೆತಗಳಲ್ಲಿ 7 ರನ್ ಬಾರಿಸಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಬಿಗ್ ಸಿಕ್ಸರ್ಗಳಿಗೆ ಹೆಸರುವಾಸಿಯಾಗಿರುವ ದುಬೆ, ಚಿನ್ನಸ್ವಾಮಿಯಂತಹ ಚಿಕ್ಕ ಮೈದಾನದಲ್ಲಿ ಸಿಕ್ಸರ್ ಬಾರಿಸಲು ಸಾಧ್ಯವಾಗದೆ ಕ್ಯಾಚಿತ್ತು ಔಟಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಶಾರ್ದೂಲ್ ಠಾಕೂರ್ ಹಾಗೂ ಶಿವಂ ದುಬೆ ಅವರ ಕಳಪೆ ಬೌಲಿಂಗ್ ಹಾಗೂ ಕಳಪೆ ಬ್ಯಾಟಿಂಗ್ನಿಂದಾಗಿ ತಂಡ ಸೋಲನುಭವಿಸಬೇಕಾಯಿತು ಎಂದು ಅಭಿಮಾನಿಗಳು ಇದೀಗ ಈ ಇಬ್ಬರನ್ನು ಸೋಲಿಗೆ ಹೊಣೆ ಮಾಡುತ್ತಿದ್ದಾರೆ.
Published On - 4:11 pm, Sun, 19 May 24



















