Mayank Yadav: ಟೀಮ್ ಇಂಡಿಯಾ ಹಿಟ್ ಲಿಸ್ಟ್ನಲ್ಲಿ ಮಯಾಂಕ್ ಯಾದವ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೊದಲೆರಡು ಪಂದ್ಯಗಳಲ್ಲೇ ಕರಾರುವಾಕ್ ದಾಳಿ ಸಂಘಟಿಸಿರುವ ಮಯಾಂಕ್ ಯಾದವ್ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು IPL 2024 ರ ಅಂತ್ಯದವರೆಗೆ ಮುಂದುವರೆಸಿದರೆ ಯುವ ವೇಗಿಗೆ ಭಾರತ ತಂಡದಲ್ಲಿ ಚಾನ್ಸ್ ಸಿಗಲಿದೆ.
Updated on: Apr 03, 2024 | 11:52 AM

2 ಪಂದ್ಯ... 8 ಓವರ್... 41 ರನ್... 6 ವಿಕೆಟ್... 145 ರಿಂದ 155 ರ ನಡುವಣ ಸರಾಸರಿ ವೇಗ... ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಯುವ ವೇಗದ ಬೌಲರ್ ಮಯಾಂಕ್ ಯಾದವ್ (Mayank Yadav) ಸಂಚಲನ ಸೃಷ್ಟಿಸುತ್ತಿದ್ದಾರೆ. ಆಡಿದ ಕೇವಲ 2 ಪಂದ್ಯಗಳಲ್ಲೇ 6 ವಿಕೆಟ್ ಉರುಳಿಸಿ ಇದೀಗ ಎಲ್ಲರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೇಗದೊಂದಿಗೆ ಅತೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಮಯಾಂಕ್ ಪ್ರಸ್ತುತ ಲೀಗ್ನಲ್ಲಿ 145 ರಿಂದ 155 kmph ಸರಾಸರಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅದು ಕೂಡ ಅತ್ಯುತ್ತಮ ಲೈನ್ ಅ್ಯಂಡ್ ಲೆಂಗ್ತ್ನೊಂದಿಗೆ ಎಂಬುದು ವಿಶೇಷ.

ಪಂಜಾಬ್ ಕಿಂಗ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಮಯಾಂಕ್ ಯಾದವ್ ಕೇವಲ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ಓವರ್ಗಳಲ್ಲಿ ನೀಡಿದ್ದು ಕೇವಲ 14 ರನ್ ಮಾತ್ರ. ಇನ್ನು 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಬೆಂಗಳೂರಿನ ಬ್ಯಾಟಿಂಗ್ನ ಪಿಚ್ನಲ್ಲೂ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿರುವ 21 ವರ್ಷದ ಯುವ ವೇಗಿ ಮೇಲೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಅದು ಕೂಡ ಮುಂಬರುವ ಟಿ20 ವಿಶ್ವಕಪ್ಗಾಗಿ ಎಂಬುದು ವಿಶೇಷ.

ಏಕೆಂದರೆ ಮುಂಬರುವ ಟಿ20 ವಿಶ್ವಕಪ್ಗೆ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅಲಭ್ಯರಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಆಯ್ಕೆಗೆ ಲಭ್ಯರಿಲ್ಲ. ಇತ್ತ ಜಸ್ಪ್ರೀತ್ ಬುಮ್ರಾಗೆ ಸಾಥ್ ನೀಡುವಂತಹ ಉತ್ತಮ ಬೌಲರ್ನ ಅವಶ್ಯಕತೆಯಿದೆ. ಮತ್ತೊಂದೆಡೆ ಈ ಬಾರಿಯ ಐಪಿಎಲ್ನಲ್ಲಿ ಭಾರತೀಯ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಕೂಡ ಮೂಡಿಬರುತ್ತಿಲ್ಲ.

ಇದರ ನಡುವೆ ಮಯಾಂಕ್ ಯಾದವ್ ವೇಗದೊಂದಿಗೆ ಸಂಚಲನ ಸೃಷ್ಟಿಸುತ್ತಿದ್ದಾರೆ. ಅತ್ತ ಟಿ20 ವಿಶ್ವಕಪ್ ನಡೆಯಲಿರುವುದು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ. ವಿಂಡೀಸ್ನ ಪಿಚ್ಗಳು ವೇಗದ ಬೌಲರ್ಗಳಿಗೆ ಸಹಕಾರಿ. ಹೀಗಾಗಿ ಮಯಾಂಕ್ ಯಾದವ್ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ವಿಶೇಷ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.

ಮೊದಲೆರಡು ಪಂದ್ಯಗಳಲ್ಲಿ ಕೇವಲ 5.12 ಸರಾಸರಿಯಲ್ಲಿ ಮಾತ್ರ ರನ್ ನೀಡಿರುವ ಮಯಾಂಕ್ ಯಾದವ್ ಇದೇ ಭರ್ಜರಿ ಪ್ರದರ್ಶನ ಮುಂದುವರೆಸಿದರೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಏಕೆಂದರೆ ಕೆರಿಬಿಯನ್ ದ್ವೀಪಗಳ ಪಿಚ್ನಲ್ಲಿ ವೇಗದ ಬೌಲರ್ಗಳು ಹೆಚ್ಚು ಯಶಸ್ವಿಯಾಗುತ್ತಾರೆ.

ಇದೀಗ ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಅತ್ಯುತ್ತಮವಾಗಿ ದಾಳಿ ಸಂಘಟಿಸಬಲ್ಲ ಮತ್ತೋರ್ವ ವೇಗಿ ಇಲ್ಲ. ಈ ಕೊರತೆಯನ್ನು ನೀಗಿಸುವ ಹೊಸ ಆಶಾಭಾವನೆ ಹುಟ್ಟುಹಾಕಿದ್ದಾರೆ ಮಯಾಂಕ್ ಯಾದವ್. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಕರಾರುವಾಕ್ ದಾಳಿಯೊಂದಿಗೆ ಮಯಾಂಕ್ ಮಿಂಚಿದರೆ ಟೀಮ್ ಇಂಡಿಯಾದ ಬಾಗಿಲು ತೆರೆದುಕೊಳ್ಳಲಿದೆ.
