
ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಮೆಂಟ್ನಲ್ಲಿ ಮಹಾರಾಷ್ಟ್ರ ಪರ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 111 ರನ್ಗಳ ಇನ್ನಿಂಗ್ಸ್ ಆಡಿದ್ದ ಪೃಥ್ವಿ, 15 ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದ್ದರು. ಸದ್ಯ ಉತ್ತಮ ಫಾರ್ಮ್ನಲ್ಲಿ ಕಾಣಿಸಕೊಂಡಿರುವ ಪೃಥ್ವಿ ಖರೀದಿಗಾಗಿ ಮೂರು ಐಪಿಎಲ್ ತಂಡಗಳು ಯೋಜನೆ ಹಾಕಿಕೊಂಡಿವೆ.

ಐಪಿಎಲ್ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಪೃಥ್ವಿ ಶಾರನ್ನು 2025 ರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ. ಆದಾಗ್ಯೂ ಪೃಥ್ವಿ ಪ್ರಸ್ತುತ ಇರುವ ಫಾರ್ಮ್ ಅನ್ನು ಗಮನಿಸಿದರೆ, 2026 ರ ಐಪಿಎಲ್ನಲ್ಲಿ ಮೂರು ತಂಡಗಳು ಖಂಡಿತವಾಗಿಯೂ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತವೆ. ಇವುಗಳಲ್ಲಿ ಒಂದು ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಆಗಿರಬಹುದು.

ಪೃಥ್ವಿ ಶಾ ಕೊನೆಯ ಬಾರಿಗೆ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದರು. ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಎಂಟು ಪಂದ್ಯಗಳನ್ನಾಡಿದ್ದ ಪೃಥ್ವಿ 24.75 ರ ಸರಾಸರಿಯಲ್ಲಿ 198 ರನ್ ಗಳಿಸಿದ್ದರು. 2025 ರ ಸೀಸನ್ಗೂ ಮೊದಲು ಡೆಲ್ಲಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಲು ಇದೇ ಕಾರಣ.

ಐಪಿಎಲ್ನ ಆರಂಭಿಕ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪೃಥ್ವಿ ಭರವಸೆ ಮೂಡಿಸಿದ್ದರು. ಆದರೆ ಆ ಬಳಿಕ ಅವರ ಫಾರ್ಮ್ ಕ್ಷೀಣಿಸಲಾರಂಭಿಸಿತು. ಹೀಗಾಗಿ ಇದುವರೆಗೆ ಐಪಿಎಲ್ನಲ್ಲಿ 79 ಪಂದ್ಯಗಳನ್ನಾಡಿರುವ ಅವರು 23.95 ರ ಸರಾಸರಿಯಲ್ಲಿ 1892 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 14 ಅರ್ಧಶತಕಗಳಿದ್ದು, ಅತ್ಯುತ್ತಮ ಸ್ಕೋರ್ 99 ರನ್ಗಳಾಗಿವೆ.

2025 ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ತಂಡವು ಪ್ಲೇಆಫ್ಗೆ ತಲುಪಲು ವಿಫಲವಾಯಿತು. ಆಡಿದ 14 ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಗೆದ್ದಿತು. ಅದರಲ್ಲೂ ತಂಡದಲ್ಲಿ ಉತ್ತಮ ಆರಂಭಿಕರ ಕೊರತೆ ಎದ್ದು ಕಾಣಿಸುತ್ತಿದ್ದು, ಪೃಥ್ವಿ ಆ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಬಹುದು.

ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸೇರಿದೆ. ಡೆಲ್ಲಿ ತಂಡ ಕೂಡ ಪ್ಲೇಆಫ್ಗೆ ತಲುಪಲು ಸಾಧ್ಯವಾಗಲಿಲ್ಲ. ಈ ಇಡೀ ಆವೃತ್ತಿಯಲ್ಲಿ 4 ವಿಭಿನ್ನ ಆಟಗಾರರನ್ನು ಆರಂಭಿಕರನ್ನಾಗಿ ಡೆಲ್ಲಿ ಕಣಕ್ಕಿಳಿಸಿತು. ಅದರಲ್ಲಿ ಫಾಫ್ ಡು ಪ್ಲೆಸಿಸ್ 9 ಇನ್ನಿಂಗ್ಸ್ಗಳಲ್ಲಿ 202 ರನ್ ಗಳಿಸಿದರೆ, ಜ್ಯಾಕ್ ಫ್ರಾಂಜರ್-ಮೆಕ್ಗುರ್ಕ್ 6 ಪಂದ್ಯಗಳಲ್ಲಿ ಕೇವಲ 55 ರನ್ ಬಾರಿಸಿದರು. ಕೆಎಲ್ ರಾಹುಲ್ 539 ರನ್ ಗಳಿಸಿದರೆ, ಅಭಿಷೇಕ್ ಪೊರೆಲ್ 301 ರನ್ ಗಳಿಸಿದರು. ಹೀಗಾಗಿ ಸ್ಥಿರ ಆರಂಭ ನೀಡುವ ಮತ್ತೊಬ್ಬ ಆರಂಭಿಕ ಆಟಗಾರ ಡೆಲ್ಲಿ ತಂಡಕ್ಕೆ ಅಗತ್ಯವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯವನ್ನು ಮಾತ್ರ ಗೆದ್ದಿತ್ತು. ಸೀಸನ್ ಉದ್ದಕ್ಕೂ ತಂಡದ ಬ್ಯಾಟ್ಸ್ಮನ್ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಮೊದಲ ಕೆಲವು ಪಂದ್ಯಗಳ ನಂತರ, ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಹೊರಗುಳಿದರು, ಇದರಿಂದಾಗಿ ಅಗ್ರ ಕ್ರಮಾಂಕವು ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೃಥ್ವಿ ಶಾ ಆಗಮನದಿಂದ ತಂಡದ ಬ್ಯಾಟಿಂಗ್ ಲೈನ್ ಅಪ್ ತುಂಬಾ ಬಲಿಷ್ಠವಾಗಲಿದೆ. ಆದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖಂಡಿತವಾಗಿಯೂ ಇವರ ಮೇಲೆ ಕಣ್ಣಿಟ್ಟಿರುತ್ತದೆ.