
ಟೀಂ ಇಂಡಿಯಾದ ವಿಕೆಟ್ ಕೀಪರ್ -ಬ್ಯಾಟ್ಸ್ಮನ್ ರಿಷಭ್ ಪಂತ್ ಕಳೆದ ಕೆಲವು ತಿಂಗಳುಗಳಿಂದ ಗಾಯದ ಕಾರಣದಿಂದಾಗಿ ಕ್ರಿಕೆಟ್ ಮೈದಾನದಿಂದ ದೂರವಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಬ್ಯಾಟಿಂಗ್ ಮಾಡುವ ವೇಳೆ ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರ ಚೆಂಡು ಪಂತ್ ಅವರ ಶೂಗೆ ತಗುಲಿ ಕಾಲ್ಬೆರಳು ಮುರಿದಿತ್ತು . ಹೀಗಾಗಿ ಅವರನ್ನು ಸರಣಿಯಿಂದಲೇ ಹೊರಗಿಡಲಾಯಿತು.

ಈ ಪಾದದ ಗಾಯದಿಂದ ಪಂತ್ ಇನ್ನೂ ಚೇತರಿಸಿಕೊಂಡಿಲ್ಲ. ಪರಿಣಾಮವಾಗಿ, ಅವರು ಏಷ್ಯಾಕಪ್ನಲ್ಲೂ ಆಡಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಪಂತ್ ಆಯ್ಕೆಯಾಗಲಿಲ್ಲ. ಹಾಗೆಯೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಯಲ್ಲೂ ಪಂತ್ ಕಾಣಿಸಿಕೊಂಡಿಲ್ಲ.

ಆದಾಗ್ಯೂ ಚೇತರಿಕೆಯ ಹಾದಿಯಲ್ಲಿರುವ ರಿಷಭ್ ಪಂತ್ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಸುಮಾರು ಮೂರು ತಿಂಗಳ ನಂತರ ಪಂತ್ ರಣಜಿ ಟ್ರೋಫಿಯಲ್ಲಿ ಆಡುವುದನ್ನು ಕಾಣಬಹುದು. ಆದರೆ ಅದಕ್ಕೂ ಮುನ್ನ ಅಕ್ಟೋಬರ್ 25 ರಿಂದ ದೆಹಲಿಯಲ್ಲಿ ನಡೆಯಲಿರುವ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ನ ಪಂದ್ಯದಲ್ಲಿ ಭಾಗವಹಿಸುವ ಬಯಕೆಯನ್ನು ಪಂತ್ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಅವರಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಫಿಟ್ನೆಸ್ ಕ್ಲಿಯರೆನ್ಸ್ ಅಗತ್ಯವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಿಷಭ್ ಪಂತ್ ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕನ ಸ್ಥಾನವನ್ನು ಸಹ ವಹಿಸಿಕೊಳ್ಳಬಹುದು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ಶೀಘ್ರದಲ್ಲೇ ಪಂತ್ ಅವರ ಇಂಜುರಿಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಮೌಲ್ಯಮಾಪನ ಮಾಡಲಿದೆ. ಆದಾಗ್ಯೂ, ಅಕ್ಟೋಬರ್ 15 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಡುವುದು ಪಂತ್ ಅವರಿಗೆ ತುಂಬಾ ಕಷ್ಟಕರವಾಗಿರುತ್ತದೆ.

ಭಾರತ ತಂಡವು ನವೆಂಬರ್ 14 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಪಂತ್ ಸಮಯಕ್ಕೆ ಸರಿಯಾಗಿ ಫಿಟ್ ಆಗಿದ್ದರೆ, ರಣಜಿ ಟ್ರೋಫಿ ನಂತರ ಅವರು ಟೀಂ ಇಂಡಿಯಾಕ್ಕೆ ಮರಳಬಹುದು. ಪ್ರಸ್ತುತ, ಧ್ರುವ್ ಜುರೆಲ್ ಭಾರತೀಯ ತಂಡದಲ್ಲಿ ಪಂತ್ ಸ್ಥಾನದಲ್ಲಿ ಆಡುತ್ತಿದ್ದು, ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.