ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಟಿ20 ಟ್ರೋಫಿ ವಿಶೇಷವಾಗಿ ಆರತಿ ಬೆಳಗಲಾಯಿತು.
ಇದೀಗ 17 ವರ್ಷಗಳ ಬಳಿಕ ಭಾರತಕ್ಕೆ ದೊರಕಿದ ಟಿ20 ವಿಶ್ವಕಪ್ ಟ್ರೋಫಿಯ ವಿಶೇಷ ಪೂಜೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಪೂಜೆಯ ಬಳಿಕ ಟೀಮ್ ಇಂಡಿಯಾ ನಾಯಕ ಹಾಗೂ ಬಿಸಿಸಿಐ ಕಾರ್ಯದರ್ಶಿ ಜೊತೆಯಾಗಿ ಸಿಯೆಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯಿತು. ಈ ಪಂದ್ಯದ ಗೆಲುವಿನ ರೂವಾರಿಗಳೆಂದರೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ. 76 ರನ್ಗಳ ಕೊಡುಗೆಯೊಂದಿಗೆ ಕಿಂಗ್ ಕೊಹ್ಲಿ ಟೀಮ್ ಇಂಡಿಯಾ 176 ರನ್ ಪೇರಿಸಲು ನೆರವಾಗಿದ್ದರು.
177 ರನ್ಗಳ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಒಂದು ಹಂತದಲ್ಲಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಏಕೆಂದರೆ ಕೊನೆಯ 30 ಎಸೆತಗಳಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೇಕಿದದ್ದು ಕೇವಲ 30 ರನ್ಗಳು ಮಾತ್ರ. ಈ ವೇಳೆ ದಾಳಿಗಳಿದ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.
ಕೊನೆಯ 5 ಓವರ್ಗಳಲ್ಲಿ ಬುಮ್ರಾ ಎಸೆದ 2 ಓವರ್ಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು. 16ನೇ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ನೀಡಿದ್ದು ಕೇವಲ 4 ರನ್ಗಳು ಮಾತ್ರ. ಇದರಿಂದ ಒತ್ತಡಕ್ಕೆ ಸಿಲುಕಿದ ಹೆನ್ರಿಕ್ ಕ್ಲಾಸೆನ್ 17ನೇ ಓವರ್ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಅಲ್ಲದೆ ಈ ಓವರ್ನಲ್ಲಿ ಪಾಂಡ್ಯ ನೀಡಿದ್ದು ಕೇವಲ 4 ರನ್ಗಳು ಮಾತ್ರ.
ಇದಾದ ಬಳಿಕ 18ನೇ ಓವರ್ನಲ್ಲಿ ಬಿಗಿ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಮಾರ್ಕೊ ಯಾನ್ಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಓವರ್ನಲ್ಲಿ ಬುಮ್ರಾ ನೀಡಿದ್ದು ಕೇವಲ 2 ರನ್ಗಳು ಮಾತ್ರ. ಅಂತಿಮವಾಗಿ 20 ಓವರ್ಗಳಲ್ಲಿ 169 ರನ್ಗಳಿಸಿ ಸೌತ್ ಆಫ್ರಿಕಾ ತಂಡವು 7 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ 2ನೇ ಬಾರಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅನ್ನು 2ನೇ ಬಾರಿಗೆ ಮುಡಿಗೇರಿಕೊಂಡಿದೆ.
Published On - 9:00 am, Thu, 22 August 24