- Kannada News Photo gallery Cricket photos virat Kohli Returns to Ranji Trophy After 13 Years: Delhi Match Details
Virat Kohli Ranji Trophy: ರಣಜಿ ಟ್ರೋಫಿಯಲ್ಲಿ ಈ ದಿನದಂದು ಕಣಕ್ಕಿಳಿಯಲಿದ್ದಾರೆ ವಿರಾಟ್ ಕೊಹ್ಲಿ
Virat Kohli Ranji Trophy: ವಿರಾಟ್ ಕೊಹ್ಲಿ 13 ವರ್ಷಗಳ ನಂತರ ರಣಜಿ ಟ್ರೋಫಿಗೆ ಮರಳುತ್ತಿದ್ದಾರೆ. ಜನವರಿ 30 ರಿಂದ ರೈಲ್ವೇಸ್ ವಿರುದ್ಧ ದೆಹಲಿ ಪರ ಆಡುವ ಸಾಧ್ಯತೆಯಿದೆ. ಗಾಯದಿಂದಾಗಿ ಮೊದಲ ಪಂದ್ಯವನ್ನು ಕೊಹ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಮೊದಲ ಪಂದ್ಯಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ಅವರು ಎರಡನೇ ಪಂದ್ಯವನ್ನು ಆಡುವ ಸಾಧ್ಯತೆಗಳು ಹೆಚ್ಚಿವೆ.
Updated on: Jan 20, 2025 | 8:27 PM

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಬರೋಬ್ಬರಿ 13 ವರ್ಷಗಳ ಬಳಿಕ ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಬಿಸಿಸಿಐ ಸೂಚನೆಯಂತೆ ದೇಶೀಯ ಕ್ರಿಕೆಟ್ ಆಡಲು ಮುಂದಾಗಿರುವ ವಿರಾಟ್ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಇದೀಗ ವರದಿಯ ಪ್ರಕಾರ ಜನವರಿ 30 ರಿಂದ ನಡೆಯಲಿರುವ 2ನೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗುತ್ತಿದೆ.

ಜನವರಿ 30 ರಿಂದ ನಡೆಯಲಿರುವ ಪಂದ್ಯವನ್ನು ಆಡುವುದಾಗಿ ವಿರಾಟ್ ಕೊಹ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಗೆ ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ರೈಲ್ವೇಸ್ ವಿರುದ್ಧ ರಣಜಿ ಟ್ರೋಫಿಯ ಗುಂಪು ಹಂತದಲ್ಲಿ ಇದು ದೆಹಲಿಯ ಕೊನೆಯ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡ ಸೌರಾಷ್ಟ್ರ ವಿರುದ್ಧ ಜನವರಿ 23ರಿಂದ ಪಂದ್ಯ ಆಡಬೇಕಿದೆ.

ಈ ಎರಡೂ ಪಂದ್ಯಗಳಿಗೆ ಕೊಹ್ಲಿಯನ್ನು ದೆಹಲಿಯ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು ಆದರೆ ಕತ್ತು ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದರು. ಆ ನಂತರ DDCA ಆಯ್ಕೆಗಾರರು ಕೊಹ್ಲಿಯ ಹೆಸರನ್ನು ನವೀಕರಿಸಿದ ತಂಡದಿಂದ ತೆಗೆದುಹಾಕಿದ್ದರು.

ಒಂದು ವೇಳೆ ಕೊಹ್ಲಿ ಎರಡನೇ ಪಂದ್ಯದಲ್ಲಿ ಆಡಿದರೆ 13 ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿದಂತ್ತಾಗುತ್ತದೆ. ಕೊಹ್ಲಿ ಕೊನೆಯ ಬಾರಿಗೆ 2012ರಲ್ಲಿ ದೆಹಲಿ ಪರ ರಣಜಿ ಪಂದ್ಯ ಆಡಿದ್ದರು. ಆದಾಗ್ಯೂ, ಈ ಬಗ್ಗೆ ಇನ್ನೂ ಅನುಮಾನವಿದೆ ಏಕೆಂದರೆ ಈ ಪಂದ್ಯವು ಜನವರಿ 30 ರಿಂದ ಫೆಬ್ರವರಿ 2 ರವರೆಗೆ ನಡೆಯಲಿದ್ದು, ನಂತರ ಫೆಬ್ರವರಿ 6 ರಿಂದ ಏಕದಿನ ಸರಣಿ ನಡೆಯಲಿದೆ. ಇದರಲ್ಲಿ ಕೊಹ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಹೀಗಿರುವಾಗ ಮೊದಲ ಏಕದಿನ ಪಂದ್ಯದಿಂದ ವಿರಾಮ ತೆಗೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಬಿಸಿಸಿಐನ ಕಟ್ಟುನಿಟ್ಟಿನ ಆದೇಶದ ನಂತರ ಟೀಂ ಇಂಡಿಯಾದ ಎಲ್ಲಾ ಹಿರಿಯ ಮತ್ತು ಹೊಸ ಆಟಗಾರರು ತಮ್ಮ ತಮ್ಮ ತಂಡಗಳ ರಣಜಿ ಟ್ರೋಫಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನವರಿ 23 ರಿಂದ ನಡೆಯಲಿರುವ ಸುತ್ತಿಗೆ ರಿಷಭ್ ಪಂತ್, ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಈಗಾಗಲೇ ಲಭ್ಯರಿರುವುದಾಗಿ ತಿಳಿಸಿದ್ದಾರೆ.

ಇವರಲ್ಲದೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಮುಂಬೈ ತಂಡಕ್ಕೆ ವಾಪಸಾಗಿರುವುದಾಗಿ ಘೋಷಿಸಿದ್ದು, ಮುಂದಿನ ಪಂದ್ಯಕ್ಕೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಕೂಡ ಆಡುತ್ತಿರುವುದನ್ನು ಕಾಣಬಹುದು.

ಕಳೆದ ಕೆಲವು ದಿನಗಳಿಂದ, ಹಿರಿಯ ಆಟಗಾರರು ದೇಶೀಯ ಪಂದ್ಯಾವಳಿಗಳಲ್ಲಿ, ವಿಶೇಷವಾಗಿ ರಣಜಿ ಟ್ರೋಫಿಯಲ್ಲಿ ಆಡಬೇಕೇ ಎಂಬ ಬಗ್ಗೆ ಭಾರತೀಯ ಕ್ರಿಕೆಟ್ನಲ್ಲಿ ನಿರಂತರ ಚರ್ಚೆ ನಡೆಯುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ, ವಿಶೇಷವಾಗಿ ಹಿರಿಯ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದ ನಂತರ ಬಿಸಿಸಿಐ ಎಲ್ಲಾ ಆಟಗಾರರಿಗೆ ದೇಶೀ ಟೂರ್ನಿ ಆಡುವುದನ್ನು ಕಡ್ಡಾಯಗೊಳಿಸಿದೆ.



















