- Kannada News Photo gallery crop closes, farmers are not happy: prices have fallen down, Karnataka news in kannada
ಭರ್ಜರಿ ಬೆಳೆ ಬಂದ್ರೂ ರೈತರಿಗಿಲ್ಲ ನೆಮ್ಮದಿ: ಪಾತಾಳಕ್ಕೆ ಕುಸಿದ ಬೆಲೆ, ರೈತರ ಗೋಳಾಟ
ಕಳೆದ ವರ್ಷ ಭೀಕರ ಬರಕ್ಕೆ ಬಿತ್ತಿದ ಬೀಜ ಭೂಮಿಯಲ್ಲೇ ಸುಟ್ಟು ಹೋಗಿತ್ತು. ಲಕ್ಷ ಲಕ್ಷ ರೂ. ಖರ್ಚು ಮಾಡಿದ ಅನ್ನದಾತ ದಿಕ್ಕು ತೋಚದೇ ಕಂಗಾಲಾಗಿದ್ದ. ಬರಡು ಭೂಮಿ ನೋಡಿ ರೈತರು ಕಣ್ಣೀರು ಹಾಕಿದ್ರು. ಆದ್ರೆ ಈ ವರ್ಷ ವರುಣದೇವ ಕೃಪೆ ತೋರಿದ್ದಾನೆ. ಹೀಗಾಗಿ ಬೆಳೆ ಕೂಡ ಭರ್ಜರಿಯಾಗಿ ಬಂದಿದೆ. ರೈತರು ಕೂಡ ಫುಲ್ ಖುಷಿಯಾಗಿದ್ದಾರೆ. ಆದ್ರೆ, ಆ ಖುಷಿ ಅನುಭವಿಸುವ ಭಾಗ್ಯ ನಮ್ಮ ರೈತರಿಗೆ ಇಲ್ಲದಂತಾಗಿದೆ.
Updated on: Aug 24, 2024 | 7:32 PM

ಗದಗ ಜಿಲ್ಲೆಯ ರೈತರಿಗೆ ಬೆಳೆ ಬಂದ್ರು ಬರದಿದ್ರು ಕಷ್ಟ ಎಂಬಂತಾಗಿದೆ. ಕಳೆದ ವರ್ಷ ಭೀಕರ ಬರ ರೈತರ ಬದುಕನ್ನು ಸರ್ವನಾಶ ಮಾಡಿತ್ತು. ಈ ವರ್ಷ ಭರ್ಜರಿ ಬೆಳೆ ಬಂದಿದೆ. ರೈತರು ಫುಲ್ ಖುಷಿಯಲ್ಲಿದ್ದಾರೆ. ಆದರೆ ಬೆಲೆ ಮಾತ್ರ ಕುಸಿದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ಅನ್ನದಾತರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಸಾಲಸೋಲ ಮುಟ್ಟಿಸಿ ಈ ವರ್ಷ ನಮ್ಮ ಬದುಕು ಕಟ್ಟಿಕೊಳ್ಳಬಹುದು ಅಂತ ಕನಸು ಕಂಡಿದ್ದ ರೈತರು ಖುಷಿಯಿಂದಲೇ ಗದಗ ಎಪಿಎಂಸಿ ಮಾರಾಟಕ್ಕಾಗಿ ಹೆಸರು ಬೆಳೆ ತೆಗೆದುಕೊಂಡು ಬಂದಿದ್ದಾರೆ. ಒಳ್ಳೆಯ ಬೆಲೆ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ ಅನ್ನದಾತನಿಗೆ ಬರಸಿಡಿಲು ಬಡಿದಂತಾಗಿದೆ. ಕ್ವಿಂಟಾಲ್ ಹೆಸರು ಬೆಳೆಗೆ 9-10 ಸಾವಿರ ಇದ್ದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಎಪಿಎಂಸಿ ಮಾರುಕಟ್ಟೆ ದರ ಕೇಳಿ ರೈತರು ಶಾಕ್ ಆಗಿದ್ದಾರೆ. ಕಳೆದ ವರ್ಷ ಬರ ನುಂಗಿದ್ದರೆ ಈ ವರ್ಷ ಬೆಳೆ ಚೆನ್ನಾಗಿದ್ದರು ದರ ನಮ್ಮ ಬದುಕೇ ನುಂಗಿ ಹಾಕಿದೆ ಅಂತ ರೈತರು ಗೋಳಾಡುತ್ತಿದ್ದಾರೆ.

ಗದಗ ಜಿಲ್ಲೆ ಅಂದ್ರೆ ಅದು ಹೆಸರು ಕಣಜ ಎಂದೇ ಫೇಮಸ್ ಆಗಿದೆ. ಯಾಕಂದ್ರೆ ರಾಜ್ಯದಲ್ಲೇ ಅತೀ ಹೆಚ್ಚು ಹೆಸರು ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷ ಗದಗ ಜಿಲ್ಲೆಯಲ್ಲಿ ಒಟ್ಟು ಹೇಕ್ಟರ್ನಲ್ಲಿ ರೈತರು ಹೆಸರು ಬೆಳೆದಿದ್ದಾರೆ. ಹೀಗಾಗಿ ನಿತ್ಯವೂ ಗದಗ ಎಪಿಎಂಸಿ ಮಾರುಕಟ್ಟೆಗೆ 10-12 ಸಾವಿರ ಕ್ವಿಂಟಾಲ್ ಹೆಸರು ಆಮದು ಆಗುತ್ತಿದೆ.

ಇಂದು ಬರೊಬ್ಬರಿ ಹತ್ತು ಸಾವಿರ ಕ್ವಿಂಟಾಲ್ ಹೆಸರು ಬೆಳೆ ಆಮದು ಆಗಿದೆ. ದಲ್ಲಾಳಿಗಳ ಕುತಂತ್ರದಿಂದ ದರ ಪಾತಾಳಕ್ಕೆ ಕುಸಿಯುವಂತಾಗಿದೆ ಎಂದು ರೈತರು ಕಿಡಿಕಾರಿದ್ದಾರೆ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಅನ್ನದಾತರು ಒತ್ತಾಯಿಸಿದ್ದಾರೆ.

ಈಗಾಗಲೇ ಖರೀದಿ ಕೇಂದ್ರ ಆರಂಭ ಮಾಡಬೇಕಿತ್ತು. ಸರ್ಕಾರ ಮಾಡಿಲ್ಲ. ರೈತರು ಎಲ್ಲ ಹೆಸರು ಬೆಳೆ ಮಾರಾಟ ಮಾಡಿದ ಬಳಿಕ ಖರೀದಿ ಕೇಂದ್ರ ಆರಂಭಿಸುತ್ತಾರೆ. ಇದು ರೈತರಿಗೆ ಅನುಕೂಲ ಆಗಲ್ಲ. ಬದಲಾಗಿ ದಲ್ಲಾಳಿಗಳಿಗೆ ಅನುಕೂಲ ಆಗಲಿದೆ ಅಂತ ರೈತರು ಕಿಡಿಕಾರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನು ಕೇಳಿದ್ರೆ, ಶೀಘ್ರದಲ್ಲೇ ಖರೀದಿ ಕೇಂದ್ರ ಆರಂಭಿಸಲಾಗುತ್ತೆ ಅಂತ ಹೇಳಿದ್ದಾರೆ.

ಭರ್ಜರಿ ಬೆಳೆ ಬಂದ್ರು ಉತ್ತರ ಕರ್ನಾಟಕದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಅನ್ನದಾತ ಸಂಕಷ್ಟಕ್ಕೆ ನೆರವಾಗಬೇಕಿದೆ.



