
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿ ಸುಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯ ಐದಾರು ಶತಮಾನದಷ್ಟೂ ಪುರಾತನವಾಗಿದ್ದು ಈ ಗುಪ್ತಲಿಂಗವಿರುವ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ.

ಪಕ್ಕದ ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಯಂದು ಸಾಕಷ್ಟು ಪ್ರಮಾಣಲ್ಲಿ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಇನ್ನೂ ಶ್ರಾವಣ ಮಾಸ ಆರಂಭದ ಮೊದನೇ ಅಮಾಸ್ಯೆ ಈ ದಿವಸದಂದು ಇಲ್ಲಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಈ ದೇವಸ್ಥಾನದ ವಿಶೇಷವನ್ನ ನೋಡುವುದಾದರೆ ಇಲ್ಲಿನ ಗುಪ್ತಲಿಂಗ ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದ್ದು ದೇವಸ್ಥಾನದಲ್ಲಿ ನೀರಿನ ಝರಿ ಇದುವರೆಗೂ ಬತ್ತಿರುವ ಉದಾಹರಣೆಗಳೇ ಇಲ್ಲ.

ಇಲ್ಲಿಗೆ ಬರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ನೀರನ್ನು ಔಷಧಿ ರೂಪದಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕಾಯಿಲೆಗಳು ವಾಸಿಯಾಗುತ್ತದೆ. ಚರ್ಮರೋಗದ ನಿವಾರಣೆಗೆ ಈ ನೀರು ರಾಮಬಾಣದಂತೆ ಕೆಲಸ ಮಾಡುತ್ತದೆ. ಇಲ್ಲಿನ ನೀರನ್ನು ಕುಡಿದರೆ ಮತ್ತು ಸ್ನಾನ ಮಾಡಿದರೆ ರೋಗ ವಾಸಿಯಾಗುತ್ತದೆ ಎಂಬುವುದು ಭಕ್ತರ ನಂಬಿಕೆ ಆಗಿದೆ.

ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷವಾಗಿದೆ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ನೀರು ಧುಮ್ಮಿಕ್ಕುತ್ತದೆ. ಇಲ್ಲಿ ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಜನರು ಇಲ್ಲಿಗೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು.

ದೇವಸ್ಥಾನಕ್ಕೆ ಬರುವವರು ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಪ್ರಾಣಿ, ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ. ಇನ್ನೂ ಬೆಸಿಗೆ, ಮಳೆಗಾಲ, ಚಳಿಗಾಲ ಯಾವುದೆ ಋತುವಿನಲ್ಲಿಯೂ ಇಲ್ಲಿಗೆ ಬಂದರೆ ಸಾಕು ಇಲ್ಲಿ ನೀರು ನಿರಂತರವಾಗಿ ಹರಯುತ್ತಲೇ ಇರುತ್ತದೆ. ಹೀಗಾಗಿ ಈ ದೇವಾಲಯ ಭಕ್ತರನ್ನ ಸೆಳೆಯುತ್ತಿದೆ. ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಅದ್ದೂರಿಯಾಗಿ ಜಾತ್ರೆ ಮಾಡಲಾಗುತ್ತದೆ. ಈ ಗುಪ್ತಲಿಂಗ ವಿರುವ ಬೆಟ್ಟದ ನೀರು ಹಲವು ಗುಣಗಳನ್ನ ಹೊಂದಿದೆ ಎಂದು ಪ್ರಭುಲಿಂಗ್ ಸ್ವಾಮಿ ಹಿರೆಮಠ ಪೂಜಾರಿ ಹೇಳುತ್ತಾರೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುಪ್ತಲಿಂಗನ ದರ್ಶನ ಪಡೆಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಐತಿಹಾಸಿಕ ದೇಸ್ಥಾನದ ನೀರು ಇಲ್ಲಿನ ಭಕ್ತರನ್ನ ಸೇಳೆಯುತ್ತಿರುವುದರ ಜೊತೆಗೆ ಅನೇಕ ರೋಗಗಳನ್ನ ರಾಮಬಾದಂತೆ ಕೆಲಸ ಮಾಡುತ್ತಿದೆ ಎಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಾರೆ.
Published On - 4:34 pm, Sun, 4 August 24