ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ರಾಯ್, ಶಿಕ್ಷೆ ತಪ್ಪಿಸಿಕೊಂಡಿದ್ದು ಹೇಗೆ?
Harish Rai: ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅಂದಹಾಗೆ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್ ಅವರಿಗೆ. ಏನಿದು ಪ್ರಕರಣ? ಪ್ರಕರಣದಿಂದ ಹೊರಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ...
Updated on:Nov 06, 2025 | 1:23 PM

ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅವರ ಕಳೆದ ಕೆಲ ವರ್ಷಗಳಿಂದಲೂ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್ ಅವರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವರ ಮೇಲೆ ಹರೀಶ್ ರಾಯ್ ಮತ್ತು ಅವರ ಕೆಲವರು ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

ಆ ಸಂದರ್ಭದಲ್ಲಿ ಹರೀಶ್ ರಾಯ್ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ಆರೋಪ ದಾಖಲಾಗಿತ್ತು. ಪ್ರಕರಣ ಸೆಷನ್ಸ್ ಕೋರ್ಟ್ನಲ್ಲಿತ್ತು, ಆದರೆ ಹರೀಶ್ ರಾಯ್ ಅಷ್ಟರಲ್ಲೆ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಕೊಂಡರು.

‘ಓಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯ್ ಅವರಿಗೆ ದೊರಕುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ.

ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್ಗಳು ಸಹ ಇದ್ದವು.

ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಂದು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.
Published On - 1:22 pm, Thu, 6 November 25




