
ಮುತ್ತಿನ ಹಾರ : ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸಿ ಸಿನಿ ಪ್ರಿಯರ ಮನಸ್ಸು ಗೆದ್ದುಕೊಂಡಿದ್ದರು. ಈ ಚಿತ್ರವು ಸೈನಿಕ ಹೋರಾಟದೊಂದಿಗೆ ಆತನ ಕೌಟುಂಬಿಕ ಜೀವನದ ಮೇಲೂ ಬೆಳಕು ಚೆಲ್ಲಿದೆ. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಅವನ ಸುಂದರ ದಾಂಪತ್ಯದೊಂದಿಗೆ ಯುದ್ಧ ಹೇಗೆ ಅವನ ಕುಟುಂಬವನ್ನು ಹೇಗೆ ನಾಶ ಮಾಡಿತು ಎನ್ನುವುದು ತೋರಿಸುವ ಮೂಲಕ ಸಿನಿ ಪ್ರಿಯರ ಮನಸ್ಸು ಗೆದ್ದಿದೆ.

ಸಾರ್ವಭೌಮ : ಮಹೇಶ್ ಸುಖಧರೆ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಮಯೂರಿ, ಶಿಲ್ಪಾ ಆನಂದ್, ಶರತ್ ಲೋಹಿತಾಶ್ವ, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಬಿ ವಿಜಯ ಹಂಸಲೇಖ ನಿರ್ಮಿಸಿದ್ದು, ಈ ಸಿನಿಮಾದಲ್ಲಿ ಶಿವರಾಜಕುಮಾರ್ ಡ್ಯುಯಲ್ ರೋಲ್ ಮಾಡಿದ್ದಾರೆ. ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳು ಮತ್ತು ಉದ್ಯಮಿಗಳ ವಿರುದ್ಧ ಸೈನಿಕನೊಬ್ಬ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ. ಶಿವರಾಜಕುಮಾರ್ ಸೈನಿಕ ಪಾತ್ರದಲ್ಲಿ ಮಿಂಚಿದ್ದಾರೆ.

ಸೈನಿಕ : ಈ ಚಿತ್ರವನ್ನು ಕೆ. ಮಹೇಶ್ ಸುಖಧರೆ ನಿರ್ದೇಶಿಸಿದ್ದು, ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗ ತಾನೇ ಮದುವೆಯಾದ ಸೈನಿಕನೊಬ್ಬ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ನಂತರ ಅವನು ಮಡಿದನೆಂದು ತಿಳಿದು ಅವನ ಕುಟಂಬವು ಆತನನ್ನು ಸಂಪೂರ್ಣವಾಗಿ ಮರೆತಿರುತ್ತದೆ. ಆದರೆ ಆತನು ಬೇರೆಯದೇ ಮುಖಚರ್ಯೆಯೊಂದಿಗೆ ಎದುರು ಬಂದಾಗ ಆತನನ್ನು ಒಪ್ಪಲು ಸಿದ್ದವಿರುವುದಿಲ್ಲ. ಅವನ ಕುಟುಂಬವು ಆ ಸೈನಿಕನನ್ನು ನಿರಾಕರಿಸುವುದೇ ಈ ಸಿನಿಮಾದ ಕಥೆಯಾಗಿದೆ.

ವಂದೇ ಮಾತರಂ : ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ವಿಜಯಶಾಂತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿನೋದ್ ರಾಜ್, ರವಿತೇಜಾ, ಕುಮಾರ ಗೋವಿಂದ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನವಪೀಳೀಗೆಯ ಯುವಕರನ್ನು ಹೇಗೆ ಉಗ್ರಗಾಮಿ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ಎಂಬುದು ಈ ಚಿತ್ರದ ಕಥಾವಸ್ತುವಾಗಿದೆ.

ವೀರಪ್ಪ ನಾಯಕ : ಎಸ್.ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಶೃತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಮಾ ಚೌಧರಿ, ಸುಧೀರ್, ಶೋಭರಾಜ್ ಮುಂತಾದವರು ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಗಾಂಧಿವಾದಿ ನಾಯಕನ ಜೀವನದ ಮೇಲೆ ಬೆಳಕು ಚೆಲ್ಲಲಾಗಿದೆ. ಸಂಬಂಧಕ್ಕಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ದೇಶಪ್ರೇಮಿಯನ್ನು ಈ ಸಿನಿಮಾದಲ್ಲಿ ಕಾಣಬಹುದು.
Published On - 5:56 pm, Mon, 12 August 24