ಮಂಗಳೂರಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ನ ಶಕ್ತಿ ಪ್ರದರ್ಶನ; ಇಲ್ಲಿದೆ ಝಲಕ್
ರಾಜ್ಯ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಇಂದು ಯುದ್ದದ ವಾತವರಣವೇ ಸೃಷ್ಟಿಯಾಗಿತ್ತು. ಇಂಡಿಯನ್ ಕೋಸ್ಟ್ಗಾರ್ಡ್ನ ಗಸ್ತು ಹಡಗುಗಳು ಹೈ ಅಲರ್ಟ್ ಆಗಿದ್ದವು. ಶಸ್ತ್ರಾಸ್ತ್ರ ಹೊಂದಿದ್ದ ಕೋಸ್ಟ್ಗಾರ್ಡ್ ಸಿಬ್ಬಂದಿಗಳು ಹಡಗೊಂದನ್ನು ಸುತ್ತುವರಿದು ಪರಿಶೀಲನೆಯನ್ನು ನಡೆಸುತ್ತಿದ್ರು. ಈ ನಡುವೆ ಸಮುದ್ರಕ್ಕೆ ಬಿದ್ದ ಸೇನಾನಿಯೊಬ್ಬರನ್ನು ಕೋಸ್ಟ್ಗಾರ್ಡ್ನ ಹೆಲಿಕಾಫ್ಟರ್ ಮೂಲಕ ರೆಸ್ಕ್ಯೂ ಸಹ ಮಾಡಲಾಯಿತು. ಇಲ್ಲಿದೆ ಅದರ ಝಲಕ್.
Updated on: Feb 23, 2024 | 7:53 PM

ಮಂಗಳೂರಿನ ಪಣಂಬೂರು ಕಡಲತೀರದಿಂದ ಸುಮಾರು 15 ನಾಟಿಕಲ್ ಮೈಲ್ ದೂರದಲ್ಲಿ ಇಂದು ಭಾರತೀಯ ಕೋಸ್ಟ್ಗಾರ್ಡ್ನ ಗಸ್ತು ಹಡಗುಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು. ಒಂದು ಕಡೆ ಶಸ್ತ್ರಾಸ್ತ್ರ ಹೊಂದಿದ್ದ ಕೋಸ್ಟ್ಗಾರ್ಡ್ನ ಸಿಬ್ಬಂದಿಗಳು ಸಂಶಯಾಸ್ಪದ ಹಡಗೊಂದರ ಸುತ್ತ ಸುತ್ತುವರಿದು ಪರಿಶೀಲನೆಯಲ್ಲಿ ನಿರತರಾಗಿದ್ದರು. ಇನ್ನೊಂದು ಕಡೆ ನೀರಿಗೆ ಬಿದ್ದ ಸೇನಾನಿಯೊಬ್ಬರನ್ನು ಕೋಸ್ಟ್ಗಾರ್ಡ್ನ ಹೆಲಿಕಾಫ್ಟರ್ ಮೂಲಕ ಮೇಲಕೆತ್ತಿ ರಕ್ಷಣೆಯನ್ನು ಮಾಡಲಾಯಿತು.

ಆದ್ರೆ ಇದೆಲ್ಲ ಪೂರ್ವ ನಿರ್ಧರಿತ ಕಾರ್ಯಚರಣೆಯಾಗಿತ್ತು. 48ನೇ ಭಾರತೀಯ ಕೋಸ್ಟ್ಗಾರ್ಡ್ ದಿನಾಚರಣೆ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದ ಕಡಲತೀರದ ರಕ್ಷಣಾ ಪಡೆಯಾಗಿ ಇಂಡಿಯನ್ ಕೋಸ್ಟ್ಗಾರ್ಡ್ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ತೋರಿಸಲು ಈ ಅಣುಕು ಕಾರ್ಯಾಚರಣೆ ನಡೆಸಲಾಯಿತು.

ಅರಬ್ಬೀ ಸಮುದ್ರದ ಮಧ್ಯದಲ್ಲಿ ನಡೆದ ಯುದ್ದ ಕೌಶಲ್ಯ, ಪರಾಕ್ರಮಗಳ ಪ್ರದರ್ಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಹ ಸಾಕ್ಷಿಯಾದರು. ಕಾರ್ಯಚರಣೆಯಲ್ಲಿ ಇಂಡಿಯನ್ ಕೋಸ್ಟ್ಗಾರ್ಡ್ನ ವಿಕ್ರಮ್ ಹಡಗು, ಸಾವಿತ್ರಿ ಬಾಯಿ ಪುಲೆ ಹಡಗು ಸೇರಿದಂತೆ ಇಂಟರ್ ಸೆಪ್ಟರ್, ಜೆಮಿನಿ ಬೋಟ್ಗಳು, ಹೆಲಿಕಾಫ್ಟರ್, ಮಿನಿ ಜೆಟ್ ಬಳಸಿಕೊಳ್ಳಲಾಗಿತ್ತು.

ಕಾರ್ಯಾಚರಣೆ ನೋಡಲು ಬಂದವರು ಕಣ್ಣು ಮಿಟುಕಿಸದೆ ಕೋಸ್ಟ್ಗಾರ್ಡ್ ಅಧಿಕಾರಿ ಸಿಬ್ಬಂದಿಗಳ ಪರಾಕ್ರಮವನ್ನು ಕಣ್ತುಂಬಿಕೊಂಡರು. ಒಂದಕ್ಕೊಂದು ಅದ್ಬುತ ಎಂಬಂತೆ ಈ ಕಾರ್ಯಚರಣೆ ನಡೆದವು. ನೀರಿಗೆ ಬಿದ್ದ ಸೇನಾನಿಯೊಬ್ಬನನ್ನು ಹೆಲಿಕಾಫ್ಟರ್ ಮೂಲಕ ಮೇಲಕೆತ್ತುವ ಕಾರ್ಯಾಚರಣೆ ಅದ್ಭುತವಾಗಿತ್ತು. ನೀರಿಗೆ ಬಿದ್ದು ಸ್ಮೂಕ್ ಸಿಗ್ನಲ್ ನೀಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸುತ್ತುವರಿದು ರಕ್ಷಿಸಿದ್ರು.

ಬೋಟ್ ಒಂದರಲ್ಲಿ ಅಗ್ನಿ ಅವಘಡವಾದಾಗ ವಾಟರ್ ಕೆನನ್ ಮೂಲಕ ಭಾರಿ ಪ್ರಮಾಣದಲ್ಲಿ ದೂರಕ್ಕೆ ನೀರು ಚಿಮ್ಮಿಸುವ ಮೂಲಕ ಅಗ್ನಿ ಅವಘಡವನ್ನು ನಿಯಂತ್ರಣಕ್ಕೆ ತರಲಾಯಿತು. ಇದರ ಜೊತೆ ದೊಡ್ಡ ಗನ್ ಮೂಲಕ ಆಕಾಶದೆತ್ತರಕ್ಕೆ ಬುಲೆಟ್ ಫೈರಿಂಗ್ ಮಾಡಿ, ಸಮುದ್ರದಲ್ಲಿ ಭಾರತದ ಗಡಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ದೃಢೀಕರಿಸಿಕೊಂಡ ಬಳಿಕ ಗಸ್ತು ಹಡಗುಗಳು ಸ್ವಸ್ಥಾನಕ್ಕೆ ತಲುಪಿದವು.

ಕೋಸ್ಟ್ಗಾರ್ಡ್ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬ ಸದಸ್ಯರಿಗೂ ಈ ಕಾರ್ಯಚರಣೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಾಚರಣೆಯನ್ನು ನೋಡಿ ಕುಟುಂಬ ಸದಸ್ಯರು ಸಹ ಸಂತಸಪಟ್ಟರು. ಕೋಸ್ಟ್ಗಾರ್ಡ್ ಭಾರತದ ಸಮುದ್ರ ಭಾಗದ ಸರಹದ್ಧಿನಲ್ಲಿ ಹೇಗೆ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಲುತ್ತೆ, ಕಡಲುಗಳ್ಳರಿಂದ ಸರಕು ಹಡಗುಗಳನ್ನು ಹೇಗೆ ರಕ್ಷಣೆ ಮಾಡುತ್ತೆ, ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿದ್ದಾಗ ಹೇಗೆ ರಕ್ಷಣಾ ಕಾರ್ಯಾಚರಣೆ ಮಾಡುತ್ತೆ ಎಂದು ತೋರಿಸಲು ಈ ಅಣುಕು ಕಾರ್ಯಾಚರಣೆ ಮಾಡಲಾಯಿತು. ಒಟ್ಟಿನಲ್ಲಿ ಮೈನವಿರೇಳಿಸುವಂತ ನಡೆದ ಕಾರ್ಯಾಚರಣೆ ಹಡಗುಗಳಲ್ಲಿ ನೆರೆದಿದ್ದವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್ . ಕಾಮ್ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
Read More



