ಗೋಡೌನ್ನಲ್ಲಿ ಕೊಳೆಯುತ್ತಿದೆ ಕೋಮುಲ್ನ ಹಾಲಿನ ಪೌಡರ್ ಮತ್ತು ಬೆಣ್ಣೆ
ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮದ ರಾಜ್ಯದಲ್ಲಿ ಹೆಸರು ಮಾಡಿದೆ. ಕೋಮುಲ್ ಹಾಲು ಒಕ್ಕೂಟದಲ್ಲಿ 2100 ಟನ್ ಹಾಲಿನ ಪುಡಿ ಮತ್ತು 800 ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದ್ದು, 80 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಹಾಲು ಉತ್ಪಾದರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
Updated on: Feb 02, 2025 | 8:24 AM

ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವನ್ನು ನಂಬಿ ಸಾವಿರಾರು ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಎಂತಹ ಕಷ್ಟದ ಸಮಯದಲ್ಲೂ ಹೈನೋದ್ಯಮ ಜಿಲ್ಲೆಯ ರೈತರ ಕೈ ಬಿಟ್ಟಿಲ್ಲ. ಕೋಲಾರ ಹೈನೋದ್ಯಮ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ, ಸದ್ಯ ಹಾಲು ಒಕ್ಕೂಟಗಳು ನಷ್ಟದತ್ತ ಸಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಿ ಸುಮಾರು 1200ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಲಕ್ಷಾಂತರ ಕುಟುಂಬಗಳು ಹೈನೋದ್ಯಮದ ಮೇಲೆ ಅವಲಂಭಿತವಾಗಿದ್ದು ಜಿಲ್ಲೆಯಲ್ಲಿ ನಿತ್ಯ ಸುಮಾರು 6 ಲಕ್ಷ ಲೀಟರ್ಗೂ ಹೆಚ್ಚು ಹಾಲು ಉತ್ಪಾದನೆ ಯಾಗುತ್ತಿದೆ. ಹೀಗಿರುವಾಗ, ಕೋಮುಲ್ನ ಹಾಲಿನ ಪೌಡರ್ ಹಾಗೂ ಬೆಣ್ಣೆ ಮಾರಾಟವಾಗದೆ ಟನ್ ಗಟ್ಟಲೆ ಕೆಎಂಎಫ್ನ ಗೋಡೋನ್ನಲ್ಲಿ ಕೊಳೆಯುತ್ತಿದೆ.

ಕೋಮುಲ್ ಕಳೆದ 8 ತಿಂಗಳಿಂದ ನಷ್ಟಕ್ಕೆ ಸಿಲಿಕಿದೆ. ಇದರ ಬೆನ್ನಲ್ಲೇ ಕೋಮುಲ್ನ 2100 ಟನ್ ಹಾಲಿನ ಪೌಡರ್ ಹಾಗೂ 800 ಟನ್ ಬೆಣ್ಣೆ ಮಾರಾಟವಾಗಿಲ್ಲ. 2100 ಟನ್ ಹಾಲಿನ ಪೌಡರ್ನ ಒಟ್ಟು ಮೌಲ್ಯ 50 ಕೋಟಿ ಆಗಿದ್ದು, 800 ಟನ್ ಬೆಣ್ಣೆಯ ಮೌಲ್ಯ ಬರೋಬ್ಬರಿ 30 ಕೋಟಿಯಷ್ಟಿದೆ. ಸುಮಾರು 80 ಕೋಟಿಯಷ್ಟು ಮೌಲ್ಯದ ಹಾಲಿಪುಡಿ ಮತ್ತು ಬೆಣ್ಣೆ ಮಾರಾಟವಾಗದೆ ಇರುವುದು ಕೋಮುಲ್ ಆಡಳಿತ ಮಂಡಳಿಯ ಚಿಂತೆಗೆ ಕಾರಣವಾಗಿದೆ. ಇದು ಕೇವಲ ಕೋಮುಲ್ನ ಕಥೆಯಲ್ಲ, ರಾಜ್ಯದ ಎಲ್ಲ ಒಕ್ಕೂಟದಲ್ಲೂ ಇದೇ ಪರಿಸ್ಥಿತಿ ಇದೆ.

ಕೋಲಾರ ಜಿಲ್ಲೆಯಲ್ಲಿ ನಿತ್ಯ ಸರಿ ಸುಮಾರು ಆರು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಾಸರಿ 11 ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಉತ್ಪಾದನೆಯಾಗುತ್ತಿತ್ತು. ಇಂಥಹ ಸಂದರ್ಭದಲ್ಲಿ ಒಕ್ಕೂಟಕ್ಕೆ ಬಂದ ನೂರರಷ್ಟು ಹಾಲು ಮಾರಾಟವಾಗುತ್ತಿರಲಿಲ್ಲ.

ಹಾಲು, ಮೊಸಲು, ಬೆಣ್ಣೆ, ಹಾಗೂ ಯುಹೆಚ್ಟಿ ಮಿಲ್ಕ್ಗೆ ಹೋಗಿ ಸರಿಸುಮಾರು ಒಂದುವರೆ ಲಕ್ಷ ಲೀಟರ್ನಷ್ಟು ಹಾಲು ಉಳಿಯುತ್ತಿತ್ತು. ಈ ವೇಳೆ ಒಕ್ಕೂಟದ ನಷ್ಟದ ಸುಳಿಗೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಉಳಿದ ಹಾಲನ್ನು ಪೌಡರ್ ಮಾಡಲಾಗುತ್ತಿತ್ತು. ಆದರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ಪೌಡರ್ಗೆ ಬೇಡಿಕೆ ಇಲ್ಲದೆ ಕಾರಣ ಪೌಡರ್ ಗೋಡೌನ್ನಲ್ಲಿ ಹಾಗೆ ಉಳಿದಿದೆ.

ಒಂದು ಕೆ.ಜಿ ಹಾಲಿನ ಪೌಡರ್ ತಯಾರಿಸಲು 240 ರೂಪಾಯಿ ಖರ್ಚು ಆಗುತ್ತದೆ. ಉತ್ಪಾದನೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು, ಬೆಣ್ಣೆಯಿಂದ ತುಪ್ಪ ತಯಾರಿಸುವುದು ಕೂಡ ಒಕ್ಕೂಟಕ್ಕೆ ದುಬಾರಿಯಾಗಿದೆ.

ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕುತ್ತಿರುವ ಬೆನ್ನಲ್ಲೇ ಸರ್ಕಾರ ಈಗಾಗಲೇ ಎರಡು ಬಾರಿ ರೈತರ ಹಾಲಿನ ದರ ಏರಿಕೆ ಮಾಡಿದೆ. ಜೊತೆಗೆ, ಸರ್ಕಾರ ಕಳೆದ 5 ತಿಂಗಳಿನಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಲ್ಲ. ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 44 ಕೋಟಿ ರೂಪಾಯಿ ಪ್ರೋತ್ಸಾಹ ಧನ ಬಾಕಿ ಬರಬೇಕಾಗಿದೆ.

ಸರ್ಕಾರ ಕೂಡಲೇ ಹಾಲು ಒಕ್ಕೂಟಗಳನ್ನು ನಷ್ಟದ ಸುಳಿಯಿಂದ ಪಾರು ಮಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುವುದು ಹಾಲು ಉತ್ಪಾದಕರ ಆಗ್ರಹವಾಗಿದೆ.



















